ದರೋಡೆಗೆ ಸಹಕಾರ ನೀಡಿದ ಪೊಲೀಸ್ ಕಾನ್ಸ್ಟೇಬಲ್ ಅಮಾನತು !
ಬೆಂಗಳೂರು, ಡಿಸೆಂಬರ್ 08: ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ಕೂಲಿ ಕಾರ್ಮಿಕರಿಂದ ದರೋಡೆ ಮಾಡಿದ್ದ ಆರೋಪಿಗಳ ಜತೆ ಶಾಮೀಲಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ನನ್ನು ಪೂರ್ವ ವಿಭಾಗದ ಡಿಸಿಡಿ ಡಾ. ಎಸ್.ಡಿ. ಶರಣಪ್ಪ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆಯ ಟೇಬಲ್ ಸಯ್ಯದ್ ಸಮೀವುಲ್ಲಾ ಅಮಾನತು ಆದ ಪೊಲೀಸ್ ಕಾನ್ಸ್ಟೇಬಲ್. ಈತನನ್ನು ವರ್ತೂರು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರು ಶೆಡ್ ಹಾಕಿಕೊಂಡು ವಾಸವಾಗಿದ್ದರು. ನಾವು ಪೊಲೀಸರು ಎಂದು ಹೇಳಿಕೊಂಡು ಶೆಡ್ ಗಳ ಮೇಲೆ ದಾಳಿ ನಡೆಸಿದ್ದ ಗ್ಯಾಂಗ್ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ಅವರ ಬಳಿಯಿದ್ದ ಬಿಡಿಗಾಸು ದೋಚಿ ಪರಾರಿಯಾಗಿದ್ದರು.
ಮನೆ ಮುಂದೆ ಬಿದ್ದಿರುವ ನ್ಯೂಸ್ ಪೇಪರ್ ನಿಂದಲೇ ಕಳ್ಳರಿಗೆ ಸುಳಿವು !
ಹಣ ಕಳೆದುಕೊಂಡು ಹಲ್ಲೆಗೆ ಒಳಗಾಗಿದ್ದ ಕೂಲಿ ಕಾರ್ಮಿಕರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ವರ್ತೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಶಿವಾಜಿನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ಟೇಬಲ್ ಸಯ್ಯದ ಸಮೀವುಲ್ಲಾ ಸೂಚನೆ ಮೇರೆಗೆ ದರೋಡೆ ಮಾಡಿ ಹಲ್ಲೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಆರೋಪಿಗಳಿಗೆ ಸಹಕರಿಸಿ ದರೋಡೆ ಮಾಡಿದ ಆರೋಪ ಕುರಿತು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಿ. ದೇವರಾಜು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅವರಿಗೆ ವರದಿ ನೀಡಿದ್ದರು. ವರದಿ ಹಿನ್ನೆಲೆಯಲ್ಲಿ ಇಂದು ಸಯ್ಯದ್ ಸಮೀವುಲ್ಲ ಆವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಮಾನತಿಗೆ ಒಳಗಾದ ಪೊಲೀಸ್ ಕಾನ್ಸ್ಟೇಬಲ್ ನನ್ನು ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ತಿಳಿಸಿದ್ದರು.
Recommended Video
ಡ್ರಗ್ ಜಾಲದ ಆರೋಪಿಗಳಿಗೆ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯ ಹೆಲ್ ಕಾನ್ಸ್ಟೇಬಲ್ ನನ್ನು ಅಮಾನತು ಮಾಡಲಾಗಿತ್ತು. ಇದಾದ ಬಳಿಕ ಅಸಲಿ ಪೊಲೀಸರ ಸಹಕಾರದೊಂದಿಗೆ ನಕಲಿ ಪೊಲೀಸರು ದಾಳಿ ನಡೆಸಿ ಚಿನ್ನಾಭರಣ ಅಂಗಡಿ ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಆಗಿದ್ದರು. ಇದಕ್ಕೂ ಮೊದಲು ಲಾಡ್ಜ್ ನಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪೊಲೀಸ್ ಪೇದೆಗಳು ಸಿಕ್ಕಿಬಿದ್ದು ಅವರೂ ಸಹ ಅಮಾನತು ಆಗಿದ್ದನ್ನು ಸ್ಮರಿಸಬಹುದು.