ಅಖಾಡಕ್ಕಿಳಿದ ಡಿಕೆಶಿ; ಹೊಸಕೋಟೆಯಲ್ಲೊಂದು ಬ್ರೇಕಿಂಗ್ ನ್ಯೂಸ್!
ಬೆಂಗಳೂರು, ಜೂನ್ 04 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದ್ಯರಾಗಲು ಪ್ರಯತ್ನ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಕ್ಷೇತ್ರದಿಂದ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.
Recommended Video
ಹೊಸಕೋಟೆ ಕ್ಷೇತ್ರ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ನಡುವಿನ ಪ್ರತಿಷ್ಠೆಯ ಕಣವಾಗಿದೆ. ಪುತ್ರ ಬಿಜೆಪಿ ನಾಯಕರ ಮಾತನ್ನು ಧಿಕ್ಕರಿಸಿ ಚುನಾವಣೆ ಕಣಕ್ಕಿಳಿದ ಮೇಲೆ ಬಚ್ಚೇಗೌಡರು ಮೌನಕ್ಕೆ ಶರಣಾಗಿದ್ದಾರೆ.
ಎಂಟಿಬಿ ನಾಗರಾಜ್ ಬೆನ್ನಿಗೆ ನಿಂತ ಘಟಾನುಘಟಿ ನಾಯಕರು!
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಡಿ. ಕೆ. ಶಿವಕುಮಾರ್ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಯುವಕರ ಬೆಂಬಲ ಇರುವ ಶಾಸಕ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದು ಕ್ಷೇತ್ರದಲ್ಲಿ ಪಕ್ಷ ಕಟ್ಟುವ ತಂತ್ರವನ್ನು ರೂಪಿಸಿದ್ದಾರೆ.
ಹೊಸಕೋಟೆ; ಎಂಟಿಬಿ ಮ್ಯಾಜಿಕ್, ಶಾಸಕ ಶರತ್ ಕಂಗಾಲು!
ಶರತ್ ಬಚ್ಚೇಗೌಡರಿಗೆ ಬಿಜೆಪಿಯ ಬಾಗಿಲು ಬಹುತೇಕ ಮುಚ್ಚಿದೆ. ಕಂದಾಯ ಸಚಿವ ಆರ್. ಅಶೋಕ ಮಂಗಳವಾರ ಈ ಕುರಿತು ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದಸ್ಯರಾಗಿ ಯಡಿಯೂರಪ್ಪ ಸಂಪುಟ ಸೇರುವ ಲೆಕ್ಕಾಚಾರದಲ್ಲಿದ್ದಾರೆ.
ಬಿಜೆಪಿ ಗೆ ಮತ್ತೆ ಸೆಡ್ಡು ಹೊಡೆದ ಶಾಸಕ ಶರತ್ ಬಚ್ಚೇಗೌಡ
ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ
ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಶರತ್ ಬಚ್ಚೇಗೌಡ ಜೊತೆಗೆ ಚುನಾವಣೆಯಲ್ಲಿ ಕೆಲಸ ಮಾಡಿದ ಯುವಕರೇ ಈ ಮಾತನ್ನು ಹೇಳುತ್ತಿದ್ದಾರೆ. ಆದ್ದರಿಂದ, ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಎಂಟಿಬಿ ನಾಗರಾಜ್
ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಬೆಂಬಲಕ್ಕೆ ಬಿಜೆಪಿ ನಾಯಕರು ನಿಂತಿದ್ದಾರೆ. "ಎಂಟಿಬಿ ನಾಗರಾಜ್ ಹೊಸಕೋಟೆ ಭಾಗದಲ್ಲಿ ನಮ್ಮ ಪ್ರಕ್ಷದ ಪ್ರಶ್ನಾತೀತ ನಾಯಕರು. ಪಕ್ಷಕ್ಕೆ ಯಾರು ಬರುತ್ತೇವೆ ಎಂದರೂ ಎಂಟಿಬಿ ಅವರನ್ನು ಬಿಟ್ಟು ಯಾವುದೇ ತೀರ್ಮಾನ ಮಾಡುವುದಿಲ್ಲ. ಅವರ ತೀರ್ಮಾನವೇ ಅಂತಿಮ" ಎಂದು ಹೇಳಿರುವ ಕಂದಾಯ ಸಚಿವ ಆರ್. ಅಶೋಕ, ಶರತ್ ಬಚ್ಚೇಗೌಡರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಬಿಜೆಪಿ ಬಿಟ್ಟು ಬಂದರು
ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ಗೆ ಟಿಕೆಟ್ ಕೊಡುವ ಬಿಜೆಪಿ ನಾಯಕರ ತೀರ್ಮಾನ ಖಂಡಿಸಿ ಶರತ್ ಬಚ್ಚೇಗೌಡ ಪಕ್ಷ ಬಿಟ್ಟು ಬಂದರು. ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು 81,671 ಮತಗಳನ್ನು ಪಡೆದು ಎಂಟಿಬಿ ನಾಗರಾಜ್ಗೆ ಸೋಲಿನ ರುಚಿ ತೋರಿಸಿದರು. ಇದರಿಂದಾಗಿ ಬಿಜೆಪಿ ನಾಯಕರು ಶರತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಪಕ್ಷ ಕಟ್ಟಬೇಕಾದ ಅನಿವಾರ್ಯತೆ
ಎಂಟಿಬಿ ನಾಗರಾಜ್ ಪಕ್ಷ ಬಿಟ್ಟ ಮೇಲೆ ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ನಾಯಕರ ಮೇಲಿದೆ. ಆದ್ದರಿಂದ, ಶರತ್ ಬಚ್ಚೇಗೌಡರನ್ನು ಕರೆತಂದು ಯುವಕರ ಬೆಂಬಲ ಪಡೆದು ಪಕ್ಷ ಗಟ್ಟಿಗೊಳಿಸುವ ತಂತ್ರ ಡಿ. ಕೆ. ಶಿವಕುಮಾರ್ ಅವರದ್ದು.
ಬಚ್ಚೇಗೌಡರು ತಟಸ್ಥ
ಶರತ್ ಬಚ್ಚೇಗೌಡರು ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗಲೇ ಬಚ್ಚೇಗೌಡರು ಮೌನಕ್ಕೆ ಶರಣಾಗಿದ್ದರು. ಈಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಿದರೆ ಬಿಜೆಪಿಯಲ್ಲಿರುವ ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರು ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ.