ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ragging
ಕುಮಾರಸ್ವಾಮಿ ಲೇಔಟ್ ಸಮೀಪದ ದಯಾನಂದ ಸಾಗರ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಬಿಹಾರ ಮೂಲದ ವಿದ್ಯಾರ್ಥಿ ಎಸ್. ಸಿದ್ದಾರ್ಥ ಕುಮಾರ್ ಸಿಂಗ್ ಮೇಲೆ ಹಿರಿಯ ವಿದ್ಯಾರ್ಥಿಗಳು ದೌರ್ಜನ್ಯ ನಡೆಸಿದ್ದಾರೆ. ಈ ಕುರಿತು ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ragging ನಡೆಸಿದ ಅದೇ ಕಾಲೇಜಿನ ಬಿಕಾಂ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಧರ್ಮೇಂದ್ರ, ನಿಶೀತ್, ದೇವಿಶ್ ಹಾಗೂ ರಿಷು ತಲೆಮರಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ತಲೆಕೂದಲು ಕತ್ತರಿಸಿದರು : ಕುಮಾರಸ್ವಾಮಿ ಲೇಔಟ್ನಲ್ಲಿ ಸೋದರನ ಜೊತೆ ಸಿದ್ದಾರ್ಥ ಕುಮಾರ್ ಸಿಂಗ್ ವಾಸಿಸುತ್ತಿದ್ದಾರೆ. ಅದೇ ಬಡಾವಣೆ 49ನೇ ಅಡ್ಡ ರಸ್ತೆಯಲ್ಲಿ ಜಾರ್ಖಂಡ್ ಮೂಲದ ಧರ್ಮೇಂದ್ರ, ನಿಶೀತ್, ದೇವಿಶ್ ಹಾಗೂ ರಿಷು ವಾಸವಾಗಿದ್ದಾರೆ.
ಇವರು ಸಿದ್ದಾರ್ಥನನ್ನು ತಮ್ಮ ಮನೆಗೆ ಬಲವಂತವಾಗಿ ಕರೆದೊಯ್ದು ಬೆತ್ತಲೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ತಮ್ಮ ಮಾತು ಕೇಳದೆ ಹೋದರೆ ಕೊಲೆ ಮಾಡುವುದಾಗಿ ಸಹ ಧರ್ಮೇಂದ್ರ ಧಮಕಿ ಹಾಕಿದ್ದಾನೆ ಎಂದು ದೂರಿನಲ್ಲಿ ಸಿದ್ದಾರ್ಥ ಆರೋಪಿಸಿದ್ದಾರೆ.
ಸೆ.17ರಂದು ಪರೀಕ್ಷೆಗೆ ಹಾಜರಾಗಲು ತೆರಳುವಾಗ ಮಾರ್ಗ ಮಧ್ಯೆ ಸಿದ್ದಾರ್ಥನನ್ನು ಧರ್ಮೇಂದ್ರ ಹಾಗೂ ಆತನ ಸ್ನೇಹಿತರು ಅಡ್ಡಗಟ್ಟಿ, ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದಾರೆ. ಕೊನೆಗೆ ಕಾಲೇಜಿನ ಸಮೀಪದಲ್ಲಿದ್ದ ತನ್ನ ಗೆಳೆಯನ ಹಾಸ್ಟೆಲ್ಗೆ ಹೋಗಿ, ಆತನ ಬಟ್ಟೆ ಧರಿಸಿ ಸಿದ್ದಾರ್ಥ ಪರೀಕ್ಷೆಗೆ ತೆರಳಿದ್ದ.
ಅಂದು ಪರೀಕ್ಷೆ ಮುಗಿಸಿ ಮರಳುವಾಗ ಹಿರಿಯ ವಿದ್ಯಾರ್ಥಿಗಳು ಮತ್ತೆ ಸಿದ್ದಾರ್ಥ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು 30 ವಿದ್ಯಾರ್ಥಿಗಳ ಗುಂಪು, ಸಿದ್ದಾರ್ಥನನ್ನು ಹಿಡಿದು ಕಾರಿಗೆ ಹತ್ತಿಸಿಕೊಂಡು ತಲೆಗೂದಲನ್ನು ಟ್ರಿಮರ್ ನಿಂದ ಕತ್ತರಿಸಿದ್ದಾರೆ. ಇದರಿಂದ ಆತನ ಮುಖ, ತಲೆ ಭಾಗಕ್ಕೆ ಗಾಯವಾಗಿವೆ.
ಸಿದ್ದಾರ್ಥ್ ಗೆ ಸಹೋದರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಸಿದ್ದಾರ್ಥ ಮೇಲೆ ragging ಮುಂದುವರಿದಿದೆ. ಇದರಿಂದ ಬೇಸತ್ತ ಅವರು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.