ಬೆಂಗಳೂರು: ಡಾಂಬರೀಕರಣಕ್ಕೆ ಮಳೆ ಅಡ್ಡಿ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ವಿಳಂಬ ಸಾಧ್ಯತೆ
ಬೆಂಗಳೂರು, ಆಗಸ್ಟ್ 10: ಬಹು ನಿರೀಕ್ಷಿತ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇತ್ತು, ಆದರೆ ಮಳೆಯಿಂದಾಗಿ ಕಾಮಗಾರಿ ಮುಗಿಸಲು ಅಡ್ಡಿಯಾಗಿರುವುದರಿಂದ ಉದ್ಘಾಟನೆ ವಿಳಂಬವಾಗಬಹುದು ಎಂದು ಹೇಳಲಾಗಿದೆ.
ಈ ಉಕ್ಕಿನ ಸೇತುವೆಯು ಸಾಮಾನ್ಯವಾಗಿ ಮಲ್ಲೇಶ್ವರಂ, ಮೆಜೆಸ್ಟಿಕ್ ಮತ್ತು ಚಾಲುಕ್ಯ ವೃತ್ತದ ಪ್ರಯಾಣಿಕರಿಂದ ತುಂಬಿರುವ ಶಿವಾನಂದ ವೃತ್ತದ ಸಿಗ್ನಲ್ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಸೇತುವೆ ಉದ್ಘಾಟನೆಗಾಗಿ ಬೆಂಗಳೂರಿನ ವಾಹನ ಸವಾರರು ಕಾತರದಿಂದ ಕಾಯುತ್ತಿದ್ದಾರೆ.
ಭಾರೀ ಮಳೆಗೆ ಬೆಂಗಳೂರಿನಲ್ಲಿ ಬಾಯ್ತೆರೆದ ಮ್ಯಾನ್ಹೋಲ್ಗಳು!
ಈ ಯೋಜನೆಗೆ 2017 ರಲ್ಲಿ ಅಡಿಪಾಯ ಹಾಕಲಾಯಿತು ಮತ್ತು ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುದೀರ್ಘ 5 ವರ್ಷಗಳಷ್ಟು ಸಮಯ ತೆಗೆದುಕೊಂಡಿದೆ. ಕಾಮಗಾರಿ ಪೂರ್ಣಗೊಳಿಸುವ ಸಮಯದಲ್ಲಿ ಹಲವು ಅಡೆ ತಡೆಗಳು ಬಿಬಿಎಂಪಿಗೆ ಎದುರಾದವು. ಅವೆಲ್ಲವನ್ನು ನಿವಾರಣೆ ಮಾಡಿಕೊಂಡು ಅಂತಿಮವಾಗಿ ಕಾಮಗಾರಿ ಬಹುತೇಕ ಪೂರ್ಣವಾಗುವ ಹಂತಕ್ಕೆ ಬಂದಿದೆ.
ಉಕ್ಕಿನ ಸೇತುವೆ 493 ಮೀಟರ್ ಉದ್ದವಾಗಿದೆ. 16 ಕಂಬಗಳನ್ನು ನಿರ್ಮಿಸಲಾಗಿದೆ. ಆರಂಭಿಕವಾಗಿ 19 ಕೋಟಿ ರುಪಾಯಿ ಇದ್ದ ಯೋಜನೆಯ ಒಟ್ಟು ವೆಚ್ಚ ಕಾಮಗಾರಿ ಮುಗಿಯುವ ವೇಳೆಗೆ 39 ಕೋಟಿ ರುಪಾಯಿಗೆ ಬಂದು ನಿಂತಿದೆ.
ತಡರಾತ್ರಿಯ ಧಾರಾಕಾರ ಮಳೆ, ಜಲಾವೃತವಾದ ಬೆಂಗಳೂರು ರಸ್ತೆಗಳು
ಸೇತುವೆ ನಿರ್ಮಾಣಕ್ಕೆ ಹಲವು ಅಡೆತಡೆಗಳು
2017ರಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು ಅಂದುಕೊಂಡಂತೆ ಕಾಮಗಾರಿಯನ್ನು ಮಾಡಲು ಸಾಧ್ಯವಾಗಲಿಲ್ಲ. ಮೊದಲಿದೆ ಸ್ಥಳೀಯ ನಿವಾಸಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ನಡೆಸದಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರಿಂದ ಕಾಮಗಾರಿಗೆ ವಿಘ್ನ ಎದುರಾಯಿತು.
ಸುಪ್ರೀಂ ಕೋರ್ಟ್ 2018 ರಲ್ಲಿ ಅರ್ಜಿಯನ್ನು ವಜಾಗೊಳಿಸಿದ ನಂತರ ಕಾಮಗಾರಿ ಮತ್ತೆ ಆರಂಭವಾಯಿತು. ನಂತರ ಒಂಬತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅಲ್ಲಿಂದ ನಾಲ್ಕು ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ.
