ಗೂಡ್ಸ್ ಲಾರಿ ಅಪಘಾತ: ಹಿರಿಯ ಪತ್ರಕರ್ತ ಗಂಗಾಧರ್ ನಿಧನ: ಸಿಎಂ ಸಂತಾಪ
ಬೆಂಗಳೂರು, ಜ. 23: ಗೂಡ್ಸ್ ಲಾರಿ ಪಲ್ಟಿ ಹೊಡೆದ ಪರಿಣಾಮ ವಿಜಯವಾಣಿ ಪತ್ರಿಕೆ ಹಿರಿಯ ಪತ್ರಕರ್ತ ಗಂಗಾಧರಮೂರ್ತಿ ಅವರು ಭಾನುವಾರ ಸಂಜೆ ಸಾವನ್ನಪ್ಪಿದ್ದಾರೆ. ಗಂಗಾಧರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ದುರ್ಘಟನೆ: ಚಾಮರಾಜಪೇಟೆಯಲ್ಲಿರುವ ವಿಜಯವಾಣಿ ಕಚೇರಿಗೆ ಗಂಗಾಧರ್ ಎಂದಿನಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಟೌನ್ ಹಾಲ್ ಸಮೀಪ ಹೋಗುತ್ತಿದ್ದ ವೇಳೆ, ಮಹಾರಾಷ್ಟ್ರ ನೋಂದಣಿ ಗೂಡ್ಸ್ ಲಾರಿ ಪಲ್ಟಿ ಹೊಡೆದು ಬಿದ್ದಿದೆ. ಗಂಗಾಧರ್ ಗೂಡ್ಸ್ ವಾಹನ ಅಡಿ ಸಿಲುಕಿದ್ದು, ಕೂಡಲೇ ಸಾರ್ವಜನಿಕರ ನೆರವಿನಿಂದ ಗಂಗಾಧರ್ ಅವರನ್ನು ಹೊರಗೆ ತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದ ಗಂಗಾಧರ್ ಅವರನ್ನು ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಗಂಗಾಧರ್ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದಾನೆ.
ಗೂಡ್ಸ್ ವಾಹನ ಸಂಚಾರ ನಿರ್ಬಂಧವಿದ್ರೂ ಸಂಚಾರ: ಬೆಂಗಳೂರಿನಲ್ಲಿ ಅಪಘಾತ ದಟ್ಟಣೆ ತಡೆಯುವ ಹಾಗೂ ಅಪಘಾತ ನಿಯಂತ್ರಿಸುವ ಸಲುವಾಗಿ 2014 ರಿಂದಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಗೂಡ್ಸ್ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ನಿಯಮದ ಗಂಗಾಧರ ಮೂರ್ತಿ ಅವರನ್ನು ಬಲಿ ಪಡೆದ ಗೂಡ್ಸ್ ವಾಹನ ಟೌನ್ ಹಾಲ್ ಬಳಿ 4 ಗಂಟೆ ವೇಳೆಯಲ್ಲಿ ಸಂಚರಿಸುವಂತಿಲ್ಲ. ಆದರೆ, ಈ ಗೂಡ್ಸ್ ವಾಹನ ಸಂಚಾರಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಹಣ ಪಡೆದು ಸಂಚಾರ ನಿರ್ಬಂಧಗಳನ್ನು ಸಡಿಲಿಸಿರುವ ಸಂಚಾರ ಪೊಲೀಸರ ನಿರ್ಲಕ್ಷ್ಯತನಕ್ಕೆ ಪತ್ರಕರ್ತನ ಪ್ರಾಣ ಹೋಯಿತು ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಎಂಟು ಗಂಟೆ ವರೆಗೂ ಮೂರು ಟನ್ ತೂಕ ಹೊತ್ತ ಗೂಡ್ಸ್ ವಾಹನ ಬೆಂಗಳೂರು ನಗರ ವ್ಯಾಪ್ತಿಯೊಳಗೆ ಪ್ರವೇಶ ಮಾಡುವಂತಿಲ್ಲ. ವಿಧಾನಸೌಧ ಸುತ್ತಮುತ್ತಲಿನ 2 ಕಿ. ಮೀ. ವ್ಯಾಪ್ತಿಯಲ್ಲಿ ಗೂಡ್ಸ್ ವಾಹನಗಳು