ಶೀಘ್ರ ಕರಾವಳಿ ಪ್ರತ್ಯೇಕ ಮರಳು ನೀತಿ: ಮರುಗೇಶ್ ನಿರಾಣಿ
ಬೆಂಗಳೂರು,ಜನವರಿ 29: ಶೀಘ್ರ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಪ್ರಕಟಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಮರಳು ನೀತಿಯನ್ನು ಪ್ರಕಟಿಸಲಿದ್ದೇವೆ. ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಡಿಮೆ ರೇಟಿಗೆ ಕೊಟ್ಟರೂ ಮರಳು ಖರೀದಿ ಮಾಡುವವರಿಲ್ಲ!
ಕರಾವಳಿ ಭಾಗಗಳಲ್ಲಿ ಮರಳು ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅತಿ ಶೀಘ್ರದಲ್ಲೇ ಕರಾವಳಿ ಪ್ರತ್ಯೇಕ ಮರಳು ನೀತಿಯನ್ನು ಸರ್ಕಾರ ಪ್ರಕಟಿಸಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಯವರು ಇಂದು ಘೋಷಿಸಿದರು.
ಕೆಲವು ಸಂದರ್ಭದಲ್ಲಿ ಆಶ್ರಯ ಮನೆ, ಸಣ್ಣಪುಟ್ಟ ಮನೆಗಳ ನಿರ್ಮಾಣಕ್ಕಾಗಿ ಮರಳನ್ನು ಎತ್ತಿನಗಾಡಿ, ದ್ವಿಚಕ್ರ ವಾಹನ ಮತ್ತಿತರ ವಾಹನಗಳಲ್ಲಿ ಸರಬರಾಜು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಯಾರಿಗೂ ದಂಡ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಯಮಗಳ ಸರಳೀಣಕರಣದ ಅಗತ್ಯವಿದೆ ಎಂದರು.
ನಮ್ಮ ಸರ್ಕಾರ ಮರಳನ್ನು ಪ್ರತಿಯೊಬ್ಬರಿಗೂ ಮಾರುಕಟ್ಟೆ ದರದಲ್ಲೇ ತಲುಪಿಸಲು ಬದ್ಧವಾಗಿದೆ. ಗುಣಮಟ್ಟದ ಮರಳನ್ನು ಸುಲಭವಾಗಿ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ಜೆಡ್ ವ್ಯಾಪ್ತಿಯಲ್ಲಿನ ನದಿಪಾತ್ರಗಳಲ್ಲಿ 2020-21 ಸಾಲಿನಲ್ಲಿ ಒಟ್ಟು 13 ಮರಳು ದಿಬ್ಬಗಳನ್ನು ತೆರವುಗೊಳಿಸಲು ಕರಾವಳಿ ವಲಯ ನಿರ್ವಹಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಏಳು ಸದಸ್ಯರ ಸಮಿತಿಯಿಂದ ಒಟ್ಟು 104 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಪರವಾನಗಿಗಳನ್ನು ನೀಡಲಾಗಿದೆ ಎಂದರು.
ಯುಟಿ ಖಾದರ್ ಪ್ರಶ್ನೆಗೆ ಉತ್ತರ
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ್ದೇನೆ.
ಜನರು ಎದುರಿಸುತ್ತಿರುವ ಸಂಕಷ್ಟ
ಮರಳಿನ ಬಗ್ಗೆ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅರಿವಿದೆ. ಪದೇ ಪದೇ ಸಭೆ ನಡೆಸುವುದು , ಮುಂದೂಡುವುದರಲ್ಲಿ ಅರ್ಥವಿಲ್ಲ. ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಆಶ್ವಾಸನೆ ನೀಡಿದರು.
ರಾಜ್ಯದಲ್ಲಿ ಮರಳಿನ ಅಭಾವ
ರಾಜ್ಯದಲ್ಲಿ ಮರಳಿನ ಅಭಾವದ ಬಗ್ಗೆ ಸಚಿವ ಗಮನಸೆಳೆದ, ಸದಸ್ಯರಾದ ರಘುಪತಿಭಟ್, ನಾಡಗೌಡ, ಕುಮಾರ್ ಬಂಗಾರಪ್ಪ ಮತ್ತಿತರರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುತ್ತಿಲ್ಲ. ಪ್ರತಿ ಕೆಡಿಪಿ ಸಭೆಯಲ್ಲೂ ಇದು ಪ್ರಸ್ತಾಪವಾಗುತ್ತದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರಿಗೂ ಸುಲಭವಾಗಿ ಮರಳು ದೊರೆಯುವಂಥಾ ನೀತಿ
ಸದಸ್ಯರ ಮನವಿ ಆಲಿಸಿದ ಸಚಿವ ನಿರಾಣಿ ಅವರು, ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ಸುಲಭವಾಗಿ ಮರಳು ದೊರೆಯುವಂತೆ ನೋಡಿಕೊಳ್ಳಲಿದೆ. ಕಾನೂನಿನ ವ್ಯಾಪ್ತಿಯಲ್ಲೇ ನಿಯಮಗಳಿಗೆ ಒಳಪಟ್ಟೇ ಮರಳು ಹರಾಜು ಪ್ರಕ್ರಿಯೆ ನಡೆಯಲಿದೆ. ಮರಳು ಎಲ್ಲರಿಗೂ ಸಿಕ್ಕರೆ ಮಾತ್ರ ಸುಲಭವಾಗಿ ಕಾಮಗಾರಿಗಳು ನಡೆಯುತ್ತವೆ ಎಂದರು.