ಪೌರತ್ವ: ಬೆಂಗಳೂರಿನಲ್ಲಿ ಮುಸ್ಲಿಮರ ಬೃಹತ್ ಸಭೆಯಿಂದ ಶಾಸಕ ಹ್ಯಾರೀಸ್ ಹೊರಕ್ಕೆ
ಬೆಂಗಳೂರು, ಡಿ 23: ಬೆಂಗಳೂರಿನ ಕಂಟೋನ್ಮೆಂಟ್ ಭಾಗದ, ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮುಖಂಡರು ನಡೆಸುತ್ತಿದ್ದ ಬೃಹತ್ ಪ್ರತಿಭಟನಾ ಸಭೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೇಂದ್ರಕ್ಕೆ, ಪ್ರತಿಭಟನಾ ಸಭೆಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.
ಧರ್ಮ ವಿರೋಧಿ ಕಾಯ್ದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದ ಮೌಲಾನಾ
ಈ ನಡುವೆ, ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ, ಬೆಂಗಳೂರು, ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಅವರನ್ನು, ಕಾರ್ಯಕ್ರಮದ ಆಯೋಜಕರು ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ.
ವೇದಿಕೆ ಏರಲು ಆಗಮಿಸುತ್ತಿದ್ದ ಹ್ಯಾರೀಸ್ ಅವರನ್ನು "ಇದೊಂದು ರಾಜಕೀಯೇತರ ಸಭೆ. ವೇದಿಕೆಗೆ ನೀವು ಬಂದರೆ, ಅದು ಬೇರೆ ಸಂದೇಶ ರವಾನಿಸಿದಂತಾಗುತ್ತದೆ" ಎಂದು, ಆಯೋಜಕರು, ಹ್ಯಾರೀಸ್ ಅವರನ್ನು ವಾಪಸ್ ಕಳುಹಿಸಿದ್ದಾರೆ.
ಶಾಂತಿಯುತವಾಗಿ ನಡೆಯುತ್ತಿರುವ ಸಭೆಗೆ ರಾಜಕೀಯ ಲೇಪನ ಹಚ್ಚುವುದು ಬೇಡ ಎನ್ನುವ ಕಾರಣಕ್ಕಾಗಿ ಹ್ಯಾರೀಸ್ ಮತ್ತು ಇನ್ನೋರ್ವ ಕಾಂಗ್ರೆಸ್ ಮುಖಂಡ ಅಬ್ದುಲ್ ವಾಜೀದ್ ಅವರನ್ನೂ ವೇದಿಕೆ ಏರಲು ಆಯೋಜಕರು ಅವಕಾಶ ನೀಡಲಿಲ್ಲ.
ಬೆಂಗಳೂರಿನಲ್ಲೂ ಪೌರತ್ವ ತಿದ್ದುಪಡಿ ವಿರುದ್ಧ ಧಿಕ್ಕಾರದ ಕೂಗು
ಈ ಸಭೆಯಲ್ಲಿ ರಾಜಕೀಯ ಮುಖಂಡರು ಹೊರತಾಗಿ, ಎಲ್ಲಾ ರಂಗದವರು ಭಾಗವಹಿಸಿದ್ದರು. ಹ್ಯಾರೀಸ್ ಮತ್ತು ವಾಜೀದ್ ಅವರಿಗೆ ಭಾಷಣ ಮಾಡಲು ಅವಕಾಶ ನೀಡಿದ್ದರೆ, ಅದೊಂದು ಕಾಂಗ್ರೆಸ್ ಸಭೆಯೆಂದು ಪರಿಗಣಿತವಾಗುತ್ತಿತ್ತು, ಹಾಗಾಗಿ, ಆಯೋಜಕರ ಕ್ರಮಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.