ಬೆಂಗಳೂರಿನ ಮೊದಲ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ ಇನ್ನಿಲ್ಲ
ಬೆಂಗಳೂರು, ಏಪ್ರಿಲ್ 3: ಆರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಬೆಂಗಳೂರಿನ ಮೊದಲ ಛಾಯಾಗ್ರಾಹಕ ಎಂಬ ಹಿರಿಮೆಗೆ ಪಾತ್ರರಾಗಿದ್ದ ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಬನ್ನೇರುಘಟ್ಟದ ಅರಕೆರಿ ಬಳಿಯ ಅವರ ಮಗನ ಮನೆಯಲ್ಲಿ ನಿಧನರಾದರು.
ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನು ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರವನ್ನು ಟಿ.ಎಲ್.ರಾಮಸ್ವಾಮಿ ಪಡೆದಿದ್ದರು. 1950ರಿಂದ 1985ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು.
ಪಾಟೀಲ ಪುಟ್ಟಪ್ಪ ನಿಧನ: ಹುಟ್ಟೂರಲ್ಲಿ ಚಿರನಿದ್ರೆಗೆ ಜಾರಿದ ಪಾಪು...
ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾಗಿ ಕೆಲಸ ಮಾಡಿದ್ದರು. ಮೈಸೂರು ನ್ಯೂಸ್ ಫೋಟೊಸ್ ಎಂಬ ಸಂಸ್ಥೆ ಹುಟ್ಟಿಹಾಕಿದ್ದರು. ದೇಶ ವಿದೇಶಿ ಪತ್ರಿಕೆಗಳಿಗೂ ಅವರು ಕೆಲಸ ಮಾಡಿದ್ದರು.
ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿತ್ತು.