ಕ್ರೂರ ಹುಲಿಯನ್ನು ಕಾಡಿಗಟ್ಟಿ: ಹೆಗಡೆಗೆ ಮೊಯ್ಲಿ ಟಾಂಗ್!
ಬೆಂಗಳೂರು, ಜೂನ್ 29: 'ಹುಲಿ ಕ್ರೂರಿಯಾಗಿದೆ. ಅದನ್ನು ವಾಪಸ್ ಕಾಡಿಗೆ ಕಳಿಸಿ' ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆ ಅವರಿಗೆ ಟಾಂಗ್ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಬಿಜೆಪಿಯ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ವಿಪಕ್ಷಗಳನ್ನು ಕಾಗೆ, ಕೋತಿ ಮತ್ತು ನರಿಗಳಿಗೆ ಹೋಲಿಸಿದ್ದರು. ಕಾಗೆ, ಕೋತಿ, ನರಿಗಳೆಲ್ಲ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಹುಲಿ ಇದೆ. 2019 ರಲ್ಲಿ ಹುಲಿಯನ್ನು ಆರಿಸಿ' ಎಂದು ವಿಪಕ್ಷಗಳೆಲ್ಲ ಒಂದಾಗುತ್ತಿರುವುದನ್ನು ಈ ರೀತಿ ವಿವರಿಸಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ವೀರಪ್ಪ ಮೊಯ್ಲಿ, 'ಹುಲಿ ಕ್ರೂರವಾಗಿದೆ. ಅದನ್ನು ವಾಪಸ್ ಕಾಡಿಗೆ ಅಟ್ಟಿ' ಎನ್ನುವ ಮೂಲಕ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
'ನೀವೆಲ್ಲ ಈಗ ಪ್ಲಾಸ್ಟಿಕ್ ಖುರ್ಚಿ ಮೇಲೆ ಕುಳಿತಿದ್ದೀರಿ. ಇದು 70 ವರ್ಷಗಳಿಂದ ಕಾಂಗ್ರೆಸ್ ಆಡಳಿತ ನೀಡಿದ ಫಲ. 70 ವರ್ಷಗಳಿಂದ ನಾವು ಆಡಳಿತ ನಡೆಸಿದ್ದರೆ ನೀವೀಗ ಬೆಳ್ಳಿ ಖುರ್ಚಿಯ ಮೇಲೆ ಕುಳಿತಿರುತ್ತಿದ್ದಿರಿ' ಎಂದು ಸಹ ಅನಂತ ಕುಮಾರ್ ಹೆಗಡೆ ಹೇಳಿದ್ದರು.