ದಿನದ 24 ತಾಸು ಸಂಚಾರ ಮಾಡುವಂತಿಲ್ಲ. ಹಾಲುಮ ಆಕ್ಸಿಜನ್ , ಬಿಬಿಎಂಪಿ ಕಸದ ಲಾರಿ, ಸಿಎನ್ ಜಿ ಟ್ಯಾಂಕರ್, ಬಯೋ ಮೆಡಿಕಲ್ ವೇಸ್ಟ್ ವಾಹನಗಳ ಸಂಚಾರಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ವಾಹನಗಳು ಕೂಡ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಸಂಜೆ 4 ರಿಂದ ರಾತ್ರಿ 8 ಗಂಟೆ ವರೆಗೆ ನಗರದಲ್ಲಿ ಸಂಚಾರ ಮಾಡುವಂತಿಲ್ಲ. ಆದರೆ, ಮಹಾರಾಷ್ಟ್ರ ನೋಂದಣಿ ಗೂಡ್ಸ್ ವಾಹನ ಮಾರ್ಕೆಟ್ ಸಮೀಪ ಸಂಚರಿಸಲು ಹಲಸೂರು ಗೇಟ್ ಪೊಲೀಸರು ಯಾಕೆ ಅವಕಾಶ ಮಾಡಿಕೊಟ್ಟರು. ಗೂಡ್ಸ್ ವಾಹನಗಳ ಮೇಲೆ ನಿರ್ಬಂಧವಿದ್ಧರೂ ಗೂಡ್ಸ್ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಡುತ್ತಿರುವುದು ಯಾಕೆ? ಇದರಿಂದ ಮುಗ್ಧ ಜೀವಗಳು ಬಲಿಯಾಗುತ್ತಿವೆ. ಅದಕ್ಕೆ ಹಿರಿಯ ಪತ್ರಕರ್ತ ಗಂಗಾಧರ್ ಮೂರ್ತಿ ಹೆಸರು ಕೂಡ ಸೇರ್ಪಡೆಯಾಗಿದೆ.
ಗಂಗಾಧರ್ ನಿಧನಕ್ಕೆ ಸಂತಾಪ: ಸೌಮ್ಯ ಸ್ವಭಾವದ ಗಂಗಾಧರ ಮೂರ್ತಿ ಪತ್ರಕರ್ತರಾಗಿ ಕಳೆದ ಇಪ್ಪತ್ತು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಗೂಡ್ಸ್ ವಾಹನದ ಅಪಘಾತದಲ್ಲಿ ಮೃತಪಟ್ಟಿದ್ದು, ಅವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದು, ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಗಂಗಾಧರ್ ನಿಧನಕ್ಕೆ ವಿಜಯವಾಣಿ ಬಳಗ ಸಂತಾಪ ಸೂಚಿಸಿದೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರಕರ್ತ ಗಂಗಾಧರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಒನ್ಇಂಡಿಯಾ ಕನ್ನಡ ಕೂಡ ಸಂತಾಪ ಸೂಚಿಸಿದೆ.
Recommended Video
ಹಿರಿಯ ಪತ್ರಕರ್ತ ಗಂಗಾಧರ ಮೂರ್ತಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಇಂದು ಮಧ್ಯಾಹ್ನ ಕಚೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಇದು ನಿಜಕ್ಕೂ ಆಘಾತಕಾರಿ ಘಟನೆ. ದೇವರು ಗಂಗಾಧರ ಮೂರ್ತಿ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ವನ್ನು ತಡೆಯುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.