ಸಿಎಂ ಘೋಷಿಸಿದ ಕೊರೊನಾ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯರಿಗೆ ದೂರು!
ಬೆಂಗಳೂರು, ಮೇ.07: ನೊವೆಲ್ ಕೊರೊನಾ ವೈರಸ್ ನಿಯಂತ್ರಣಕ್ಕೆ ಕರ್ನಾಟಕ ಲಾಕ್ ಡೌನ್ ಆದ ಬೆನ್ನಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1,610 ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಘೋಷಿಸಿದ್ದರು.
Recommended Video
ಸಿಎಂ ಘೋಷಿಸಿದ ಕೊರೊನಾ ಪ್ಯಾಕೇಜ್ ನಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ವಿವಿಧ ಸಮುದಾಯಗಳ ಮುಖಂಡರು ದೂಷಿಸಿದ್ದಾರೆ. ಗುರುವಾರ ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ಸಮುದಾಯಗಳ ಮುಖಂಡರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾದರು.
ಕೊರೊನಾ ಸಂಕಷ್ಟ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಮುಖ್ಯಮಂತ್ರಿ ಬಿಎಸ್ ವೈ ಬುಧವಾರ ಘೋಷಿಸಿದ ಕೊರೊನಾ ಪ್ಯಾಕೇಜ್ ನಲ್ಲಿ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರಿಗೆ ಮಾತ್ರ ನೆರವು ಘೋಷಿಸಿದ್ದಾರೆ. ಆದರೆ, ಆ ವರ್ಗದವರಿಗೂ ನೆರವು ಸೂಕ್ತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ಮುಖಂಡರು ಆರೋಪಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಮನವಿ:
ಗುರುವಾರ ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಶ್ರೀ ಭಾವಸಾರ ಕ್ಷತ್ರಿಯ ಸಮಾಜ, ಶ್ರೀ ವಿಶ್ವಕರ್ಮ ಸೇವಾ ಸಮಿತಿ, ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಸಂಘ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಮಹಾ ಒಕ್ಕೂಟ, ಅಲೆಮಾರಿಗಳ ಒಕ್ಕೂಟ ಸೇರಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ವಿದ್ಯುತ್ ಮಗ್ಗ ನೇಕಾರರು, ಗಾಣಿಗರು, ಕುಂಬಾರ, ಕಮ್ಮಾರ, ಮೇದರು, ದರ್ಜಿಗಳು, ವಿಶ್ವಕರ್ಮ, ಅಲೆಮಾರಿಗಳು, ಬುಡಕಟ್ಟು ಸಮುದಾಯ, ಉಪ್ಪಾರರು, ಅರ್ಚಕರು, ಮಂಗಳವಾದ್ಯ ನುಡಿಸುವವರು, ಕಲಾವಿದರು, ಛಾಯಾಗ್ರಾಹಕರನ್ನು ಕೊರೊನಾ ಪ್ಯಾಕೇಜ್ ನಲ್ಲಿ ಸೇರಿಸದಿದ್ದಕ್ಕೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಕೂಡಾ ಸಿದ್ದರಾಮಯ್ಯರಿಗೆ ದೂರು ನೀಡಿದರು.
ಇನ್ನು, ಸರ್ಕಾರ ತಮ್ಮ ಸಮುದಾಯದವರಿಗೆ ನೆರವು ಘೋಷಣೆ ಮಾಡಿರುವ ಹಿನ್ನೆಲೆ ಸವಿತಾ ಸಮಾಜ, ನೇಕಾರರು ಹಾಗೂ ಮಡಿವಾಳ ಸಮುದಾಯದವರು ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಸಂಘಟನೆಗಳ ಪ್ರಮುಖ ಬೇಡಿಕೆಗಳು:
- ಕಬ್ಬಿಣ ಕೆಲಸಗಾರರು, ಕಲ್ಲಿನ ವಿಗ್ರಹ ತಯಾರು ಮಾಡುವವರು, ಚಿನ್ನ, ಬೆಳ್ಳಿ ಕೆಲಸ, ಎರಕದ ಕೆಲಸಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು
- ಮರಗೆಲಸ, ಗೊಂಬೆಗಳಿಗೆ ಬಣ್ಣ ಹಚ್ಚುವವರು, ಕರಕುಶಲ ಕೆಲಸದವರಿಗೆ ನೆರವು
- ಲಕ್ಷಾಂತರ ಸಂಖ್ಯೆಯಲ್ಲಿರುವ ಟೈಲರ್ ಗಳಿಗೆ ಸಹಾಯ
- ಶುದ್ಧ ಎಣ್ಣೆ ತಯಾರು ಮಾಡುವ ಗಾಣಿಗರಿಗೆ ಆರ್ಥಿಕ ನೆರವು
- ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರನ್ನು ಪ್ಯಾಕೇಜ್ ನಲ್ಲಿ ಸೇರಿಸಬೇಕು