ಗ್ರಾಹಕ ಹಕ್ಕು ಕುರಿತು ಬೆಂಗಳೂರಿನಲ್ಲಿ ವಿಚಾರಗೋಷ್ಠಿ
ಬೆಂಗಳೂರು, ಮಾ. 18 : ವಿಶ್ವ ಗ್ರಾಹಕ ದಿನಾಚರಣೆಯ ಅಂಗವಾಗಿ, ವಿದ್ಯಾರ್ಥಿಗಳಿಗೆ ದೂರವಾಣಿ ಹಕ್ಕುಗಳ ಬಗ್ಗೆ ತಿಳಿಯಪಡಿಸುವ ಉದ್ದೇಶದಿಂದ ರೇವಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಾಮರ್ಸ್ ವಿಭಾಗ ಮಾರ್ಚ್ 15ರಂದು ಬೆಂಗಳೂರಿನಲ್ಲಿ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿತ್ತು.
ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲುಗಳು ನಲಿದಾಡುತ್ತಿರುತ್ತವೆ. ಅವುಗಳ ಬಳಕೆ ಹೇಗೆಂಬುದನ್ನು ಪಿಎಚ್ಡಿ ವಿದ್ಯಾರ್ಥಿಗಳಂತೆ ಅರಿದು ಕುಡಿದಿರುತ್ತಾರೆ. ಆದರೆ, ಗ್ರಾಹಕರಾಗಿ ಅಗತ್ಯವಿರುವ ಸೇವೆ ಪಡೆಯುವ ಬಗ್ಗೆ ಅಥವಾ ತಮ್ಮ ಹಕ್ಕುಗಳ ಬಗ್ಗೆ ಹಲವಾರು ಯುವಕ ಯುವತಿಯರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. [ಮೊಬೈಲ್ ರಿಚಾರ್ಜ್ ಆನ್ ಲೈನ್]
ಗ್ರಾಹಕ ಹಕ್ಕುಗಳನ್ನು ತಿಳಿಯುವುದು ಮಾತ್ರವಲ್ಲ, ಗ್ರಾಹಕರಿಗೆ ಸೇವೆ ಸಲ್ಲಿಸುವ ಕುರಿತು ಕೂಡ ನಮಗೆ ಮಾಹಿತಿ ಇರಬೇಕು. ಈ ದೃಷ್ಟಿಯಿಂದ, 'ಗ್ರಾಹಕರ ಸಂತೃಪ್ತಿ ಎಲ್ಲಕ್ಕಿಂತ ಮಹತ್ವದ್ದು' ಎಂಬ ಸಂದೇಶವನ್ನು ಇಲ್ಲಿನ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಪ್ರತಿವರ್ಷ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಮಾ.15ರಂದು ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸರಕಾರದ TRAI ಸಲಹೆಗಾರರಾಗಿರುವ ಡಾ. ಸಿಬಿಚೆನ್ ಕೆ. ಮ್ಯಾಥ್ಯೂ ಅವರು, ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರನ್ನು ತೃಪ್ತಿಪಡಿಸುವುದು ಎಷ್ಟು ಮುಖ್ಯ ಎಂದು ವಿವರಿಸಿದರು. ಪ್ರತಿಯೊಬ್ಬರೂ ಇಂದಿನ ಮುಂದುವರಿದ ತಂತ್ರಜ್ಞಾನ ಮತ್ತು ಸೌಲಭ್ಯಗಳ ಸಕಾರಾತ್ಮಕ ಬಳಕೆಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ದಿವ್ಯಶ್ರೀ ಮತ್ತು ಸುದೀಪ್ ಚೌಧರಿ ಅವರನ್ನು ಸನ್ಮಾನಿಸಲಾಯಿತು. ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ. ಶ್ಯಾಮರಾಜು, ರತ್ನಾಕರ ಬ್ಯಾಂಕ್ ನ ಉಪಾಧ್ಯಕ್ಷ ಕೃಷ್ಣ ಮತ್ತು ಸ್ಕೂಲ್ ಆಫ್ ಕಾಮರ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಹಿಮಾಚಲಂ ದಾಸರಾಜು ಅವರು ಉಪಸ್ಥಿತರಿದ್ದರು.