ಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕ
ಬೆಂಗಳೂರು, ಅಕ್ಟೋಬರ್ 09: ಅತೃಪ್ತ ಶಾಸಕರಿಗೆ ಅನುಕೂಲ ಮಾಡಿಕೊಡಲೆಂದು ಅತೃಪ್ತ ಶಾಸಕರ ಕ್ಷೇತ್ರಗಳ ಸೋತ ಬಿಜೆಪಿ ಅಭ್ಯರ್ಥಿಗಳಿಗೆ ಯಡಿಯೂರಪ್ಪ ಅವರು ನಿಗಮ ಮಂಡಳಿ ಸ್ಥಾನದ 'ಉಡುಗೊರೆ' ನೀಡಿದ್ದರು, ಆದರೆ ಇದನ್ನು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಆಗಿದ್ದ ಶರತ್ ಬಚ್ಚೇಗೌಡ ಅವರು ತಿರಸ್ಕರಿಸಿದ್ದಾರೆ.
ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರಿಗೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ನಿಶ್ಚಯ ಆಗಿದೆ. ಆದರೆ ಕಳೆದ ಬಾರಿ ಇದೇ ಕ್ಷೇತ್ರದಿಂದ ಎಂಟಿಬಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಅವರು ಇದಕ್ಕೆ ಆಕ್ಷೇಪ ಎತ್ತಿ ಬಂಡಾಯದ ಸೂಚನೆ ನೀಡಿದ್ದರು. ಅವರನ್ನು ಸಮಾಧಾನಪಡಿಸಲೆಂದು ಯಡಿಯೂರಪ್ಪ ಅವರು ಶರತ್ ಬಚ್ಚೇಗೌಡ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಇದನ್ನು ಸ್ವೀಕರಿಸಲು ಶರತ್ ಬಚ್ಚೇಗೌಡ ನಿರಾಕರಿಸಿದ್ದಾರೆ.
ಹೊಸಕೋಟೆ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಯೂ ಆಗಿರುವ ಶರತ್ ಬಚ್ಚೇಗೌಡ ಅವರು ಇಂದು ಹೊಸಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. 'ಮುಂಬರುವ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿರುವ ಕಾರಣ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ' ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.
'ಯಡಿಯೂರಪ್ಪ ಅವರು ವಿಶ್ವಾಸವಿಟ್ಟು ಸ್ಥಾನ ನೀಡಿದ್ದಾರೆ'
'ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ, ಅವರಿಗೆ ನಾನು ಆಭಾರಿಯಾಗಿದ್ದೇನೆ, ಆದರೆ ನನಗೆ ಈ ಸ್ಥಾನ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ'' ಎಂದು ಅವರು ಹೇಳಿದ್ದಾರೆ.
ಯಾವುದೇ ಸ್ವಾಭಿಮಾನಿ ದಳ ರಚನೆ ಮಾಡಿಲ್ಲ: ಶರತ್ ಬಚ್ಚೇಗೌಡ
''ನಾನು ಯಾವುದೇ ಸ್ವಾಭಿಮಾನಿ ದಳ ರಚನೆ ಮಾಡಿಲ್ಲ, ತಾಲ್ಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ, ಉಪಚುನಾವಣೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ, ತಾಲ್ಲೂಕಿನ ಜನ ನನ್ನ ಪರ ಒಲವು ಹೊಂದಿದ್ದಾರೆ'' ಎಂದು ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು: ಬಿಜೆಪಿಯಲ್ಲಿ ಕೆಂಪು ಬಾವುಟ
ಸುಪ್ರೀಂ ತೀರ್ಪಿನ ನಂತರ ನನ್ನ ನಿರ್ಣಯ ಪ್ರಕಟಿಸುವೆ: ಶರತ್ ಬಚ್ಚೇಗೌಡ
''ಎಂಟಿಬಿ ನಾಗರಾಜು ಈ ವರೆಗೆ ಯಾವುದೇ ಪಕ್ಷ ಸೇರ್ಪಡೆ ಆಗಿಲ್ಲ, ಅವರಿಗೆ ಬಿಜೆಪಿ ಟಿಕೆಟ್ ನೀಡುವ ವಿಚಾರವನ್ನು ವರಿಷ್ಠರು ನಿರ್ಧರಿಸುತ್ತಾರೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಬಳಿಕ ವಿಷಯ ಅಂತಿಮವಾಗಲಿದೆ, ಆಗ ನನ್ನ ತೀರ್ಮಾನ ಪ್ರಕಟಿಸುತ್ತೇನೆ' ಎಂದು ಅವರು ಹೇಳಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿರುವ ಶರತ್
ಕಳೆದ ಹೊಸಕೋಟೆ ವಿಧಾನಸಭೆ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರು ಬಿಜೆಪಿ ಪರವಾಗಿ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧಿಸಿದ್ದರು. ಎಂಟಿಬಿ ನಾಗರಾಜ್ ಅವರು 7597 ಮತಗಳ ಅಂತರದಿಂದ ಜಯಗಳಿಸಿದ್ದರು. ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು, ಆದರೆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿದ್ದು, ಬಿಜೆಪಿ ಟಿಕೆಟ್ನಿಂದ ಉಪಚುನಾವಣೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಶರತ್ ಬಚ್ಚೇಗೌಡ ಅವರೂ ಸಹ ಆಕಾಂಕ್ಷಿ ಆಗಿದ್ದು, ಬಿಜೆಪಿ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.