ಪರಿಹಾರವೇ ಸಿಗದ ಸಮಸ್ಯೆಯಾಗಿದ್ದರು ಶೀರೂರು ಶ್ರೀ : ಜಯರಾಮಾಚಾರ್ಯ
ಯತಿ ಧರ್ಮ ಪಾಲನೆ ವಿಚಾರವಾಗಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಬಗ್ಗೆ ಆಕ್ಷೇಪ ಮಾಡಬಹುದು. ಅದು ಯಾವ ಕಾರಣಕ್ಕೆ? ಅವರು ಸಮುದ್ರ ಲಂಘನ ಮಾಡಿದ್ದಾರೆ ಎಂಬ ಕಾರಣಕ್ಕೆ. ಅಂದರೆ ಅದು ಕೂಡ ಧರ್ಮ ಪ್ರಸಾರದ ಉದ್ದೇಶದಿಂದ ಅಷ್ಟೇ. ಶೀರೂರು ಶ್ರೀಗಳ ವಿಚಾರದಲ್ಲಿ ಉಲ್ಲಂಘನೆ ಎಂಬ ಮಾತೇ ಬಹಳ ಚಿಕ್ಕದಾಗಿಬಿಡುತ್ತದೆ ಎಂದು ಒಂದು ಕ್ಷಣ ಸುಮ್ಮನಾದರು ಕಬ್ಯಾಡಿ ಜಯರಾಮಾಚಾರ್ಯ.
ಕಬ್ಯಾಡಿ ಜಯರಾಮಾಚಾರ್ಯರು ಜ್ಯೋತಿಷಿಗಳು, ಅಧ್ಯಾತ್ಮ ಚಿಂತಕರು. ಜತೆಗೆ ಉಡುಪಿಯ ಎಲ್ಲ ಅಷ್ಟ ಮಠಗಳ ಬಗ್ಗೆ ಗೌರವ ಇರಿಸಿಕೊಂಡವರು ಮತ್ತು ಎಲ್ಲ ಯತಿಗಳನ್ನು ಕೂಡ ಹತ್ತಿರದಿಂದ ಕಂಡವರು. ಆಯಾ ಮಠದ ಪೀಠದ ಬಗ್ಗೆ ತುಂಬ ಪ್ರೀತಿಯಿಂದ ಹಾಗೂ ತಪ್ಪುಗಳು ಕಂಡುಬಂದಾಗ ಮುಲಾಜಿಲ್ಲದೆ ಹೇಳುವಂಥವರು.
ಶೀರೂರು ಶ್ರೀ ಅಗಲಿಕೆ, ಅನುಮಾನ, ನಿಗೂಢತೆ, ತನಿಖೆ... ಟೈಮ್ ಲೈನ್
ಅಂಥ ಕಬ್ಯಾಡಿ ಜಯಾರಾಮಾಚಾರ್ಯರು 'ಒನ್ಇಂಡಿಯಾ ಕನ್ನಡ'ಕ್ಕೆ ಮಾತಿಗೆ ಸಿಕ್ಕಾಗ, ಉಡುಪಿಯಲ್ಲಿ ಕಳೆದಂಥ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುವ ಜತೆಗೆ ಶೀರೂರು ಮಠದ ಲಕ್ಷ್ಮೀವರ ತೀರ್ಥರನ್ನು, ಅವರ ಬಾಲ್ಯ, ಬೆಳವಣಿಗೆಯನ್ನು ಕೂಡ ಮನಸ್ಸಿನಲ್ಲಿ ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದಾರೆ. ಆ ಪೈಕಿ ಆಯ್ದ ಭಾಗವನ್ನು ನಿಮ್ಮ ಎದುರಿಗೆ ಇಡಲಾಗಿದೆ.
