"ಇನ್ನು 6 ತಿಂಗಳಲ್ಲಿ ಸೇನ ಹೇಳಹೆಸರಿಲ್ಲದಂತೆ ನಿರ್ನಾಮ"
ಬೆಂಗಳೂರು, ನವೆಂಬರ್ 25: ಶಿವಸೇನಾ ಇನ್ನು ಆರು ತಿಂಗಳಿನಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಬಿಜೆಪಿ ಸ್ಪರ್ಧೆ ಮಾಡಿದ್ದರೆ 2/3 ರಷ್ಟು ಬಹುಮತ ಸುಲಭವಾಗಿ ಸಿಗುತ್ತಿತ್ತು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
"ಚುನಾವಣಾ ಪೂರ್ವ ಮೈತ್ರಿಗೆ ಬೆಲೆ ಇಲ್ಲದ್ದಂತಾಗಿದೆ. ಬಿಜೆಪಿ ಹಳೆ ಗೆಳೆತನಕ್ಕೆ ಬೆಲೆ ನೀಡಿದ್ದೇ ತಪ್ಪಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಸರಳ ಬಹುಮತವಂತೂ ಬಂದೇ ಬರುತ್ತಿತ್ತು. ಇನ್ನಾರು ತಿಂಗಳಲ್ಲಿ ಶಿವಸೇನಾ ಎಂಬ ಪಕ್ಷ ಇತ್ತು ಎಂಬುದನ್ನು ಜನರು ಮರೆಯುತ್ತಾರೆ. ಸಂಪೂರ್ಣವಾಗಿ ನಿರ್ನಾಮವಾಗಲಿದೆ" ಎಂದು ಸದಾನಂದ ಗೌಡ ಹೇಳಿದರು.
ಯಡಿಯೂರಪ್ಪ ಬೆಚ್ಚುವಂತೆ ಮಾಡಿದ ಆಂತರಿಕ ಸಮೀಕ್ಷೆ ರಿಸಲ್ಟ್!
ಮಹಾರಾಷ್ಟ್ರದಲ್ಲಿ 106 ಸ್ಥಾನಗಳನ್ನು ಹೊಂದಿದ್ದೇವೆ. ಶಿವಸೇನಾ 56 ಸ್ಥಾನ ಗಳಿಸಿದೆ. ಬಿಜೆಪಿ ಹೆಚ್ಚು ಸ್ಥಾನ ಹೊಂದಿರುವ ಪಕ್ಷವಾಗಿದೆ. ಕಳೆದ 30 ವರ್ಷಗಳಿಂದ ನಮ್ಮ ಜೊತೆ ಇದ್ದ ಪಕ್ಷವು ಇಂದು ಅಧಿಕಾರ ದಾಹದಿಂದ ಅನ್ಯರ ಜೊತೆ ಕೈಜೋಡಿಸಲು ಮುಂದಾಗಿದ್ದು ದುರದೃಷ್ಟಕರ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿದ ಶಾಸಕರಿಗೆ ಅನರ್ಹರು ಎಂದು ಕರೆಯಲಾಯಿತು. ಅವರು ಜನರಿಂದ ಆಯ್ಕೆಯಾದವರು, ಇಂದು ಮತ್ತೊಮ್ಮೆ ಜನರ ಮುಂದೆ ಬಂದಿದ್ದಾರೆ. ಜನರ ಆಶೀರ್ವಾದದಿಂದ ಜಯಶೀಲರಾಗುತ್ತಾರೆ, ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ ಎಂದು ಹೇಳಿದರು.