ಹೆಗಲ ಮೇಲೆ 'ಕೈ': ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸೆಲ್ಫಿ ಸಮರ!
ಬಾಗಲಕೋಟೆ, ಜುಲೈ 12: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯ ಹೆಗಲ ಮೇಲೆ ಅಭಿಮಾನಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಕೆಪಿಸಿಸಿ ಅಧ್ಯಕ್ಷರಿಗೇ ತಿರುಗೇಟು ನೀಡುವ ಧಾಟಿಯಲ್ಲಿದೆ.
Recommended Video
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ ಎಂ ದೊಡ್ಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹೆಗಲ ಮೇಲೆ ಕೈ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದರು. ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್ಸೆನ್ಸ್ ಇಲ್ವಾ ಎಂದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಕಾಂಗ್ರೆಸ್ ಕಾರ್ಯಕರ್ತನ ಕಪಾಳಕ್ಕೆ ಹೊಡದಿರುವ ಬಗ್ಗೆ ಸ್ವತಃ ಡಿ ಕೆ ಶಿವಕುಮಾರ್ ಸ್ಪಷ್ಟನೆಯನ್ನೂ ಕೊಟ್ಟಿದ್ದರು. "ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನ್ ಅರ್ಥ? ಹೆಗಲ ಮೇಲೆ ಕೈ ಹಾಕಿದರೆ ನೋಡುವವರು ಏನು ತಿಳಿದುಕೊಳ್ಳುತ್ತಾರೆ?, ಇಂಥದ್ದಕ್ಕೆಲ್ಲಾ ಅವಕಾಶ ಕೊಡಲು ಆಗುತ್ತಾ?,'' ಎನ್ನುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಸಿದ್ದರಾಮಯ್ಯ ಹೆಗಲ ಮೇಲೆ ಕೈ ಹಾಕಿದ ಅಭಿಮಾನಿ:
ಮಂಡ್ಯದಲ್ಲಿ ಒಂದು ಕಡೆ ಪಕ್ಷದ ಕಾರ್ಯಕರ್ತನೇ ತಮ್ಮ ಹೆಗಲ ಮೇಲೆ ಕೈ ಹಾಕಲು ಮುಂದಾಗಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಪಾಳಮೋಕ್ಷ ಮಾಡುತ್ತಾರೆ. ಇದಕ್ಕೆ ತದ್ವಿರುದ್ಧ ಎನ್ನುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಜೊತೆ ಆತ್ಮೀಯವಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆ. ಈ ಫೋಟೋದಲ್ಲಿ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮರ:
ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಗೆ ಸಂಬಂಧಿಸಿದಂತೆ ಎರಡು ನಾಯಕರ ಬೆಂಬಲಿಗರು ಹಾಗೂ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಸಿದ್ದು ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ನಾಯಕರ ನಡುವೆ ಫೋಟೋ ಸಮರ ಶುರುವಾದಂತೆ ಕಾಣುತ್ತಿದೆ. ಇಬ್ಬರು ನಾಯಕರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಡುವಿನ ಈ ಸಮರ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಏನೋ ಎಂದು ಕಾದುನೋಡಬೇಕಿದೆ.