ಹಿರಿಯ ರಂಗಕರ್ಮಿ 'ನಟ ರತ್ನಾಕರ' ಮಾಸ್ಟರ್ ಹಿರಣ್ಣಯ್ಯ ನಿಧನ
Recommended Video
ಬೆಂಗಳೂರು, ಮೇ 02 : ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ಹಿರಿಯ ನಟ 'ನಟ ರತ್ನಾಕರ' ಮಾಸ್ಟರ್ ಹಿರಣ್ಣಯ್ಯ(85) ಅವರು ಗುರುವಾರ ಕೊನೆಯುಸಿರೆಳೆದರು.
ಮಾಸ್ಟರ್ ಹಿರಣ್ಣಯ್ಯ ಸಂದರ್ಶನ - 80 ವರ್ಷ ಪೂರೈಸಿದಾಗ
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸಕಾಲಿಕ ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ನಾಟಕದ ಸಂಭಾಷಣೆಗಳಲ್ಲಿ ಸುಲಲಿತವಾಗಿ ಎಳೆದು ತರುವ ಮೂಲಕ ಪಂಚ್ ನೀಡುವಲ್ಲಿ ಪ್ರಸಿದ್ಧಿ ಗಳಿಸಿದ್ದ ಹಿರಣ್ಣಯ್ಯ ಪತ್ನಿ ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ.
ಇತ್ತೀಚೆಗೆ ಪಿತ್ತಜನಕಾಂಗ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಂಚ ಸಾಮ್ರಾಜ್ಯ, ನಂ.73 ಶಾಂತಿ ನಿವಾಸ, ಗಜ ಸೇರಿದಂತೆ 31 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿದೆ. ಅವರ ಲಂಚಾವತಾರ ನಾಟಕವಂತೂ ಇಡೀ ಕರ್ನಾಟಕದಲ್ಲೂ ಮನೆಮಾತಾಗಿದೆ.
ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ನಡೆಯಲಿದ್ದು, ಪಾರ್ಥಿವ ಶರೀರವನ್ನು ಬನಶಂಕರಿಯ ಅವರ ನಿವಾಸದಲ್ಲಿ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.