ಬೆಂಗಳೂರಿನಲ್ಲಿ ಮಹಿಳೆ ಮೇಲೆ ಬಿಷಪ್ ಮತ್ತು ಪಾದ್ರಿಯಿಂದ ಲೈಂಗಿಕ ದೌರ್ಜನ್ಯ
ಬೆಂಗಳೂರು, ಫೆಬ್ರವರಿ 2 : ಕ್ರೈಸ್ತ ಪಾದ್ರಿಗಳಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಲೈಂಗಿಕ ದೌರ್ಜನ್ಯದ ವಿರುದ್ಧ ಇಡೀ ಕೇರಳವೇ ತಿರುಗಿಬಿದ್ದಿರುವಾಗ ಅಂಥದೇ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿಯೇ ಜರುಗಿದೆ.
ಇಲ್ಲಿ ದೌರ್ಜನ್ಯಕ್ಕೊಳಗಾದ 27 ವರ್ಷದ ಮಹಿಳೆ, ಆರು ವರ್ಷಗಳ ಹಿಂದೆ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಹೋಲಿ ಟ್ರಿನಿಟಿ ಚರ್ಚ್ ಬಿಷಪ್ ಮತ್ತು ಪಾದ್ರಿ ಮಾಡುತ್ತಿದ್ದ ಒತ್ತಡವನ್ನು ಸಹಿಸಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣ
ಈ ಪ್ರಕರಣ ಹಿಂತೆಗೆದುಕೊಳ್ಳದೆಂದು ಬೆಂಗಳೂರಿನ ಹೋಲಿ ಟ್ರಿನಿಟಿ ಚರ್ಚಿಗೆ ಕರೆದಾಗ ಬಿಷಪ್ ಕೂಡ ಮಹಿಳೆಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಾದ್ರಿ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಹಿಂತೆಗೆದುಕೊಳ್ಳಲು 1 ಕೋಟಿ ರುಪಾಯಿ ಕೊಡುವ ಆಮಿಷ ಒಡ್ಡಿದ್ದು ಮಾತ್ರವಲ್ಲ, ಹಿಂತೆಗೆದುಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಬಿಷಪ್ ಬೆದರಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಈಗ ನನ್ನ ಕಥೆ ಹೇಳುವ ಸಮಯ ಬಂದಿದೆ : ಪ್ರಿಯಾ ರಮಣಿ
ಈ ಘಟನೆಯ ಹಿನ್ನೆಲೆಯಲ್ಲಿ ಹೋಲಿ ಟ್ರಿನಿಟಿ ಚರ್ಚ್ ಬಿಷಪ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಮಹಿಳೆಯ ಮೇಲೆ ದೈಹಿಕ ಹಲ್ಲೆ), ಸೆಕ್ಷನ್ 506 (ಬೆದರಿಕೆ ಒಡ್ಡುವುದು), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 34 ಅಡಿಯಲ್ಲಿ ಬಿಷಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಈಸ್ಟ್ ಹರ್ಷ ಅವರು ತಿಳಿಸಿದ್ದಾರೆ. ಪಾದ್ರಿಯ ವಿರುದ್ಧವೂ ಸೆಕ್ಷನ್ 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲೈಂಗಿಕ ದೌರ್ಜನ್ಯ ಎಸಗಿದ್ದ ಪಾದ್ರಿ
ಸುಮಾರು ಆರು ವರ್ಷಗಳ ಹಿಂದೆ ಕೊತ್ತನೂರು ನಿವಾಸಿಯಾಗಿರುವ ಮಹಿಳೆ, ತನ್ನ ಮೇಲೆ ಪಾದ್ರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕೊತ್ತನೂರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿಯೇ ಇದೆ. ಆದರೆ, ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆಗಿಂದಲೂ ಮಹಿಳೆಗೆ ಮತ್ತು ಮಹಿಳೆಯ ಮನೆಯವರಿಗೆ ಒತ್ತಡ ಬರುತ್ತಲೇ ಇತ್ತು. ಎಷ್ಟೇ ಒತ್ತಡ, ಬೆದರಿಕೆಗಳು ಬಂದರೂ ಮಹಿಳೆ ತಮ್ಮ ಕೇಸನ್ನು ಹಿಂತೆಗೆದುಕೊಂಡಿರಲಿಲ್ಲ. ಸಂತ್ರಸ್ತ ಮಹಿಳೆಯ ತಾಯಿಯವರ ಮೇಲೆ ಕೂಡ ಪಾದ್ರಿ ಮತ್ತು ಬಿಷಪ್ ಒತ್ತಡ ಹಾಕುತ್ತಿದ್ದರು.
ಯುವಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಚಾಲಾಕಿ ಮಹಿಳೆಯರು
ಬಿಷಪ್ ರನ್ನು ಭೇಟಿ ಮಾಡಿದ ಮಹಿಳೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ ಗಂಡ ಬಿಷಪ್ ಅವರನ್ನು ಭೇಟಿಯಾಗಲು ಮಹಿಳೆಯ ಮನವೊಲಿಸಬೇಕೆಂದು ಪಾದ್ರಿ ಆಗ್ರಹಿಸಿದ್ದ. ಬಿಷಪ್ ತಮಗೆ ನ್ಯಾಯ ದೊರಕಿಸಿಕೊಡಬಹುದು ಎಂಬ ಸದುದ್ದೇಶದಿಂದ ಮಹಿಳೆ ಮತ್ತು ಗಂಡ ಬಿಷಪ್ ಅವರನ್ನು ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ಭೇಟಿಯಾಗಿದ್ದಾರೆ. ಜನವರಿ 21ರಂದು ಟ್ರಿನಿಟಿ ಸರ್ಕಲ್ ಬಳಿಯಿರುವ ಚರ್ಚಿಗೆ ಬಂದಿದ್ದಾರೆ. ಆಗ, ಪಾದ್ರಿ ಮಹಿಳೆಯ ಗಂಡನ ಜೊತೆ ಏನೋ ಮಾತಾಡಬೇಕು ಎಂದು ಮಹಿಳೆಯನ್ನು ಏಕಾಂಗಿಯಾಗಿ ಬಿಟ್ಟು ಕರೆದುಕೊಂಡು ಹೋಗಿದ್ದಾನೆ.
ಕೇರಳ: ಬಿಷಪ್ ವಿರುದ್ಧ ಪ್ರತಿಭಟಿಸಿದ್ದ ಕ್ರೈಸ್ತ ಸನ್ಯಾಸಿನಿಯರ ವರ್ಗಾವಣೆ
ಹೆಗಲ ಮೇಲೆ ಕೈಹಾಕಿ ಅಸಭ್ಯ ವರ್ತನೆ
ಆಗ ಆರು ವರ್ಷಗಳ ಹಿಂದಿನ ಕ್ರಿಮಿನಲ್ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಬಿಷಪ್ ಆಗ್ರಹಿಸಿದ್ದಾರೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ, ಆಕೆಗೆ ಡಯೋಸೀಸ್ ನಲ್ಲಿ ಕೆಲಸ ಕೊಡುವುದು ಮಾತ್ರವಲ್ಲ 1 ಕೋಟಿ ರುಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದಾರೆ ಬಿಷಪ್. ಇದರ ಹಿಂದೆ ಏನೋ ಹುನ್ನಾರವಿದೆ ಎಂದು ಮಹಿಳೆ ಬಿಷಪ್ ಅವರ ಆಮಿಷವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಸಮಯದಲ್ಲಿ ಬಿಷಪ್ ಮಹಿಳೆಯ ಹೆಗಲ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆ ಕೂಗಿಕೊಳ್ಳಲು ಆರಂಭಿಸಿದಾಗ, ಕಿರುಚಿದರೆ ಕೊಂದೇಬಿಡುವುದಾಗಿ ಬಿಷಪ್ ಬೆದರಿಕೆ ಒಡ್ಡಿದ್ದಾರೆ. ಮಹಿಳೆ ಕಿರುಚುವುದನ್ನು ಕೇಳಿ ಗಂಡ ಬಂದಿದ್ದಾರೆ. ಇಬ್ಬರೂ ಅಲ್ಲಿಂದ ಹೊರಹೋಗಿದ್ದಾರೆ.
