ಶಿವಾಜಿನಗರ : ಕಾಂಗ್ರೆಸ್ ಭದ್ರಕೋಟೆಯಲ್ಲಿ ಸರವಣ ಗೆಲುವು ಸರಳವೇ?
ಬೆಂಗಳೂರು, ನವೆಂಬರ್ 27 : ಬೆಂಗಳೂರು ನಗರದ 4 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಶಿವಾಜಿ ನಗರ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಅನರ್ಹ ಶಾಸಕ ರೋಷನ್ ಬೇಗ್ಗೆ ಟಿಕೆಟ್ ಸಿಕ್ಕಿಲ್ಲ.
ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದೆ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿಲ್ಲ. ಆದರೂ ಪಕ್ಷ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಶಿವಾಜಿನಗರ ಕ್ಷೇತ್ರದ 'ಕೈ' ಟಿಕೆಟ್ ರಿಜ್ವಾನ್ ಪಾಲು
ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅವರು ಇತರ ಅನರ್ಹ ಶಾಸಕರ ಜೊತೆ ಬಿಜೆಪಿಗೆ ಸೇರಿಲ್ಲ. ರೋಷನ್ ಬೇಗ್ ಪಕ್ಷದ ಜೊತೆ ಇದ್ದಾರೆ ಎಂಬ ದೊಡ್ಡ ನಂಬಿಕೆ ಮೇಲೆಯೇ ಬಿಜೆಪಿ ಎಂ. ಸರವಣ ಎಂಬ ಪಕ್ಷಕ್ಕೆ ಹೊಸಬರಾದವರಿಗೆ ಟಿಕೆಟ್ ನೀಡಿದೆ.
15 ಕ್ಷೇತ್ರದ ಉಪ ಚುನಾವಣೆ; ಸಿದ್ದರಾಮಯ್ಯ ಟಾರ್ಗೆಟ್ 10 ಕ್ಷೇತ್ರ
ಶಿವಾಜಿನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ರಿಜ್ವಾನ್ ಅರ್ಷದ್ ಕಣಕ್ಕಿಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸೋಲು ಕಂಡಿದ್ದ ರಿಜ್ವಾನ್ ಅರ್ಷದ್ ವಿಧಾನಸಭೆ ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!
ರೋಷನ್ ಬೇಗ್ ಪ್ರಭಾವ
2013ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ರೋಷನ್ ಬೇಗ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದರು. 2018ರಲ್ಲಿಯೂ ಗೆದ್ದ ಅವರು ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಅಸಮಾಧಾನಗೊಂಡಿದ್ದರು. ಲೋಕಸಭಾ ಚುನಾವಣೆ ಬಳಿಕ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡು, ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರೂ ಅಧಿಕೃತವಾಗಿ ಬಿಜೆಪಿ ಸೇರಿಲ್ಲ. ಬಿಜೆಪಿಯ ಎಂ. ಸರವಣಗೆ ರೋಷನ್ ಬೇಗ್ ಬೆಂಬಲವೇ ಶ್ರೀರಕ್ಷೆ. ಚುನಾವಣಾ ಕಣಕ್ಕಿಳಿಯದಿದ್ದರೂ ರೋಷಬ್ ಬೇಗ್ ಪ್ರಭಾವ ಕ್ಷೇತ್ರದಲ್ಲಿ ಸಾಕಷ್ಟಿದೆ.
ಹೊಸಬರಿಗೆ ಟಿಕೆಟ್ ಬಿಜೆಪಿ ಲೆಕ್ಕಾಚಾರ
ಬಿಜೆಪಿ ಎಂ. ಸರವಣ ಎಂಬ ಹೊಬರಿಗೆ ಉಪ ಚುನಾವಣೆ ಟಿಕೆಟ್ ನೀಡಿದೆ. ಹಲವು ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದ ಸರವಣ ಈಗ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎಂ. ಕಟ್ಟಾಸುಬ್ರಮಣ್ಯ ನಾಯ್ಡು 44,702 ಮತಗಳನ್ನು ಪಡೆದು ರೋಷನ್ ಬೇಗ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ರೋಷನ್ ಬೇಗ್ ಪ್ರಭಾವ, ಬಿಜೆಪಿಯ ಮತಗಳು ಒಟ್ಟಾಗಿ ಕ್ಷೇತ್ರದಲ್ಲಿ ಕಮಲ ಅರಳಲಿದೆಯೇ? ಕಾದು ನೋಡಬೇಕು.
ರಿಜ್ವಾನ್ ಅರ್ಷದ್ ಕಾಂಗ್ರೆಸ್ ಅಭ್ಯರ್ಥಿ
ತಮಿಳುಭಾಷಿಕರು, ಮುಸ್ಲಿಂ ಸಮುದಾಯದವರು ಹೆಚ್ಚಿರುವ ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ರಿಜ್ವಾನ್ ಅರ್ಷದ್ ವಿಧಾನ ಪರಿಷತ್ ಸದಸ್ಯರು. ಈ ಬಾರಿ ಶಿವಾಜಿನಗರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ನಾಯಕರು ಕ್ಷೇತ್ರ ಗೆಲ್ಲಬೇಕು ಎಂದು ಪಣ ತೊಟ್ಟಿದ್ದಾರೆ.
ಜೆಡಿಎಸ್ಗೆ ನೆಲೆಯೇ ಇಲ್ಲ
ಶಿವಾಜಿನಗರ ಕ್ಷೇತ್ರದಲ್ಲಿ ಜೆಡಿಎಸ್ಗೆ ನೆಲೆಯೇ ಇಲ್ಲ. ಕಳೆದ ಬಾರಿ ಶೇಖ್ ಮಸ್ತಾನ್ ಅಲಿ 1,313 ಮತಗಳನ್ನು ಮಾತ್ರ ಪಡೆದಿದ್ದರು. 2013ರಲ್ಲಿ ಅಬ್ಭಾಸ್ ಅಲಿ 5,983 ಮತಗಳನ್ನು ಪಡೆದಿದ್ದರು. ಅಭ್ಯರ್ಥಿಯನ್ನು ಬದಲಾವಣೆ ಮಾಡುವ ಮೂಲಕ ಜೆಡಿಎಸ್ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸಿದೆ. ಈ ಬಾರಿ ತನ್ವೀರ್ ಅಹಮದ್ ಪಕ್ಷದ ಹುರಿಯಾಳು.
ಕ್ಷೇತ್ರದ ಚುನಾವಣಾ ಚಿತ್ರಣ
ಕ್ಷೇತ್ರದಲ್ಲಿ ಒಟ್ಟು 1,96,776 ಮತದಾರರು ಇದ್ದಾರೆ. 99,969 ಪುರುಷರು, 96,803 ಮಹಿಳೆಯರು, 4 ಇತರ ಮತದಾರರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ವಾರ್ಡ್ಗಳಿವೆ. ಕಾಂಗ್ರೆಸ್ 5 ಸದಸ್ಯರನ್ನು ಹೊಂದಿದೆ. ಬಿಜೆಪಿ ಕೇವಲ 2 ವಾರ್ಡ್ಗಳಲ್ಲಿ ಅಧಿಕಾರದಲ್ಲಿದೆ. ಬಿಜೆಪಿ ಅಭ್ಯರ್ಥಿ ಸರವಣ ಅವರ ಪತ್ನಿ ಬಿಬಿಎಂಪಿಯಲ್ಲಿ ಪಕ್ಷೇತರ ಸದಸ್ಯೆ.