ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಒಂದು ಭಾಗ ಸಂಚಾರಕ್ಕೆ ಮುಕ್ತ
ಬೆಂಗಳೂರು ಆಗಸ್ಟ 17: ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಬೇಕಿದ್ದ ಬೆಂಗಳೂರು ಹೃದಯ ಭಾಗದಲ್ಲಿನ ಶಿವಾನಂದ ವೃತ್ತ ಉಕ್ಕಿನ ಮೇಲ್ಸೇತುವೆ ಸಂಪೂರ್ಣವಾಗಿ ತೆರೆಯಲಾಗಿಲ್ಲ. ಪದೇ ಪದೆ ಗಡುವು ಮೀರುತ್ತಿರುವ ಬಿಬಿಎಂಪಿ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಸೇತುವೆಯ ಒಂದು ಭಾಗ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.
ಸಾಕಷ್ಟು ಗಡುವುಗಳನ್ನು ಪಡೆದಿದ್ದ ಬಿಬಿಎಂಪಿ ಈ ಭಾರಿ ಆಗಸ್ಟ್ 15ರಂದು ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದಿತ್ತು. ಆದರೆ ಉದ್ದೇಶದಂತೆ ಸ್ಟೀಲ್ ಬ್ರಿಡ್ಜ್ ಅನ್ನು ಸಂಪೂರ್ಣವಾಗಿ ತೆರೆಯುವಲ್ಲಿ ಬಿಬಿಎಂಪಿ ವಿಫಲವಾಗಿದ್ದು, ಕೇವಲ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಮೇಲ್ಸೇತುವೆಯ ನಿರ್ಮಾಣ ಕೆಲಸ ಸಂಪೂರ್ಣವಾಗಿ ಮುಗಿಯದ ಹಿನ್ನೆಲೆ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಒಂದು ಬದಿಯಲ್ಲಿ ರೈಲ್ವೆ ಬ್ರಿಡ್ಜ್ ಕಡೆಗಿನ ಮೇಲ್ಸೇತುವೆ ಡಾಂಬರೀಕರಣ ಬಾಕಿ ಇದೆ. ರ್ಯಾಂಪ್ ಕಾಮಗಾರಿ, ತಡೆಗೋಡೆ ಪೂರ್ಣಗೊಂಡಿದೆ ಎನ್ನಲಾಗಿದೆ.
ಹದಿಮೂರು ತಿಂಗಳ ಗಡುವಿನೊಂದಿಗೆ 2017ರ ಜೂನ್ ನಲ್ಲಿ ಆರಂಭವಾಗಿದ್ದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಕಾಮಗಾರಿ ಐದು ವರ್ಷವಾದರೂ ಕಳೆದರೂ ಸಾರ್ವಜನಿಕ ಉಪಯೋಗಕ್ಕೆ ನೀಡದಿರುವುದು ಸರ್ಕಾರ ಹಾಗೂ ಪಾಲಿಕೆ ಆಡಳಿತ, ಅಭಿವೃದ್ಧಿಗೆ ನೀಡುತ್ತಿರುವ ಮಹತ್ವವನ್ನು ತಿಳಿಸುತ್ತದೆ.
ಪದೇ ಪದೆ ಕಾಮಗಾರಿ ವಿಳಂಬ
ಆರಂಭದಲ್ಲಿ 326-ಮೀಟರ್ ಉದ್ದದ ಮೇಲ್ಸೇತುವೆಯನ್ನು ಸುಮಾರು 19 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ನಂತರ ಅದರ ಉದ್ದವು 493 ಮೀಟರ್ ಏರಿಕೆ ಆಯಿತದಲ್ಲದೇ ವೆಚ್ಚ 40 ಕೋಟಿ ರೂ.ಗಿಂತ ಅಧಿಕವಾಗಬಹುದು ಎಂದು ಅಂದಾಜಿಸಲಾಯಿತು. ಈ ಮಧ್ಯೆ ಕೊರೋನಾ, ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬ, ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲಿದ್ದು ಸೇರಿದಂತೆ ಅನೇಕ ಕಾರಣಗಳಿಂದ ಮೇಲ್ಸೇತುವೆಗೆ ಕಾಮಗಾರಿಯಿಂದ ಮುಕ್ತಿ ಸಿಕ್ಕಿಲ್ಲ, ಐದು ವರ್ಷವಾದರೂ ಕಾಮಗಾರಿ ನಡೆಯುತ್ತಲೇ ಇದೆ.
ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರಿಗೆ ತೊಂದರೆ
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಆಮೆಗತಿಯ ಕಾಮಗಾರಿಯಿಂದ ಚಾಲುಕ್ಯ ವೃತ್ತ, ವಿಧಾನ ಸೌಧ, ರೇಸ್ ಕೋರ್ಸ್ ರಸ್ತೆಯ ಕಡೆಗಿನ ವಾಹನ ಸವಾರರು ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಕ್ಕೆ ತೆರಳಲು ಪರದಾಡುತ್ತಿದ್ದಾರೆ. ನಾಲ್ಕೈದು ನಿಮಿಷ ಹಿಡಿಯುವ ಪ್ರಯಾಣಕ್ಕೆ ಒಮ್ಮೊಮ್ಮೆ 20 ನಿಮಿಷ ಸಂಚಾರ ಸಮಸ್ಯೆ ಅನುಭವಿಸಬೇಕಾದ ಪರಿಸ್ಥಿತಿ ಇದ್ದು, ಆದಷ್ಟು ಬೇಗ ಮೇಲ್ಸೇತುವೆಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ನೀಡಬೇಕು ಎಂದು ವಾಹನ ಸವಾರರೊಬ್ಬರು ತಿಳಿಸಿದರು.
ಕಾಮಗಾರಿಯ ವಸ್ತುಗಳನ್ನು ರಸ್ತೆ ಬದಿ ಹಾಕಿದ್ದರಿಂದ ಸಂಚಾರ ಅಡಚಣೆ, ಧೂಳು, ಮಳೆಗಾಲದಲ್ಲಿ ರೊಚ್ಚೆ ನಿರ್ಮಾಣವಾಗುತ್ತಿತ್ತು. ಇಲ್ಲಿ ರಸ್ತೆ ಪಕ್ಕದ ಬೇಕರಿ, ಟೀ ಶಾಪ್, ಹೋಟೆಲ್ ಮಾಲೀಕರು ನಿತ್ಯ ಒಂದಲ್ಲ ಒಂದು ಕಿರಿಕಿರಿ ಅನುಭವಿಸುತ್ತಿದ್ದಾರೆ. ಯಾವಾಗ ಈಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆಯೋ ಎಂದು ಕಾಯುತ್ತಿದ್ದಾರೆ.