ರಾಷ್ಟ್ರಪತಿ ಸೇವಾ ಪದಕ ಗೌರವಕ್ಕೆ ಪಾತ್ರರಾದ ಅಧಿಕಾರಿಯ ಸೀಕ್ರೇಟ್ ಸ್ಟೋರಿ
ಬೆಂಗಳೂರು, ಜನವರಿ 25: "ಕಪ್ಪು ಬಣ್ಣದ ಸ್ಯಾಂಟ್ರೋ ಕಾರು, ಅದರ ಒಂದು ಸಂಖ್ಯೆ 8 " ಈ ಸಣ್ಣ ಎಳೆ ಇಟ್ಟುಕೊಂಡು ಜಾರ್ಖಂಡ್ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕಿರಾತಕರನ್ನು 20 ಕಿ.ಮೀ. ಬೆನ್ನಟ್ಟಿ ಎಡೆಮುರಿ ಕಟ್ಟುವಲ್ಲಿ ಆಗಿನ ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ ಆಗಿದ್ದ ವಿ.ಕೆ. ವಾಸುದೇವ್ ಯಶಸ್ವಿಯಾಗಿದ್ದರು. ಇವರು ಕಾರ್ಯಾಚರಣೆಯಿಂದಲೇ ರೇಪಿಸ್ಟ್ ಶಂಕರ್ ಎಂಬಾತ ಎನ್ ಕೌಂಟರ್ ಆಗಿದ್ದ ! ಸದ್ಯ ಡಿವೈಎಸ್ಪಿಯಾಗಿ ಡಿಜಿಪಿ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿ.ಕೆ. ವಾಸುದೇವ್ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ನೀಡಿ ಗೌರವಿಸಿದೆ.
ಇಪ್ಪತ್ತೆರಡು ವರ್ಷಗಳ ಪೊಲೀಸ್ ಸೇವೆಯಲ್ಲಿ ಅಮೂಲ್ಯವಾದ ಪ್ರಕರಣಗಳನ್ನು ವಾಸುದೇವ್ ಪತ್ತೆ ಮಾಡಿದ್ದರು. ದೆಹಲಿಯ ಗ್ಯಾಂಗ್ ರೇಪ್ ಗಿಂತಲೂ ಘೋರವಾಗಿದ್ದ ಜಾರ್ಖಂಡ್ ಮೂಲದ ಯುವತಿಯ ಗ್ಯಾಂಗ್ ರೇಪ್ ಪ್ರಕರಣವನ್ನು ಸಣ್ಣ ಎಳೆ ಆಧರಿಸಿ ಪತ್ತೆ ಮಾಡಿದ್ದರು. ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿ ಆಗಿನ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಬಿದರಿ ವಾಸುದೇವ್ ಅವರ ಸೇವೆ ಕೊಂಡಾಡಿದ್ದರು.
ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ
ಗ್ಯಾಂಗ್ ರೇಪ್ :
ವಿ.ಕೆ. ವಾಸುದೇವ್ ಸುಳಿವಿಲ್ಲದ ಕೊಲೆ, ದರೊಡೆ, ಅಪಹರಣ ಪ್ರಕರಣ ಪತ್ತೆ ಮಾಡುವ ಮೂಲಕವೇ ಪೊಲೀಸ್ ಇಲಾಖೆಯಲ್ಲಿ ಪರಿಚಿತರು. ಆದರೆ, 2011 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣವನ್ನು ನಾಚಿಸುವಂತಿತ್ತು. ಸ್ನೇಹಿತನೊಂದಿಗೆ ಸಿನಿಮಾ ನೋಡಿಕೊಂಡು ರಾತ್ರಿ ಮನೆಗೆ ಹೊಗುವಾಗ, ಅಡ್ಡಗಟ್ಟಿದ ದುಷ್ಕರ್ಮಿಗಳು ಅನೇಕಲ್ ಸಮೀಪದ ಮಾವಿನ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಆಕೆಯ ಜತೆಯಿದ್ದ ಗೆಳೆಯನಿಗೆ ಹಲ್ಲೆ ಮಾಡಿ ಯುವತಿಯನ್ನು ಅಪಹರಿಸಿದ್ದರು. ಸಾಮೂಹಿಕ ಅತ್ಯಾಚಾರದ ಬಳಿಕ ಬೆತ್ತಲೆಯಾಗಿ ಆಕೆಯನ್ನು ಬಿಟ್ಟು ಹೋಗಿದ್ದರು. ರಸ್ತೆ ಬದಿ ಆಕೆಯ ಸ್ಥಿತಿ ನೋಡಿ ವ್ಯಕ್ತಿಯೊಬ್ಬರು ತನ್ನ ಬಟ್ಟೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ವಿಚಾರಣೆ ವೇಳೆ ಆಕೆ ನೀಡಿದ್ದ ಸುಳಿವು ಬ್ಲಾಕ್ ಸ್ಯಾಂಟ್ರೋ ಕಾರು. ಅದರ ಒಂದು ಸಂಖ್ಯೆ ಎಂಟು ಅಂತ ಬರೆದಿತ್ತು. ಎಂಬುದು. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ವಾಸುದೇವ್ ಅವರ ಠಾಣಾ ವ್ಯಾಪ್ತಿಯ ನೆರೆಯ ಠಾಣೆಯಲ್ಲಿ ನಡೆದಿದ್ದ ಪ್ರಕರಣ. ಪೊಲೀಸರು ಅತ್ಯಾಚಾರಿಗಳ ಬೇಟೆಗೆ ಇಳಿದಿದ್ದರು.
ಸಣ್ಣ ಸುಳಿವು:
ಅತ್ಯಾಚಾರ ನಡೆಯುವ ಮುನ್ನ ನೈಸ್ ರಸ್ತೆಯಲ್ಲಿ ಡಕಾಯಿತನೊಬ್ಬ ದರೋಡೆಗೆ ಹೋಗಿದ್ದ. ದರೋಡೆ ಮಾಡಲು ಹೊಂಚು ಹಾಕಿದ್ದ ವೇಳೆ ಇದೇ ಅತ್ಯಾಚಾರಿ ಗ್ಯಾಂಗ್ ಡಕಾಯಿತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೆ ಒಳಗಾಗಿದ್ದ ಡಕಾಯಿತ ವಿಲ್ಸನ್ ಗಾರ್ಡನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈತನಿಗೂ ಹಲ್ಲೆ ನಡೆಸಿದ್ದವರು ಬ್ಲಾಕ್ ಸ್ಯಾಂಟ್ರೋ ಕಾರು ಎಂಬ ಮಾಹಿತಿಯನ್ನು ವಾಸುದೇವ್ ಅವರು ಮಾಹಿತಿದಾರರ ಮೂಲಕ ಕಲೆ ಹಾಕಿದ್ದರು. ತಲೆಯಲ್ಲಿ ಬ್ಲಾಕ್ ಸ್ಯಾಂಟ್ರೋ ಕಾರೂ ಬಿಟ್ಟರೆ ಏನೂ ಇರಲಿಲ್ಲ. ಘಟನೆ ನಡೆದ ದಿನವೇ ಡಕಾಯಿತ ಕೂಡ ಹಲ್ಲೆಗೆ ಒಳಗಾಗಿದ್ದರಿಂದ ಬ್ಲಾಕ್ ಸ್ಯಾಂಟ್ರೋ ಕಾರಿನಲ್ಲಿದ್ದವರೇ ಈ ಕೃತ್ಯ ಎಸಗಿರಬಹುದೇ ಎಂಬ ಸಂಶಯ ಮೂಡಿತ್ತು. ಇದು ನಿಜವಾಗಿತ್ತು ಕೂಡ.
