ಸಾವಿಗೇನು ಕಾರಣ: ಬೆಂಗಳೂರಿನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳೇ ಇಲ್ಲ!
ಬೆಂಗಳೂರು, ಮಾರ್ಚ್ 29: ಕೊರೊನಾವೈರಸ್ ಸೋಂಕಿನ ಹೊಡೆತಕ್ಕೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಮೂರು ದಿನಗಳಲ್ಲಿ ಕೊವಿಡ್-19 ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ 51 ರಿಂದ 79ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ತುರ್ತು ನಿಗಾ ಘಟಕ(ICU)ದ ಹಾಸಿಗೆಗಳ ಕೊರತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮಾರ್ಚ್ 25ರಂದು 51 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಾರ್ಚ್ 28ರ ವೇಳೆಗೆ ಈ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.
ಹೊಸ ದಾಖಲೆ: ಕರ್ನಾಟಕದಲ್ಲಿ 60 ವರ್ಷ ಮೇಲ್ಪಟ್ಟವರಿಗೇ ಹೆಚ್ಚು ಲಸಿಕೆ!
2020ರ ಡಿಸೆಂಬರ್ ತಿಂಗಳ ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ತುರ್ತು ನಿಗಾ ಘಟಕದ ಹಾಸಿಗೆಗಳ ಅಭಾವ ಹೆಚ್ಚಾಗುತ್ತದೆ. ಫೆಬ್ರವರಿ 25ರಂದು 121 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಖ್ಯೆ ಮಾರ್ಚ್ 4ರ ವೇಳೆಗೆ 49ಕ್ಕೆ ಇಳಿಕೆಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕೊವಿಡ್-19 ಸೋಂಕಿತ ಪ್ರಕರಣ ಮತ್ತು ಐಸಿಯು ಸಂಖ್ಯೆಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಸೋಂಕಿತರ ಸಾವಿನೆ ಆಮ್ಲಜನಕ ಕೊರತೆ ಕಾರಣ
ಬೆಂಗಳೂರಿನಲ್ಲಿ ಪ್ರಸ್ತುತ ಏರಿಕೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೊಸ ಆತಂಕವನ್ನು ಸೃಷ್ಟಿಸಿದೆ. ಸದ್ಯಕ್ಕೆ ಜಾರಿಯಲ್ಲಿರುವ ಹಾಸಿಗೆ ವ್ಯವಸ್ಥೆಯ ಹೀಗೆ ಮುಂದುವರಿದಲ್ಲಿ ಮುಂದೆ ಐಸಿಯು ವ್ಯವಸ್ಥೆಯುಳ್ಳ ಹಾಸಿಗೆಗಳ ಕೊರತೆ ಎದುರಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕಳೆದ 2020ರ ಜೂನ್ ಮತ್ತು ಆಗಸ್ಟ್ ತಿಂಗಳ ನಡುವಿನಲ್ಲಿ ಸಾಕಷ್ಟು ಮಂದಿ ಸೋಂಕಿತರು ಆಕ್ಸಿಜನ್ ಯುಕ್ತ ಹಾಸಿಗೆಗಳ ವ್ಯವಸ್ಥೆ ಇಲ್ಲದೇ ಪ್ರಾಣ ಬಿಟ್ಟಿದ್ದರು. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಪ್ರತ್ಯೇಕ ವಿಭಾಗವನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ತೆರೆಯುವುದಕ್ಕೆ ಸೂಚಿಸಲಾಗಿತ್ತು.
ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆ
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ತುರ್ತು ನಿಗಾ ಘಟಕದ ಹಾಸಿಗೆಗಳಲ್ಲಿ ವ್ಯತ್ಯಯ ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಮತ್ತು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತೊಮ್ಮೆ ಐಸಿಯು ಹಾಸಿಗೆಗಳನ್ನು ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸಾವಿನ ಕೇಸ್
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ ಕ್ರಮೇಣ ಏರಿಕೆ ಆಗುತ್ತಿದೆ. ಸಿಲಿಕಾನ್ ಸಿಟಿಯೊಂದರಲ್ಲೇ ಕಳೆದ ಫೆಬ್ರವರಿ ತಿಂಗಳಿನಲ್ಲಿ 88 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, ಮಾರ್ಚ್ 28ರವರೆಗೂ 98 ಜನರು ಪ್ರಾಣ ಬಿಟ್ಟಿದ್ದಾರೆ.
Recommended Video
ರಾಜ್ಯದಲ್ಲಿ 2792 ಜನರಿಗೆ ಕೊವಿಡ್-19 ಸೋಂಕು
ಕರ್ನಾಟಕದಲ್ಲಿ ಒಂದೇ ದಿನ 2792 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 989804ಕ್ಕೆ ಏರಿಕೆಯಾಗಿದ್ದು, 2,3849 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳಲ್ಲಿ 16 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.