ಭೂ ಹಗರಣದಲ್ಲಿ ಸಿದ್ದರಾಮಯ್ಯ ಸಿಲುಕಿಸಲು ಹೋದ ಬಿಜೆಪಿಗೆ ಬೂಮರಾಂಗ್
ಬೆಂಗಳೂರು, ಡಿಸೆಂಬರ್ 27: ಭೂಪಸಂದ್ರದ ಜಮೀನು ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಮನವಿ ಮಾಡಿಕೊಂಡಿದ್ದರು. ಆದರೆ, ಜಮೀನಿನ ಮಾಲೀಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದಾರೆ.
'ಭೂಪಸಂದ್ರ ಗ್ರಾಮದಲ್ಲಿ ನಮ್ಮ ವಶದಲ್ಲಿರುವ 6.26 ಎಕರೆ ಜಮೀನಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ' ಎಂದು ಜಮೀನು ಮಾಲೀಕರಲ್ಲಿ ಒಬ್ಬರಾದ ಕೆ.ವಿ. ಜಯಲಕ್ಷ್ಮಮ್ಮ ಅವರ ಮಗ ಕೆ.ವಿ. ಕೃಷ್ಣ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
'ಈ ಜಮೀನು ನ್ಯಾಯಾಲಯ ಮೂಲಕ ಕಾನೂನುಬದ್ಧವಾಗಿ ನಮ್ಮ ಪಾಲಿಗೆ ಬಂದಿದೆ. ಡಿನೋಟಿಫೈ ಎಂಬ ಪದ ಹೇಗೆ ಬಂತು, ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಗೆ ಸೇರಿಕೊಂಡಿತು ಎಂದು ಗೊತ್ತಿಲ್ಲ' ಎಂದಿದ್ದಾರೆ.
ಸರ್ವೆ ನಂ. 20 ಮತ್ತು 21ರಲ್ಲಿರುವ ಒಟ್ಟು 6.26 ಎಕರೆ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ವಜುಭಾಯಿ ವಾಲರ ಅನುಮತಿಯನ್ನು ಕೋರಿ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರು ಮನವಿ ಸಲ್ಲಿಸಿದ್ದರು.
ಆದರೆ, ಆರು ದಶಕಗಳಿಂದಲೂ ಈ ಜಮೀನಿನ ಒಡೆತನ ಹೊಂದಿರುವ ಕೆ.ವಿ. ಕೃಷ್ಣ ಪ್ರಸಾದ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಅಗತ್ಯ ದಾಖಲೆಗಳನ್ನು ರಾಜ್ಯಪಾಲರಿಗೂ ತಲುಪಿಸಿದ್ದಾರೆ.