ಕೋವಿಡ್ ಸಾಂಕ್ರಾಮಿಕದಿಂದ ಮತ್ತಷ್ಟು ವಿಳಂಬ
ಕಾನೂನು ಅಡೆತಡೆಗಳು ಸುಮಾರು ಎರಡು ವರ್ಷಗಳ ಕಾಲ ಕಾಮಗಾರಿ ಪ್ರಾರಂಭವನ್ನು ವಿಳಂಬಗೊಳಿಸಿದರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಿಂದ ಭೂಸ್ವಾಧೀನ ಮತ್ತು ರಸ್ತೆಯ ಕೆಳಗಿರುವ ನೀರು ಮತ್ತು ಒಳಚರಂಡಿ ಮಾರ್ಗಗಳನ್ನು ಸ್ಥಳಾಂತರಿಸುವಲ್ಲಿನ ಅಡಚಣೆಗಳು ಕಾಮಗಾರಿ ಮುಗಿಸಲು ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಮಾರ್ಚ್ 2020 ರಿಂದ ಸಾಂಕ್ರಾಮಿಕ ಸಮಯದಲ್ಲಿ ಕಾರ್ಮಿಕರ ಕೊರತೆ ಮತ್ತು ಲಾಕ್ಡೌನ್ ತೆಗೆದುಹಾಕಿದ ನಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಹೋದರು. ಅವರು ನಗರಕ್ಕೆ ಮರಳಲು ಹಲವಾರು ತಿಂಗಳುಗಳನ್ನು ತೆಗೆದುಕೊಂಡರು. ಎರಡನೇ ಅಲೆಯ ಸಮಯದಲ್ಲೂ ಇದೇ ಸಮಸ್ಯೆ ಎದುರಿಸಬೇಕಾಯಿತು" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಡಾಂಬರೀಕರಣಕ್ಕೆ ಅಡ್ಡಿಯಾದ ಮಳೆ
ಸೇತುವೆಯ ಉದ್ದವು 550 ಮೀಟರ್ ಗಿಂತ ಹೆಚ್ಚಿರಬೇಕು ಎಂದು ತೀರ್ಮಾನಿಸಲಾಗಿತ್ತು ಆದರೆ ಐಐಎಸ್ಸಿ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಉದ್ದ 493 ಮೀ ಎಂದು ನಿರ್ಧರಿಸಲಾಯಿತು.
ಇಂಡಿಯನ್ ರೋಡ್ ಕಾಂಗ್ರೆಸ್ ಮಾರ್ಗಸೂಚಿಗಳ ಪ್ರಕಾರ ಫ್ಲೈಓವರ್ನ ಎರಡೂ ಬದಿಗಳಲ್ಲಿ ರಾಂಪ್ ಅನ್ನು 35 ಮೀಟರ್ಗೆ ಕಡಿಮೆ ಮಾಡಲಾಗಿದೆ. "ನಾವು ಈ ಮೇಲ್ಸೇತುವೆಯನ್ನು ಆಗಸ್ಟ್ 15 ರೊಳಗೆ ತೆರೆಯಲು ಬಯಸುತ್ತೇವೆ. ಮಳೆಯು ಕೆಲಸಕ್ಕೆ ಅಡ್ಡಿಯಾಗದಿದ್ದರೆ, ಯೋಜನೆಯು ಪೂರ್ಣಗೊಳ್ಳುತ್ತದೆ" ಬಿಬಿಎಂಪಿಯ ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ಅವಸರದಲ್ಲಿ ಡಾಂಬರೀಕರಣ ಮಾಡಿದರೆ ದೀರ್ಘಕಾಲ ಬಾಳಿಕೆ ಬರುವುದಿಲ್ಲ ಆದ್ದರಿಂದ ಮಳೆ ನಿಂತ ಬಳಿಕವೇ ಡಾಂಬರೀಕರಣ ಮಾಡಬೇಕಿದೆ ಎಂದು ಹೇಳಿದ್ದಾರೆ.
ಸೇತುವೆ ಉದ್ಘಾಟನೆಯಿಂದ ಸಂಚಾರ ಸುಗಮ
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಉಕ್ಕಿನ ಸೇತುವೆ ಯೋಜನೆ ಪೂರ್ಣಗೊಂಡ ನಂತರ, ಶಿವಾನಂದ ಸರ್ಕಲ್ ಸಿಗ್ನಲ್ನಲ್ಲಿ ಸಿಲುಕಿಕೊಳ್ಳದೆ ಸುಲಭವಾಗಿ ಮೆಜೆಸ್ಟಿಕ್, ಚಾಲುಕ್ಯ ಸರ್ಕಲ್, ಮಲ್ಲೇಶ್ವರಂ ಮತ್ತು ವಿಧಾನಸೌಧದ ಕಡೆಗೆ ಸುಲಭವಾಗಿ ಸಂಚರಿಸಬಹುದಾಗಿದೆ.
ವಾಹನ ಸವಾರರಿಗೆ ಪ್ರಯಾಣದ ಸಮಯವನ್ನುಕಡಿಮೆ ಮಾಡುತ್ತದೆ ಮತ್ತು ಜನನಿಬಿಡ ರೇಸ್ ಕೋರ್ಸ್ ರಸ್ತೆಯಿಂದ ಶೇಷಾದ್ರಿಪುರಂ ರೈಲ್ವೆ ಕೆಳಸೇತುವೆಯನ್ನು ತಲುಪಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಕರ್ನಾಟಕ ಸರ್ಕಾರವು ಜುಲೈನಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಮೇಲ್ಸೇತುವೆಗೆ ಅಡಿಪಾಯ ಹಾಕಿತ್ತು, ಇದು ಹೊರ ವರ್ತುಲ ರಸ್ತೆ ಮತ್ತು ಕಾರ್ಡ್ ರಸ್ತೆಯ ಪಶ್ಚಿಮಕ್ಕೆ ಕುರುಬರಹಳ್ಳಿ ಪೈಪ್ಲೈನ್ ರಸ್ತೆಗೆ ಸಂಪರ್ಕಿಸುತ್ತದೆ. ಅರ್ಧ ಕಿಲೋಮೀಟರ್ ಮೇಲ್ಸೇತುವೆಯು ವಾಹನಗಳ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ. ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ನಗರದಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಂಚಾರ ದಟ್ಟಣೆಯನ್ನು ನಿವಾರಿಸಲು ರಾಜ್ಯ ಬಿಜೆಪಿ ಸರ್ಕಾರಕ್ಕೆ 40 ತಿಂಗಳ ಗಡುವು ನೀಡಿದ್ದಾರೆ.
Recommended Video