ಬಾಲ್ಯದ ದಿನಗಳು ಹೀಗಿದ್ದವು
ಲಕ್ಷ್ಮೀವರ ತೀರ್ಥರಿಗೆ ಮುನ್ನ ಶೀರೂರು ಮಠಕ್ಕೆ ಪೀಠಾಧಿಪತಿ ಆಗಿದ್ದವರು ಇದೇ ಶ್ರೀಗಳ ಪೂರ್ವಾಶ್ರಮದ ಅಣ್ಣ. ಆ ನಂತರ ಲಕ್ಷ್ಮೀವರರು ಬಂದರು. ಅವರ ಬಾಲ್ಯದ ದಿನಗಳಲ್ಲಿ ತುಂಬ ಚುರುಕಾದ ಹುಡುಗರೇನಾಗಿರಲಿಲ್ಲ. ಅದರರ್ಥ, ಸನ್ಯಾಸಿಗಳಲ್ಲಿ ಇರಬೇಕಾದ ಚಿಂತನೆಗಳು ಅವರಲ್ಲಿ ಇರಲಿಲ್ಲ. ಅದೇ ವೇಳೆಗೆ ಸನ್ಯಾಸ ಸ್ವೀಕರಿಸಿದ ನಂತರ ಹೇಗೆ ನಡವಳಿಕೆ ಇರಬೇಕು ಎಂಬ ಬಗ್ಗೆ ಕೂಡ ಹೆಚ್ಚಿನ ಜ್ಞಾನ ಇರಲಿಲ್ಲ. ನಾನೇ ಅವರೆದುರು ಹೋದಾಗಲೂ ಎರಡೂ ಕೈ ಜೋಡಿಸಿ ನಮಸ್ಕರಿಸಿದ್ದರು. ನೀವು ಸ್ವಾಮಿಗಳು. ಹೀಗೆ ಮಾಡಬಾರದು ಅಂದಾಗ, ನೀವು ನನಗಿಂತ ಹಿರಿಯರು. ಅದಕ್ಕಾಗಿಯೇ ನಮಸ್ಕರಿಸಿದೆ ಎನ್ನುತ್ತಿದ್ದರು. ಅದು ಅವರ ಅಮಾಯಕತೆ ಅಥವಾ ತಿಳಿವಳಿಕೆ ಮಟ್ಟ ಎಂಬುದು ನನ್ನ ಅಂದಾಜಾಗಿತ್ತು.
ಪೂರ್ವಾಶ್ರಮದ ಸಂಬಂಧಿಗಳ ಮುಚ್ಚಟೆ ಹೆಚ್ಚಾಯಿತು
ಆದರೆ, ಶೀರೂರು ಶ್ರೀಗಳಿಗೆ ಹದಿನೈದು ವರ್ಷ ತುಂಬಿದ ನಂತರ ಬದಲಾವಣೆ ಕಾಣಲು ಆರಂಭವಾಯಿತು. ಮೀಸೆ ಚಿಗುರುತ್ತಿದ್ದ, ಯೌವನದ ದಿನಗಳು ಅವು. ಉಡುಪಿಯೊಳಗೆ ಅವರ ಬಗ್ಗೆ ಏನೇನೋ ಮಾತುಗಳು ಕೇಳಲಾರಂಭಿಸಿದವು. ಮಠದೊಳಗೆ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಂಬಂಧಿಗಳೇ ಹೆಚ್ಚಿದ್ದರಿಂದ ಮುಚ್ಚಟೆ ಜಾಸ್ತಿಯಾಯಿತು ಎಂಬ ಮಾತುಗಳು ಕೇಳಿಬಂದವು. ಆರೋಪಗಳ ಪೈಕಿ ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂದು ಪರೀಕ್ಷೆ ಮಾಡಬೇಕಾದ ಸನ್ನಿವೇಶ ಕೂಡ ಇರಲಿಲ್ಲ.
ಶೀರೂರು ಶ್ರೀಗಳ ಆಪ್ತೆ ಪರಾರಿಯಾಗಲು ಯತ್ನಿಸಿದ್ದು ಯಾಕೆ ಗೊತ್ತಾ?
ಬೇಜವಾಬ್ದಾರಿ ಗೃಹಸ್ಥರಿಗಿಂತ ಸನ್ಯಾಸಿಯೇ ಕಳಪೆಯಾದರೆ...
ಪರಂಪರೆಯಿರುವ ಯಾವುದೇ ಮಠ ಹಾಗೂ ಸ್ವಾಮಿಗಳಿಗೆ ಅನುಯಾಯಿಗಳು, ಭಕ್ತರು ಖಂಡಿತಾ ಇರುತ್ತಾರೆ. ಆ ಮಠಕ್ಕೆ ನಡೆದುಕೊಳ್ಳುವವರು ಪೂರ್ವಾಪರ ಆಲೋಚಿಸದೆ ಗೌರವ ಕೊಡುತ್ತಾರೆ. ಆದರೆ ಒಬ್ಬ ಬೇಜವಾಬ್ದಾರಿ ಗೃಹಸ್ಥನ ನಡವಳಿಕೆಗಿಂತ ಸನ್ಯಾಸಿಯಾದವರು ಕಳಪೆಯಾಗಿ ವರ್ತಿಸುವುದು ಹಾಗೂ ಸನ್ಯಾಸಿ ಸ್ಥಾನದ ಗೌರವ ಕಾಪಾಡಿಕೊಳ್ಳದೆ ಇರುವುದು ಕ್ಷಮೆಗೆ ಅರ್ಹವೇ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಶೀರೂರು ಶ್ರೀಗಳ ವಿಚಾರದಲ್ಲಿ ಆಗಿದ್ದು ಅದೇ.
