ಅರ್ಚಕರಿಗೆ ಡಿಪ್ಲೋಮಾ ಪರೀಕ್ಷೆ, ಶಾಂತವೀರ ಶ್ರೀ ಉಗ್ರ
ಬೆಂಗಳೂರು, ಜೂ.26: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ತನ್ನ ಅಧೀನದಲ್ಲಿರುವ ಮುಜರಾಯಿ ದೇಗುಲಗಳಿಗೆ ಹೊಸ ಅರ್ಚಕರ ನೇಮಕಾತಿ ವಿಚಾರದಲ್ಲಿ ಕೆಲ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಈ ನಿಮಯಗಳನ್ನು ಕೇಳಿ ಕೊಳದ ಮಠದ ಶಾಂತವೀರ 'ಉಗ್ರ'ರಾಗಿದ್ದಾರೆ.
ರಾಜ್ಯದ 35 ಸಾವಿರ ಮುಜರಾಯಿ ದೇಗುಲಗಳ ಹೊಸ ಅರ್ಚಕರ ಜ್ಯೋತಿಷ್ಯ ಡಿಪ್ಲೊಮಾ ಪರೀಕ್ಷೆಗೆ ಒಳಪಡಿಸುವ ಸರ್ಕಾರದ ಕ್ರಮವನ್ನು ಕೊಳದಮಠದ ಶಾಂತವೀರ ಸ್ವಾಮೀಜಿ ವಿರೋಧಿಸಿದ್ದಾರೆ.
ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ವಂಶಪಾರಂಪರಿಕ ಅರ್ಚಕರಿಗೆ ಡಿಪ್ಲೊಮಾ ಪರೀಕ್ಷೆಗೆ ಸೂಚಿಸಿರುವುದು ಖಂಡನೀಯ, ಇದನ್ನು ವಿರೋಧಿಸಿ ಆಯುಕ್ತರು, ಸಚಿವರು, ಸರ್ಕಾರಕ್ಕೆ ಮನವಿ ಮಾಡಿ ಪರೀಕ್ಷೆ ರದ್ದಿಗೆ ಆಗ್ರಹಿಸಿದ್ದಾಗಿ' ಹೇಳಿದರು.
ಇಲಾಖೆ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ವತಿಯಿಂದ ಆಗಮ ಮತ್ತು ಪ್ರವೀಣ ಎಂಬ ಐದು ವರ್ಷಗಳ ಕೋರ್ಸ್ ನಡೆಸುತ್ತಾ ಬಂದಿದೆ. ಅಧ್ಯಯನಕ್ಕೆ ಜ್ಯೋತಿಷ್ಯ ಬಾಲಬೋಧೆ ಗ್ರಂಥ ನಿಗದಿ ಮಾಡಿದೆ. ಇದರಿಂದ ಅರ್ಚಕರಿಗೆ ಅಗತ್ಯ ಜ್ಞಾನ ಲಭಿಸುತ್ತಿದೆ. ಹಾಗಾಗಿ ಜ್ಯೋತಿಷ್ಯ ಡಿಪ್ಲೋಮಾ ಅಗತ್ಯವಿಲ್ಲ ಎಂದರು.
ನಮ್ಮ ಪ್ರಾಚೀನ ಪರಂಪರೆಯನ್ನು ಅಳಿಸಲು ಕುಲದ್ರೋಹಿಗಳು ಮಾಡುತ್ತಿರುವ ಸಂಚು ಇದಾಗಿದೆ. ಒಂದು ವೇಳೆ ಸರ್ಕಾರ ಒತ್ತಡಕ್ಕೆ ಮಣಿದು ಅರ್ಚಕರ ಮೇಲೆ ಬಲವಂತವಾಗಿ ಪರೀಕ್ಷೆ ಹೇರಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದರು.
ತಿಂಗಳಿಗೆ ಸರ್ಕಾರ ಅರ್ಚಕರಿಗೆ ದೇವರ ಪೂಜಾ ವೆಚ್ಚ ಸೇರಿ ನೀಡುತ್ತಿರುವ 2000 ವೇತನ ಏನಕ್ಕೂ ಸಾಲುತ್ತಿಲ್ಲ. ಅರ್ಚಕನಿಗೆ ಉಪವಾಸವೇ ನಿತ್ಯಕಾಯಂ ಆಗಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಇತ್ತ ಸರ್ಕಾರ ಗಮನ ಹರಿಸಿ ವೇತನ ಹೆಚ್ಚಿಸಬೇಕು ಎಂದು ಸಂಘದ ಉಪಾಧ್ಯಕ್ಷ ಎಂ.ಎಸ್. ವೆಂಕಟಾಚಲಯ್ಯ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾ ಸಮಿತಿ, ಧಾರ್ಮಿಕ ದತ್ತಿ ಇಲಾಖೆ ಪ್ರಸಕ್ತ ಸಾಲಿನ ವಿವಿಧ ಆಗಮ ಪ್ರಸಿದ್ಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು ಕರ್ನಾಟಕ ಟೆಂಪಲ್ ಯಾತ್ರಾ ವೆಬ್ ತಾಣ(ಮುಜರಾಯಿ ಇಲಾಖೆಯ ಅಧಿಕೃತ ವೆಬ್ ಸೈಟ್) ನಲ್ಲಿ ಪ್ರಕಟಿಸಿದೆ.