ಫೆಬ್ರವರಿ 1ರಿಂದ ಕಸ ವಿಂಗಡಣೆ ಮಾಡದಿದ್ದರೆ ಬೀಳುತ್ತೆ ದಂಡ!
ಫೆಬ್ರವರಿ 1ರಿಂದ ದಂಡ ವಸೂಲಾತಿ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕಿಸದ ನಾಗರಿಕರ ಮೇಲೆ ದಂಡ ವಿಧಿಸಲು ಬಿಬಿಎಂಪಿ ಸಜ್ಜಾಗಿದೆ.
ಬೆಂಗಳೂರು, ಜನವರಿ 31: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಕೈಗೆ ಪ್ರತಿ ದಿನ ಬೆಳಗ್ಗೆ ವಿಂಗಡಿಸದ ಕಸವನ್ನು ಯಥಾವತ್ತಾಗಿ ನೀಡಲು ಹೋದರೆ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತೆ.
ತ್ಯಾಜ್ಯದಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಲೇಬೇಕೆಂದು ಈಗಾಗಲೇ ಸಾಕಷ್ಟು ಪ್ರಚಾರವನ್ನೂ ನೀಡಿದೆ. ಕಸವನ್ನು ವಿಂಗಡಿಸದೇ ಇದ್ದರೆ ದಂಡ ವಿಧಿಸುವುದಾಗಿಯೂ ಈಗಾಗಲೇ ಸಾಕಷ್ಟು ಬಾರಿ ಹೇಳಿದೆ. ಬಿಬಿಎಂಪಿ ನೀಡುತ್ತಿದ್ದ ಈ ಎಚ್ಚರಿಕೆ ಇನ್ನು ಕೇವಲ ಎಚ್ಚರಿಕೆಯಾಗಿ ಮಾತ್ರವೇ ಉಳಿಯುವುದಿಲ್ಲ.
ಫೆಬ್ರವರಿ 1ರಿಂದ ದಂಡ ವಸೂಲಾತಿ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕಿಸದ ನಾಗರಿಕರ ಮೇಲೆ ದಂಡ ವಿಧಿಸಲು ಬಿಬಿಎಂಪಿ ಸಜ್ಜಾಗಿದೆ. ಅಲ್ಲದೆ, ಇನ್ನು ಮುಂದೆ ಮಕ್ಕಳ ಡೈಪರ್ ಗಳನ್ನೂ ಪೌರ ಕಾರ್ಮಿಕರು ಸ್ವೀಕರಿಸಲಿದ್ದಾರೆಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತರಾದ ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ದಂಡ ವಸೂಲಾತಿ ಎಷ್ಟು ಮತ್ತು ಹೇಗೆ?: ಮೊದಲ ಬಾರಿ ನಿಯಮ ಉಲ್ಲಂಘಿಸುವ ನಾಗರಿಕರಿಗೆ ಮೊದಲ ವಾರ 100 ರು. ದಂಡ ವಿಧಿಸಲಾಗುವುದು. ಆನಂತರವೂ ಇದೇ ತಪ್ಪುಗಳು ಮರುಕಳಿಸಿದರೆ, ದಂಡದ ಪ್ರಮಾಣ ಹೆಚ್ಚಾಗುತ್ತಾ ಸಾಗುತ್ತದೆ.
ಒಂದು ವೇಳೆ, ದಂಡವನ್ನು ಪಾವತಿಸಲು ನಿರಾಕರಿಸಿದಲ್ಲಿ, ಆ ನಾಗರಿಕರು ಇರುವ ಮನೆಯ ವಾರ್ಷಿಕ ಕಂದಾಯವನ್ನು ಪಾವತಿಸುವ ವೇಳೆ ದಂಡವನ್ನು ವಸೂಲಿ ಮಾಡಲಾಗುತ್ತದೆ ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ತಪ್ಪು ಮಾಡುವ ನಾಗರಿಕರು, ಬಾಡಿಗೆದಾರರಾಗಿದ್ದರೆ ಅವರ ಮನೆ ಮಾಲೀಕರ ಮೇಲೆ ಈ ದಂಡದ ಹೊರೆ ಬೀಳುವುದಲ್ಲದೆ, ಅದು ಮತ್ತೊಂದು ಸಮಸ್ಯೆಗೆ ನಾಂದಿ ಹಾಡುತ್ತದೆ. ಹಾಗಾಗಿ, ಮುಂದೊದಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಆಯಾ ಮನೆಯ ಮಾಲೀಕರೇ ಮುತುವರ್ಜಿ ವಹಿಸಿ ಕಸ ವಿಲೇವಾರಿಗೆ ಬಗ್ಗೆ ಬಾಡಿಗೆದಾರರ ಮೇಲೆ ಹತೋಟಿ ಸಾಧಿಸಬೇಕಿದೆ.