ಗಾಂಜಾ ಬೇಟೆಗೆ ತೆರಳಿದ್ದ ಶಿವಾಜಿನಗರ ಪೊಲೀಸರು ಅಪಘಾತದಲ್ಲಿ ಸಾವು
ಬೆಂಗಳೂರು, ಜು. 24: ಆಂಧ್ರ ಪ್ರದೇಶದ ಚಿತ್ತೂರು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ನಿದ್ದೆ ಮಂಪರಿನಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಅವಘಡಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನು ಮೃತ ಪೊಲೀಸರಿಗೆ ಪರಿಹಾರ ಹಾಗೂ ಗಾಯಾಳು ಪೊಲೀಸರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪೋತಲಪಟ್ಟು ಮಂಡಲದ ಕೊತ್ತಕೋಟ ರೈಲ್ವೇ ಮೇಲ್ಸೇತುವೆ ಕೆಳಗಿನ ಹೈವೇನಲ್ಲಿ ಭಾನುವಾರ ಬೆಳಗಿನ ಜವ 3 ರಿಂದ 4 ಗಂಟೆ ಅವಧಿಯಲ್ಲಿ ಅಪಘಾತ ಸಂಭವಿಸಿದೆ. ಶಿವಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ್, ಮುಖ್ಯಪೇದೆ ಅನೀಲ್ ಮುಳಿಕ್, ಖಾಸಗಿ ಕಾರು ಚಾಲಕ ಜೋಸೆಫ್ ಸಾವನ್ನಪ್ಪಿದ್ದಾರೆ.
ಅವಿನಾಶ್ ಬೀದರ್ ಜಿಲ್ಲೆಯ ಬಸವಕಲ್ಯಾಣದ ರೋಲವಾಡಿಯ ನಿವಾಸಿ. ಅವಿನಾಶ್ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬದಲ್ಲಿಅಕ್ರಂದನ ಮುಗಿಲು ಮುಟ್ಟಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಳಕೆರೆ ನಿವಾಸಿ ಅನೀಲ್ ಸಾವಿನ ಸುದ್ದಿ ಕೇಳಿ ಅವರ ಪೋಷಕರು ಕುಸಿದು ಬಿದ್ದಿದ್ದಾರೆ. ಅನೀಲ್ ಪುಟ್ಟ ಮನೆಯ ಬಳಿ ಇಡೀ ಗ್ರಾಮಸ್ಥರೆಲ್ಲರೂ ಸೇರಿದ್ದು, ಕಣ್ಣೀರು ಸುರಿಸುತ್ತಿದ್ದಾರೆ.
ಪ್ರೊಬೇಷನರಿ ಪಿಎಸ್ಐ ಆಗಿ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅಮೃತಹಳ್ಳಿ ನಿವಾಸಿ ದೀಕ್ಷಿತ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನು ವೆಲ್ಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇಬ್ಬರೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿಗೆ ಅಗತ್ಯ ಬಿದ್ದಲ್ಲಿ ಬೆಂಗಳೂರಿಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಡಿಸಿಪಿ ಭೇಟಿ; ಇಬ್ಬರು ಪೊಲೀಸ್ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಭೀಮಾ ಶಂಕರ್ ಗುಳೇದ್ ಶಿವಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸಹೋದ್ಯೋಗಿಗಳನ್ನು ಕಳೆದುಕೊಂಡ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ನೀರನ ಮೌನ ಆವರಿಸಿದೆ.
ಪುಲಿಕೇಶಿನಗರ ಎಸಿಪಿ ಅಬ್ದುಲ್ಲಾ ಅವರು ಚಿತ್ತೂರಿಗೆ ತೆರಳಿದ್ದು, ಅಲ್ಲಿನ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ಹಸ್ತಾಂತರಿಸಲಿದ್ದು, ಭಾನುವಾರ ಸಂಜೆ ವೇಳೆಗೆ ಪೋಷಕರಿಗೆ ಒಪ್ಪಿಸಲಾಗುತ್ತಿದೆ.
ವಿಶಾಖಪಟ್ಟಣಂನತ್ತ ಪಯಣ; ಶನಿವಾರ ರಾತ್ರಿ ಬೆಂಗಳೂರಿನಿಂದ ಎರಡು ಕಾರಿನಲ್ಲಿ ತೆರಳಿದ್ದ ಶಿವಾಜಿನಗರ ಪೊಲೀಸರು ಚಿತ್ತೂರು ಬಳಿ ಬೆಳಗಿನ ಜಾವ ತೆರಳುತ್ತಿದ್ದರು. ಇನ್ನೋವಾ ಕ್ರಿಸ್ಟ್ ಕಾರು ಮುಂದೆ ಸಾಗುತ್ತಿತ್ತು. ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ದೊಡ್ಡ ಮಟ್ಟದಲ್ಲಿ ಗಾಂಜಾ ಬರುತ್ತಿರುವ ಮಾಹಿತಿ ಆಧರಿಸಿದ್ದ ಶಿವಾಜಿನಗರ ಪೊಲೀಸರು ಅದರ ಬೇಟೆಗಾಗಿ ತೆರಳಿದ್ದರು.
ಈ ಗಾಂಜಾ ಜಾಲ ಬೇಧಿಸಲು ರೂಪಿಸಿದ ಪ್ಲಾನ್ ನಂತೆ ಇನ್ನೋವಾ ಕಾರು ತೆಗೆದುಕೊಂಡು ತೆರಳಿದ್ದರು. ನಿದ್ದೆ ಮಂಪರಿನಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಇನ್ನೋವಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಇನ್ನೋವಾ ಕಾರು ನುಜ್ಜು ಗುಜ್ಜಾಗಿದ್ದು, ಅತಿ ವೇಗಕ್ಕೆ ಹಿಡಿದ ಕನ್ನಡಿಯಂತಿದೆ.
ಗೃಹ ಸಚಿವರ ಕಂಬನಿ: ಆಂಧ್ರದಲ್ಲಿ ಮಾದಕ ವಸ್ತು ಜಾಡು ಹಿಡಿದು ಎರಡು ಕಾರಿನಲ್ಲಿ ನಮ್ಮ ಬೆಂಗಳೂರು ಪೊಲೀಸರು ತೆರಳಿದ್ದರು. ಅದರಲ್ಲಿ ಪಿಎಸ್ಐ ಸೇರಿ ಮೂವರು ಸಾವನ್ನಪ್ಪಿರುವುದು ದುರ್ದೈವ. ಗಾಯಾಳು ಪೇದೆ ಹಾಗೂ ಪಿಎಸ್ಐಗೆ ಎಲ್ಲಾ ಚಿಕಿತ್ಸೆ ವೆಚ್ಚ ಸರ್ಕಾರ ಭರಿಸಲು ಇಲಾಖೆಗೆ ಸೂಚಿಸಿದ್ದೇನೆ. ಗಾಯಾಳು ಪೇದೆಗಳನ್ನು ವೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರದಿಂದ ಭರಿಸಲು ಈಗಾಗಲೇ ಸೂಚಿಸಿದ್ದೇನೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.