ಮಲೆನಾಡಾದ ಬೆಂಗಳೂರು; ರಾತ್ರಿಯಿಂದ ಸುರಿಯುತ್ತಿರುವ ಮಳೆ!
ಬೆಂಗಳೂರು, ಅಕ್ಟೋಬರ್ 06; ಬೆಂಗಳೂರು ನಗರದ ಮಲೆನಾಡಿನಂತಾಗಿದೆ. ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಲೇ ಇದೆ. ಜನರು ಬುಧವಾರ ಮುಂಜಾನೆಯ ವಾಕಿಂಗ್, ಜಾಗಿಂಗ್ ಬಿಟ್ಟು ಮನೆಯಲ್ಲಿಯೇ ಮಳೆಯನ್ನು ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.
ಅಕ್ಟೋಬರ್ 5 ಮತ್ತು 6ರಂದು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನಗರದಲ್ಲಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಆರಂಭವಾದ ಮಳೆ ಇನ್ನೂ ನಿಂತಿಲ್ಲ.
ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬುಧವಾರ ಬೆಳಗ್ಗೆ ವಾಕಿಂಗ್, ಜಾಗಿಂಗ್ ಹೋಗುವವರು ಮತ್ತು ಹಾಲು, ತರಕಾರಿ ತರಲು ಹೊರಟವರು ಛತ್ರಿಗಾಗಿ ಹುಡುಕಾಟ ನಡೆಸುವುದು ಅನಿವಾರ್ಯವಾಗಿದೆ. ಬುಧವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೂ ಅಧಿಕ ಮಳೆ ಸೂಚನೆ
ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಕಾಪೌಂಡ್ ಕುಸಿದು ವಾಹನಗಳು ಜಖಂಗೊಂಡಿದ್ದವು. ಸೋಮವಾರ ನಗರದಲ್ಲಿ ಮಳೆ ಇರಲಿಲ್ಲ. ಮಂಗಳವಾರ ರಾತ್ರಿ ಮತ್ತೆ ಮಳೆ ಆರಂಭವಾಗಿದೆ.
ಬೆಂಗಳೂರಲ್ಲಿ 2 ಗಂಟೆ ಗುಡುಗು ಸಹಿತ ಭಾರೀ ಮಳೆ; ಅವಾಂತರ ಸೃಷ್ಟಿ
ಮಂಗಳವಾರ ಸಂಜೆಯೇ ಮುಂದಿನ 24 ಗಂಟೆಗಳಲ್ಲಿ ಹಗುರದಿಂದ ಭಾರೀ ಗುಡುಗು ಸಹಿತ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿತ್ತು. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ 30, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಎಂದು ತಿಳಿಸಿತ್ತು.
ಜಯನಗರ, ಬಸವನಗುಡಿ, ವಿದ್ಯಾಪೀಠ ವೃತ್ತ, ಹನುಮಂತನಗರ, ರಾಮಕೃಷ್ಣ ಆಶ್ರಮ, ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿಯಿಂದ ಮಳೆ ಸುರಿಯುತ್ತಲೇ ಇದೆ. ಬುಧವಾರ ಬೆಳಗ್ಗೆ ಮಳೆಯಿಂದಾಗಿ ವಾಹನ, ಜನರ ಸಂಚಾರ ವಿರಳವಾಗಿದೆ.
ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಆರ್. ಆರ್. ನಗರ, ಸದಾಶಿವ ನಗರ, ವಿಜಯನಗರ, ಹಲಸೂರು, ಕೆ. ಆರ್. ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಹಲವು ಕಡೆ ರಸ್ತೆಗಳು ಜಲಾವೃತಗೊಂಡಿವೆ.
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಅಂತ್ಯಗೊಂಡಿದೆ. ಆದರೆ ಶಾಹೀನ್ ಚಂಡಮಾರುತದ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 7ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಕ್ಟೋಬರ್ 7ರ ತನಕ ಮಳೆ; ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ 852 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 787 ಮಿ. ಮೀ. ಮಳೆಯಾಗಿದೆ. ಈಗ ಮುಂಗಾರು ಅಂತ್ಯಗೊಂಡಿದ್ದರೂ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ.
ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡಿನಲ್ಲಿ ಬುಧವಾರ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 7ರ ತನಕ ಮಳೆ ಮುಂದುವರೆಯಲಿದೆ.
ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರ, ಮಣಿಪುರ, ವಿಜೋರಾಂ, ದೆಹಲಿ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಒಡಿಶಾ, ಗೋವಾ, ಉತ್ತರ ಪ್ರದೇಶದಲ್ಲಿಯೂ ಮಳೆ ಮುನ್ಸೂಚನೆ ನೀಡಲಾಗಿದೆ.
Recommended Video