ಅತ್ಯಾಚಾರ ಪ್ರಕರಣ ವರದಿ ಮಾಡಿದ್ದಕ್ಕೆ ಮಾಧ್ಯಮಗಳಿಗೆ ಚರ್ಚ್ ಬಹಿಷ್ಕಾರ
ಒತ್ತಡ ಸಹಿಸದೆ ಪಾಶಾಣ ಸೇವನೆ
ಮರುದಿನವೇ ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಜನವರಿ 31ರಂದು ಶಿವಾಜಿನಗರದ ಸಿಎಸ್ಐ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಮಹಿಳೆ ದಾಖಲಿಸಿದ ಸಂದರ್ಭದಲ್ಲಿ ಬಿಷಪ್ ಅಲ್ಲಿಗೂ ಬಂದಿದ್ದಾನೆ. ಪಾದ್ರಿಯ ವಿರುದ್ಧದ ಕೇಸನ್ನು ವಾಪಸ್ ಪಡೆಯಬೇಕೆಂದು ಮತ್ತೆ ಅದೇ ರೀತಿಯ ಒತ್ತಡ, ಬೆದರಿಕೆ ಒಡ್ಡಲು ಆರಂಭಿಸಿದ್ದಾನೆ. ಅಲ್ಲಿ ಕೂಡ ಕೊಲೆ ಮಾಡುವುದಾಗಿ ಬಿಷಪ್ ಬೆದರಿಸಿದ್ದಾನೆ. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ತನ್ನ ಬಳಿಯಿದ್ದ ಪಾಶಾಣವನ್ನು ಮಹಿಳೆ ತೆಗೆದುಕೊಂಡುಬಿಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ಮಹಿಳೆ ತೀವ್ರ ಆಘಾತಗೊಂಡಿದ್ದರು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಅತ್ಯಾಚಾರ: ಪ್ರಮುಖ ಸಾಕ್ಷಿಯಾಗಿದ್ದ ಫಾದರ್ ಶವ ಪಂಜಾಬ್ನಲ್ಲಿ ಪತ್ತೆ
ಸಲ್ಲದ ಕೆಲಸ ಮಾಡಲು ಹೋಗಿ ಸಿಲುಕಿದ ಬಿಷಪ್
ಎಚ್ಚೆತ್ತುಕೊಂಡ ಬಿಷಪ್ ಅಲ್ಲಿಯ ಸಿಬ್ಬಂದಿಯನ್ನು ಕೂಗಿ ಮಹಿಳೆಯನ್ನು ಅಡ್ಮಿಟ್ ಮಾಡಿದ್ದಾನೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆ ಶಿವಾಜಿನಗರದ ಪೊಲೀಸರು ಆಸ್ಪತ್ರೆಗೆ ಬಂದು ಮಹಿಳೆಯ ಹೇಳಿಕೆಯನ್ನು ಪಡೆದಿದ್ದಾರೆ. ಇನ್ನಾರೋ ಮಾಡಿದ ತಪ್ಪನ್ನು ಮುಚ್ಚಿಡಲು ಹೋಗಿ ಬಿಷಪ್ ಅವರೇ ತೊಂದರೆಯಲ್ಲಿ ಸಿಲುಕಿದ್ದಾರೆ. ಅಲ್ಲದೆ, ಚರ್ಚಿನಲ್ಲಿ ಮಹಿಳೆಯ ಮೇಲೆ ಕೈಹಾಕಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದು ಕೂಡ ಅವರಿಗೆ ಉರುಳಾಗುವ ಸಾಧ್ಯತೆಯಿದೆ.