ಮುಖಂಡರ ಅಸಹಕಾರ: ಕಾಂಗ್ರೆಸ್ಸಿಗೆ 'ಶಿವಾಜಿನಗರ' ದಲ್ಲಿ ಧರ್ಮಸಂಕಟ
Recommended Video
ಬೆಂಗಳೂರು, ನ 30: ಕಾಂಗ್ರೆಸ್ಸಿನ ಕೆಲವೇ ಕೆಲವು ಮುಖಂಡರು, ಹದಿನೈದು ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಚಾರ ಮಾಡುತ್ತಿದ್ದರೆ, ಹಲವು ಸ್ಥಳೀಯ ಮುಖಂಡರು, ಪ್ರಚಾರಕ್ಕೆ ಬರದೇ ಅಸಹಕಾರ ಮುಂದುವರಿಸಿರುವುದರಿಂದ, ಕಾಂಗ್ರೆಸ್ ಧರ್ಮಸಂಕಟದಲ್ಲಿ ಸಿಲುಕಿದೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ಸಿಗೆ ತೀರಾ ತಲೆನೋವಾಗಿ ಕಾಡಿದ್ದು, ಬೆಂಗಳೂರು ವ್ಯಾಪ್ತಿಯ ಶಿವಾಜಿನಗರ ಕ್ಷೇತ್ರ. ರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡುವ ವಿಚಾರದಲ್ಲಿ ತೀರಾ ವಿರೋಧ ವ್ಯಕ್ತವಾಗಿತ್ತು.
ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್
ಆದರೆ, ಎಲ್ಲಾ ವಿರೋಧವನ್ನು ಮೀರಿ ರಿಜ್ವಾನ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇವರು, ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವವರು.
ಶಿವಾಜಿನಗರ ಕ್ಷೇತ್ರದಲ್ಲಿ ಸ್ಥಳೀಯ ಮತ್ತು ಸಮುದಾಯದ ಮುಖಂಡರು, ರಿಜ್ವಾನ್ ಬೆಂಬಲಕ್ಕೆ ನಿಲ್ಲದೇ ಇರುವುದು, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಹಲವು ಮುಖಂಡರು, ಪ್ರಚಾರ ಆರಂಭವಾಗಿ, ಇಷ್ಟುದಿನವಾದರೂ, ಕ್ಷೇತ್ರದ ಕಡೆ ತಲೆಹಾಕಲಿಲ್ಲ.
ರಿಜ್ವಾನ್ ಪರ ಮತಯಾಚನೆಗೆ ಬಂದಿಲ್ಲ
ಬಹಿರಂಗ ಪ್ರಚಾರಕ್ಕೆ ಇನ್ನೇನು ನಾಲ್ಕು ದಿನ ಉಳಿದಿದೆ. ಆದರೆ, ಕಾಂಗ್ರೆಸ್ಸಿನ ಮೊದಲ ಪಂಕ್ತಿಯ ನಾಯಕರು ರಿಜ್ವಾನ್ ಪರ ಮತಯಾಚನೆಗೆ ಬಂದಿಲ್ಲ. ಸಮುದಾಯದ ನಾಯಕರಿಗೇ ರಿಜ್ವಾನ್ ಅರ್ಷದ್, ಜಯ ಸಾಧಿಸುವುದು ಇಷ್ಟವಿಲ್ಲವೇನೋ ಎನ್ನುವಂತೆ, ಕಾಂಗ್ರೆಸ್ ಪ್ರಚಾರ ಕಳೆಗುಂದುತ್ತಿದೆ. ಡಿ ಕೆ ಶಿವಕುಮಾರ್ ಒಂದು ರೌಂಡ್ ಪ್ರಚಾರ ಮಾಡಿಹೋಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಸರವಣ ಅಬ್ಬರದ ಪ್ರಚಾರ
ಇತ್ತ, ಬಿಜೆಪಿ ಅಭ್ಯರ್ಥಿ ಸರವಣ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಯಡಿಯೂರಪ್ಪ ಫರ್ಮಾನ್ ನಂತೆ, ಪಕ್ಷದ ಎಲ್ಲಾ ಮುಖಂಡರು ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ. ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವಿಚಾರಕ್ಕೆ ಬಂದಾಗ, ಬಿಜೆಪಿ, ಇತರ ಎರಡು ಪಕ್ಷಗಳಿಗಿಂತ ಮುಂದಿದೆ.
ಸಿ.ಎಂ.ಇಬ್ರಾಹಿಂ ವಿದೇಶ ಪ್ರವಾಸ
ರಿಜ್ವಾನ್ ಸಮುದಾಯದ, ಉತ್ತಮ ವಾಗ್ಮಿ ಸಿ.ಎಂ.ಇಬ್ರಾಹಿಂ ಅವರಿಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಆದೇಶವಿದ್ದರೂ, ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಇನ್ನು, ರೆಹಮಾನ್ ಖಾನ್ ಆಗಲಿ ಅಥವಾ ನಸೀರ್ ಅಹಮದ್ ಕೂಡಾ, ಪ್ರಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿಲ್ಲ.
ಯು.ಟಿ.ಖಾದರ್ ಅವರ ಶಿವಾಜಿನಗರ ಪುರಪ್ರವೇಶ ಇನ್ನು ಆಗಬೇಕಷ್ಟೇ
ಪಕ್ಕದ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಕೂಡಾ ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಮಂಗಳೂರು ಎಂಎಲ್ಎ ಯು.ಟಿ.ಖಾದರ್ ಅವರ ಶಿವಾಜಿನಗರ ಪುರಪ್ರವೇಶ ಇನ್ನು ಆಗಬೇಕಷ್ಟೇ. ಹೊಸಪೇಟೆ, ರಾಣೆಬೆನ್ನೂರು, ಹುಣಸೂರು, ಮಹಾಲಕ್ಷ್ಮಿ ಲೇಔಟ್, ವಿಜಯನಗರದಲ್ಲಿ ಖಾದರ್ ಪ್ರಚಾರ ನಡೆಸಿದ್ದಾರೆ.
ದಿನೇಶ್ ಗುಂಡೂರಾವ್ ಅವರ ಪತ್ನಿ ಪ್ರಚಾರದಲ್ಲಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್, ಶಿವಾಜಿನಗರದಲ್ಲಿ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ. ಒಟ್ಟಿನಲ್ಲಿ, ರಿಜ್ವಾನ್ ಅರ್ಷದ್ ಅವರಿಗೆ ನಿರೀಕ್ಷಿತ ಬೆಂಬಲ, ತಮ್ಮ ಪಕ್ಷದ ಮುಖಂಡರಿಂದಲೇ ಸಿಗುತ್ತಿಲ್ಲ. ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಮತ್ತು ಅವರ ಬೆಂಬಲಿಗರು, ಬಿಜೆಪಿಗೆ ಪ್ರಚಾರ ಮಾಡುತ್ತಿದ್ದಾರೆ.