ಬಸವಣ್ಣ, ಅಲ್ಲಮನಂಥ ಮಹಾನ್ ಚೇತನ ಶಿವಕುಮಾರಸ್ವಾಮಿ: ಚಿ.ಮೂ.
ಬೆಂಗಳೂರು, ಜನವರಿ 21: ಬಸವಣ್ಣ, ಅಲ್ಲಮರಂಥ ಮಹಾನ್ ಚೇತನ ಶಿವಕುಮಾರ ಸ್ವಾಮಿಗಳು. ಇನ್ನು ಮುಂದೆ ಜನರು ಅದೇ ರೀತಿ ಮಾತನಾಡಿಕೊಳ್ಳುವಂತಾಗುತ್ತದೆ ಎಂದರು ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದ ಮೂರ್ತಿ. ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ಒನ್ ಇಂಡಿಯಾ ಕನ್ನಡ ಜತೆ ಅವರು ಮಾತನಾಡಿದರು.
"ನಾನು ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೆ. ಆಗ ಸಿದ್ದಗಂಗಾ ಮಠಕ್ಕೆ ಹೋಗುತ್ತಿದ್ದೆ. ಮಠದಲ್ಲಿ ನಡೆಯುತ್ತಿದ್ದ ಧಾರ್ಮಿಕ ಚಿಂತನೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ" ಎಂದು ಸಿದ್ದಗಂಗಾ ಮಠದ ಜತೆಗಿನ ತಮ್ಮ ನಂಟನ್ನು ತೆರೆದಿಟ್ಟರು.
ಬದುಕನ್ನು ಮುನ್ನಡೆಸುತ್ತಿರುವ ನಡೆದಾಡುವ ದೇವರ ಆಶ್ರಯದಲ್ಲಿ ಕಲಿತ ಪಾಠ
ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತದ ಧಾರ್ಮಿಕ ಪರಂಪರೆಯಷ್ಟೇ ಅಲ್ಲ, ಜಗತ್ತಿನ ನಾನಾ ಧರ್ಮಗಳ ಬಗ್ಗೆ ಅರಿವಿತ್ತು. ಆದರೆ ಅವರು ಹೆಚ್ಚು ಮಾತನಾಡುತ್ತಿದ್ದವರಲ್ಲ. ಮಕ್ಕಳ ಓದಿಗಾಗಿ, ಅವರ ಏಳ್ಗೆಗಾಗಿ ಸ್ವಾಮೀಜಿ ಮಾಡಿದ ಕೆಲಸವನ್ನು ಬರೀ ಮಾತುಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಪುಸ್ತಕವೊಂದರ ರಚನೆ ವೇಳೆ, ಸಿದ್ದಗಂಗಾ ಮಠದಲ್ಲೇ ಉಳಿದುಕೊಳ್ಳಲು ಅವಕಾಶ ನೀಡಿದ ಶಿವಕುಮಾರ ಸ್ವಾಮೀಜಿಯನ್ನು ನೆನಪಿಸಿಕೊಂಡ ಚಿದಾನಂದ ಮೂರ್ತಿ, ಕೃತಿ ರಚನೆ ಮಾಡಲು ಬೆಂಗಳೂರಿನ ಗದ್ದಲದಲ್ಲಿ ಸಾಧ್ಯವಿಲ್ಲ ಎನಿಸಿದಾಗ, ಸಿದ್ದಗಂಗಾ ಮಠದ ಅತಿಥಿ ಗೃಹದಲ್ಲಿ ಉಳಿಯಲು ಅವಕಾಶ ನೀಡಿದ್ದರು. ದಿನದಲ್ಲಿ ತಿಂಡಿ-ಊಟಕ್ಕೆ ಕೂಡ ವ್ಯವಸ್ಥೆ ಆಗಿತ್ತು. ಈ ದಿನ ಎಲ್ಲವೂ ನೆನಪಾಗುತ್ತಿದೆ ಎಂದು ಅವರು ಹೇಳಿದರು.