ಶೀರೂರು ಮಠದೊಳಗೇ ಅಸಮಾಧಾನವಿತ್ತು
ಶ್ರೀಗಳ ನಡವಳಿಕೆ ಬಗ್ಗೆ ಶೀರೂರು ಮಠದೊಳಗೇ ಅಸಮಾಧಾನವಿತ್ತು. ಒಂದು ಕಾಲದಲ್ಲಿ ಲಕ್ಷ್ಮೀವರರ ಗುಣದಲ್ಲಿ ಬದಲಾವಣೆ ಆಗಲಿ ಎಂದು ಬೇಡಿಕೊಂಡು ಸುದರ್ಶನ ಹೋಮ ಸಹ ಮಾಡಿದ್ದಿದೆ. ಆ ನಂತರವೂ "ನಾನು ಸುಧಾರಣೆ ಆಗುವ ಪೈಕಿ ಅಲ್ಲ" ಎಂದು ಸ್ವತಃ ಲಕ್ಷ್ಮೀವರರೇ ಹೇಳಿದ್ದಿದೆ. ಆಗ ಆ ಪೀಠದಲ್ಲಿ ಬೇರೆಯವರನ್ನು ಕೂರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಆ ವಿಚಾರ ಹಾಗೇ ಕರಗಿಹೋಯಿತು. ಲಕ್ಷ್ಮೀವರ ತೀರ್ಥರು ಆರೋಪ ಮಾಡಿದ್ದಾರೆ ಎನ್ನಲಾದ ಆಡಿಯೋ -ವಿಡಿಯೋಗಳು ಸುಮ್ಮನೆ ಲೋಕಾಭಿರಾಮಕ್ಕೆ ಮಾತನಾಡಲು ಸಹ ಅರ್ಹವಾದ ಸಂಗತಿಯಲ್ಲ. ಅಷ್ಟ ಮಠದ ಇತರ ಯತಿಗಳು ತಮ್ಮ ಸನ್ಯಾಸ ಧರ್ಮವನ್ನು ಶುದ್ಧವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು ಯತಿ ಧರ್ಮ ಪಾಲನೆ ವಿಚಾರದಲ್ಲಿ ಮಾತೇ ಆಡಬಾರದು ಎಂಬ ಸ್ಥಿತಿಯಲ್ಲಿ ಇದ್ದದ್ದು ಶೀರೂರು ಮಠದ ಶ್ರೀಗಳೇ. ಈಗ ಅವರ ಮರಣೋತ್ತರ ವರದಿಯಲ್ಲಿ ಏನು ಬಂದಿರಬಹುದು ಎಂದು ಊಹಿಸುವುದು ಸಹ ಕಷ್ಟವಲ್ಲ. ಆದರೆ ಈ ಬಗ್ಗೆ ಇನ್ನು ಹೆಚ್ಚು ಹೇಳದಿರುವುದೇ ಉತ್ತಮ.
ಅಷ್ಟ ಮಠದ ಇತರ ಯತಿಗಳಿಗೆ ಅವಮಾನ ಮಾಡಬಾರದು
ಆದರೆ, ಶೀರೂರು ಶ್ರೀಗಳ ಪ್ರಕರಣ ಮುಂದು ಮಾಡಿಕೊಂಡು, ಅವರು ಹೇಳಿದ್ದರು ಎಂಬ ಆಡಿಯೋ- ವಿಡಿಯೋಗಳನ್ನು ತೋರಿಸುತ್ತಾ ಪೇಜಾವರ ಶ್ರೀಗಳಂಥ ಹಿರಿಯರೂ ಸೇರಿದ ಹಾಗೆ ಇತರ ಮಠದ ಯತಿಗಳಿಗೆ ಅವಮಾನ ಮಾಡುವುದು ಅಥವಾ ಆ ಯತಿಗಳ ಬಗ್ಗೆ ಅನುಮಾನ ಪಡುವುದು ಸರ್ವಥಾ ಸರಿಯಲ್ಲ. ಉಡುಪಿಯಲ್ಲಿ ಜಾತಿ- ಧರ್ಮಗಳನ್ನೂ ಮೀರಿ ಕೃಷ್ಣ ಮಠಕ್ಕೆ ನಡೆದುಕೊಳ್ಳುವ ಭಕ್ತರಿದ್ದಾರೆ. ಆ ಭಕ್ತಿಯನ್ನು ಮತ್ತು ಆ ಮೂಲಕ ಬಂದಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಗೌರವ ಪೂರ್ವಕ ಯತಿಗಳೂ ಇದ್ದಾರೆ. ಶೀರೂರು ಶ್ರೀಗಳ ಪ್ರಕರಣದಂಥದ್ದು ದುರದೃಷ್ಟ, ನಡೆಯಬಾರದಿತ್ತು. ಇನ್ನು ಮುಂದೆ ನಡೆಯದಿರುವಂತೆ ಎಚ್ಚರ ವಹಿಸಲಿ ಎಂಬುದು ನನ್ನ ಅಪೇಕ್ಷೆ ಎಂದು ಮಾತು ಮುಗಿಸಿದರು ಕಬ್ಯಾಡಿ ಜಯರಾಮಾಚಾರ್ಯ.