ರಾಬರ್ಟ್ ಸಿನಿಮಾ ನಿರ್ಮಾಪಕನ ಸಹೋದರನ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ವಶಕ್ಕೆ
ಬೆಂಗಳೂರು, ಡಿಸೆಂಬರ್ 20: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, "ರಾಬರ್ಟ್' ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಸಹೋದರ ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದ 7 ಜನರನ್ನು ಬೆಂಗಳೂರಿನ ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರಣಾಂತಿಕ ಹಲ್ಲೆ ಮಾಡುವ ಬಗ್ಗೆ ಮಂಜುನಾಥ್ ಹಾಗೂ ಅವನ ಸಹಚರರು ಸ್ಕೆಚ್ ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ಸಂದರ್ಭದಲ್ಲಿ ಜಯನಗರ ಪೊಲೀಸರು ದಾಳಿ ಮಾಡಿದ್ದರು. ಸದ್ಯ ಏಳು ಜನರನ್ನು ಬಂಧಿಸಿ, ವಿಚಾರಣೆ ಮಾಡುತ್ತಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅಣ್ಣನಿಗೆ ಘಟನೆ ಬಗ್ಗೆ ಜಯನಗರ ಪೊಲೀಸರು ಮಾಹಿತಿ ನೀಡಿದ್ದು, ರೌಡಿ ಶೀಟರ್ ಪಳನಿ ಗ್ಯಾಂಗ್ ನ ಮಂಜುನಾಥ್ ನಿಂದ ಕೃತ್ಯಕ್ಕೆ ಪ್ಲಾನ್ ನಡೆಸಲಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಯಾವ ಕಾರಣಕ್ಕೆ ಕೊಲೆ ಪ್ಲಾನ್ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ನೀಲಸಂಧ್ರ ಏರಿಯಾದ ಮಂಜುನಾಥ್ ನನ್ನು ತನಿಖೆ ಮಾಡಲಾಗುತ್ತಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ.
ಒಬ್ಬರಲ್ಲ, ಇಬ್ಬರಲ್ಲ ನಾಲ್ವರ ಕೊಲೆಗೆ ಸ್ಕೆಚ್ ಹಾಕಿದ್ದು, ನಾಲ್ವರಲ್ಲಿ ಯಾರೇ ಬಂದರೂ ಕೊಲೆ ಮಾಡ್ಲೇಬೇಕು ಎಂದು ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ. ನಾಲ್ವರ ಕೊಲೆಗೆ ಸ್ಕೆಚ್ ಹಾಕಿ ಮಾರಕಾಸ್ತ್ರ ಹಿಡಿದು ನಟೋರಿಯಸ್ ಗ್ಯಾಂಗ್ ಕುಳಿತ್ತಿತ್ತು ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಕುಖ್ಯಾತ ರೌಡಿಶೀಟರ್ ಸೈಕಲ್ ರವಿ, ಸಹಚರ ಬೇಕರಿ ರಘು, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದು, ನ್ಯಾಷನಲ್ ಕಾಲೇಜು ಬಳಿ ರಜತಾದ್ರಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಗ್ಯಾಂಗ್ ಹೊಂಚು ಹಾಕುತ್ತಿತ್ತು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ 8 ಗಂಟೆಗೆ ಸಿನಿಮೀಯ ಶೈಲಿಯಲ್ಲಿ ಜಯನಗರ ಪೊಲೀಸರು ದಾಳಿ ಮಾಡಿದ್ದರು. ಟೆಂಪೋ ಟ್ರಾವಲರ್ ನಲ್ಲಿ ಮಾರಕಾಸ್ತ್ರಗಳನ್ನು ತಂದಿದ್ದರು. ಈ ವೇಳೆ ರೌಡಿ ಶೀಟರ್ ಭರತ್ ಕುಮಾರ್ ಸೇರಿ ಏಳು ಮಂದಿ ಬಂಧಿಸಲಾಗಿದೆ.
ಕೆಲವರು ಪೊಲೀಸರು ದಾಳಿ ಮಾಡುತ್ತಿದ್ದಂತೆ ಕಾಲ್ಕಿತ್ತಿದ್ದು, ಪ್ರಕರಣ ಸಂಬಂಧ ಜಯನಗರ ಪೊಲೀಸರಿಂದ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಸುದರ್ಶನ್ ಅವರಿಂದ ಸುಮೋಟೋ ಕೇಸ್ ಹಾಕಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಣಕಾಸಿನ ವ್ಯವಹಾರದ ಹಿನ್ನೆಲೆ ಕೊಲೆಗೆ ಪ್ಲಾನ್ ಮಾಡಲಾಗಿದೆ ಎಂದು ಶಂಕಿಸಲಾಗಿದೆ.