ಶಿವಾನಂದ ಮೇಲ್ಸೇತುವೆ ನವೆಂಬರ್ ಅಂತ್ಯದಿಂದ ಸಾರ್ವಜನಿಕರಿಗೆ ಮುಕ್ತ
ಬೆಂಗಳೂರು, ನವೆಂಬರ್ 02: ಶಿವಾನಂದ ಮೇಲ್ಸೇತುವೆಯು ನವೆಂಬರ್ ಅಂತ್ಯದಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ 15 ದಿನಗಳಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಾನಂದ ವೃತ್ತದ ಬಳಿ 493 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಮೇಲ್ಸೇತುವೆಗೆ 16 ಪಿಲ್ಲರ್ಗಳು ಬರಲಿದ್ದು, ಅದರಲ್ಲಿ ಈಗಾಗಲೇ 15 ಪಿಲ್ಲರ್ಗಳ ಕಾಮಗಾರಿ ಪೂರ್ಣಗೊಂಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಲಮಂಡಳಿಯಿಂದ 450 ಎಂಎಂನ ನೀರಿನ ಪೈಪ್ ಲೈನ್ ಈಗಾಗಲೇ ಬೇರೆಡೆ ಸ್ಥಳಾಂತರಿಸಿದ್ದು, ಅದರಡಿ 700 ಎಂಎಂನ ನೀರಿನ ಪೈಪ್ ಲೈನ್ ಇದ್ದ ಪರಿಣಾಮ ಪಿಲ್ಲರ್ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪೈಪ್ಲೈನ್ ಬದಲಿಸಿದ್ದು, ಪಿಲ್ಲರ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಬಾಕಿಯಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಇತ್ತೀಚೆಗೆ ತಿಳಿಸಿದ್ದರು.
ಈ ಸಂಬಂಧ ದಿನ ನಿತ್ಯದಲ್ಲಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿ, ಆ ಒಂದೆರಡು ದಿನದಲ್ಲಿ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಕೊಂಡು ತ್ವರಿತವಾಗಿ ಯಾವ ಕೆಲಸ ಆಗಬೇಕು ಅದನ್ನು ಮಾಡಿ ಮುಗಿಸಲು ಸೂಚಿಸಿ, ನಿರ್ದಿಷ್ಟ ಹಾಗೂ ತ್ವರಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮೇಲ್ಸೇತುವೆಯ ಎರಡೂ ಕಡೆ ರಸ್ತೆ ದುರಸ್ತಿಪಡಿಸಲಾಗುತ್ತಿದೆ. ರಸ್ತೆ ದುರಸ್ತಿ ಮಾಡಿದ ನಂತರ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಮುಚ್ಚಿರುವ ರಸ್ತೆಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
ಈ ಭಾಗದಲ್ಲಿ ಸಂಚಾರ ದಟ್ಟಣೆಯಾಗದಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಮೇಲ್ಸೇತುವೆ ಅಡಿಯಲ್ಲಿ ಕಾಮಗಾರಿ ಮುಗಿದಿರುವ ಸ್ಥಳದಲ್ಲಿ ಸರ್ವೀಸ್ ರಸ್ತೆಯನ್ನು ಸಾರ್ವಜನಿಕರ ಸಂಪರ್ಕಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
Recommended Video