ಭಾನುವಾರ ಉತ್ತರಾದಿಮಠದಲ್ಲಿ ಶತಕೋಟಿ ಗಾಯತ್ರಿ ಜಪ
ಬೆಂಗಳೂರು, ಜುಲೈ 24 : ಹತ್ತು ಸಾವಿರಕ್ಕೂ ಹೆಚ್ಚು ಪುರುಷರಿಂದ ಶತಕೋಟಿ ಗಾಯತ್ರಿ ಮಂತ್ರ ಮತ್ತು ಸಹಸ್ರಾರು ಮಹಿಳೆಯರಿಂದ ದಶಲಕ್ಷ ರಾಮಕೃಷ್ಣ ಜಪಕ್ಕೆ ಬೆಂಗಳೂರಿನಲ್ಲಿರುವ ಉತ್ತರಾದಿಮಠ ಅಣಿಯಾಗಿದೆ.
ಆಷಾಢ ಶುದ್ಧ ದಶಮಿ, ಭಾನುವಾರ ಜುಲೈ 26ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ಬಳಿಯಿರುವ ಉತ್ತರಾದಿಮಠದಲ್ಲಿ, ಇಂಥದೊಂದು ಧಾರ್ಮಿಕ ಕಾರ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಕಾರ್ಯದೊಂದಿಗೆ ಚಾತುರ್ಮಾಸ್ಯ ಆರಂಭವಾಗಲಿದೆ.
ಉತ್ತರಾದಿಮಠದ ಶ್ರೀಗಳಾದ ಸತ್ಯಾತ್ಮತೀರ್ಥರ ದಿವ್ಯ ಸನ್ನಿಧಿ ಮತ್ತು ಅಧ್ಯಕ್ಷತೆಯಲ್ಲಿ, ಪ್ರಾತಃಕಾಲ 7ರಿಂದ 9ರವರೆಗೆ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಪ್ರತಿ ಪುರುಷ ಸಾವಿರ ಬಾರಿ ಗಾಯತ್ರಿ ಜಪ ಮಾಡಿದರೆ, ಪ್ರತಿ ಮಹಿಳೆ ಸಾವಿರ ಬಾರಿ ರಾಮಕೃಷ್ಣ ಜಪ ಮಾಡಲಿದ್ದಾರೆ.
ಜಪಕ್ಕೆ ಬರುವವರು ಶುದ್ಧವಸ್ತ್ರ ಧರಿಸಿ, ಜಪಕ್ಕೆ ಬೇಕಾಗುವ ಜಪಮಾಲೆ, ಆಚಮನಕ್ಕೆ ಮತ್ತು ಸಂಕಲ್ಪಕ್ಕೆ ಬೇಕಾಗುವ ಪಾತ್ರೆಗಳು, ಬೇಕಿದ್ದರೆ ಕೂಡಲು ಆಸನಗಳನ್ನು ತರಬೇಕಾಗಿ ಉತ್ತರಾದಿಮಠದ ಆಯೋಜಕರು ಭಕ್ತಾದಿಗಳನ್ನು ಕೇಳಿಕೊಂಡಿದ್ದಾರೆ.
ಗಾಯತ್ರಿ ಮಂತ್ರದ ಮಹತ್ವ : ಋಗ್ವೇದದಲ್ಲಿ ಬ್ರಹ್ಮರ್ಷಿ ವಿಶ್ವಾಮಿತ್ರರಿಂದ ಹೊಮ್ಮಿದೆ ಎಂದು ನಂಬಲಾಗಿರುವ ಗಾಯತ್ರಿ ಮಂತ್ರ ಜಪಿಸಿದರೆ ಸಂಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂದು ಆಸ್ತಿಕರು ನಂಬುತ್ತಾರೆ. ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೋ ಅದೇ ಗಾಯತ್ರಿ ಮಂತ್ರ ಎಂದು ಪ್ರಾಜ್ಞರು ಹೇಳುತ್ತಾರೆ.
ಗಾಯತ್ರಿ ಮಂತ್ರದ ಅರ್ಥ : ಓಂ ಭೂರ್ಭುವಃ ಸ್ವಃ ತತ್ ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೊ ಯೊ ನಃ ಪ್ರಚೋದಯಾತ್. ಇದರ ಅರ್ಥ ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ.
ಸೋಮವಾರ ತಪ್ತ ಮುದ್ರಾಧಾರಣೆ : ಮರುದಿನ ಸೋಮವಾರ, ಆಷಾಡ ಶುದ್ಧ ಏಕಾದಶಿಯಂದು ಶ್ರೀ ಸತ್ಯಾತ್ಮತೀರ್ಥರು ಸಹಸ್ರಾರು ಮಧ್ವಮತ ಅನುಯಾಯಿಗಳಿಗೆ ತಪ್ತ ಮುದ್ರೆಯನ್ನು ನೀಡಲಿದ್ದಾರೆ. ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ.