ಬೆಂಗಳೂರಲ್ಲಿ ಸರಣಿ ಕೊಲೆ: ಎಲ್ಲಿದೆ ಕಾನೂನು ಸುವ್ಯವಸ್ಥೆ: ಶೆಟ್ಟರ್
ಬೆಂಗಳೂರು, ಫೆಬ್ರವರಿ 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ನಗರ ಇದೀಗ ಉದ್ಯಾನನಗರದ ಬದಲು ಮರ್ಡರ್ ನಗರವಾಗಿ ಮಾರ್ಪಟ್ಟಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.
ಛಲವಾದಿ ಪಾಳ್ಯದ ಕಾರ್ಪೊರೇಟರ್ ರೇಖಾ ಅವರ ಪತಿ ಬಿಜೆಪಿ ಕಾರ್ಯಕರ್ತರಾಗಿದ್ದ ಕದಿರೇಶ ಅವರನ್ನು ಹಾಡುಹಗಲೇ ಹತ್ಯೆ ನಡೆದಿದೆ. ಕದಿರೇಶ ಅವರ ಅಂತಿಮ ದರ್ಶನಕ್ಕೆ ತೆರಳಿರುವ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಮಾತನಾಡಿ, ಬೆಂಗಳೂರಿನಲ್ಲಿ ಸರಣಿ ಹತ್ಯೆ ನಡೆಯುತ್ತಿದೆ ಆದರೆ ಕೊಲೆಗಾರರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರ ವಿಫಲವಾಗಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರ್ಗಿ ಅವರ ಹತ್ಯೆಮಾಡಿದ ಕೊಲೆಗಾರರನ್ನು ಇದುವರೆಗೂ ಬಂಧಿಸಲು ಸಾಧ್ಯವಾಗಿಲ್ಲ. ಕದಿರೇಶ್ ಕೊಲೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕದಿರೇಶ್ ಹತ್ಯೆ ನೋವಿನ ಸಂಗತಿ, ಹತ್ಯೆಯಲ್ಲಿ ರಾಜಕೀಯ ಬೆರೆಸಬೇಡಿ, ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸುತ್ತಾರೆ ಎಂದು ಹೇಳಿದರು.
ಕದಿರೇಶ್ ಕೊಲೆ ವಿಚಾರ ಕೇಳಿ ಅಂಗನವಾಡಿಯಲ್ಲಿ ಕೆಲಸ ಮಾಡುವ ಶಾಂತಮ್ಮ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರನ್ನು ತಕ್ಷಣವೇ ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.