ಒಮ್ಮೆ ಪರಪ್ಪನ ಅಗ್ರಹಾರ
ಒಮ್ಮೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಲಿ ನಿವೇಶನದಲ್ಲಿ ಬ್ಲಾಕ್ ಸ್ಯಾಂಟ್ರೋ ಕಾರು ನಿಂತಿತ್ತು. ಗಸ್ತಿನಲ್ಲಿದ್ದ ವಿ.ಕೆ. ವಾಸುದೇವ್ ಅವರಿಗೆ ಯುವತಿಯ ಅತ್ಯಾಚಾರ ಪ್ರಕರಣದ ಸ್ಯಾಂಟ್ರೋ ಕಾರು ನೆನಪಿಗೆ ಬಂದಿತ್ತು. ನಂಬರ್ ನೋಡಿದಾಗ ಅನುಮಾನ ಇನ್ನಷ್ಟು ಬಲವಾಗಿತ್ತು. ಕೂಡಲೇ ಆರೋಪಿಗಳನ್ನು ಬಂಧಿಸಲು ಯತ್ನಿಸಿದ್ದರು. ಪೊಲೀಸ್ ಪೇದೆ ಶ್ರೀಶೈಲ ಇಟ್ಟಗಿ ಮೇಲೆ ಕಾರು ಹತ್ತಿಸಲು ಯತ್ನಿಸಿದ ಆರೋಪಿಗಳು ಪರಾರಿಯಾಗಿದ್ದರು. ಅವರ ಕಾರನ್ನು ಬೆನ್ನಟ್ಟಿದ್ದ ವಾಸುದೇವ್ ಅವರು ಪರಪ್ಪನ ಅಗ್ರಹಾರದಿಂದ ಅಡುಗೋಡಿ ಸಿಗ್ನಲ್ ವರೆಗೂ ಚೇಸ್ ಮಾಡಿದ್ದರು. ಸಾರ್ವಜನಿಕರು ಯಾವುದೇ ಸಿನಿಮಾ ಎಂದೇ ಭಾವಿಸಿ ಯಾರೂ ನೆರವಿಗೆ ಧಾವಿಸಿರಲಿಲ್ಲ. ಇ ವೇಳೆ ಸೋಮಶೇಖರ ಎಂಬ ಆರೋಪಿಯನ್ನು ವಾಸುದೇವ್ ಬಂಧಿಸಿದ್ದರು.
ಈತನ ವಿಚಾರಣೆ ಬಳಿಕ ಸರಣಿ ರೇಪಿಸ್ಟ್ ಶಂಕರನ ಸಹಚರರು ಜಾರ್ಖಂಡ್ ಮೂಲದ ಯುವತಿಯನ್ನು ಅಪಹರಿಸಿ ಮಾವಿನ ತೋಟದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದನ್ನು ತಪ್ಪೊಪ್ಪಿಕೊಂಡಿದ್ದ ಆರೋಪಿ. ಸೋಮಶೇಖರ್ ನೀಡಿದ ಮಾಹಿತಿ ಮೇರೆಗೆ ಪ್ರಮುಖ ಆರೋಪಿ ಶಂಕರ್ ನನ್ನು ಪೊಲೀಸರು ಬಂಧಿಸಲು ಯತ್ನಿಸಿದ್ದರು. ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದ ರೇಪಿಸ್ಟ್ ಗೆ ಗುಂಡು ಹಾರಿಸಿ ಎನ್ಕೌಂಟರ್ ಮಾಡಿದ್ದರು. ಬೆಂಗಳೂರಿನಲ್ಲಿ ಸದ್ದಿಲ್ಲದೇ ಸರಣಿ ಅತ್ಯಾಚಾರಿ ಗ್ಯಾಂಗ್ ನ್ನು ಮಟ್ಟಹಾಕುವಲ್ಲಿ ವಿ.ಕೆ. ವಾಸುದೇವ್ ಪ್ರಮುಖ ಪಾತ್ರ ವಹಿಸಿದ್ದರು.
Recommended Video
ಜೈಲಿನಲ್ಲಿದ್ದಕೊಂಡೇ ಸಿಗರೇಟ್ ಪ್ಯಾಕ್
ಜೈಲಿನಲ್ಲಿದ್ದಕೊಂಡೇ ಸಿಗರೇಟ್ ಪ್ಯಾಕ್ ನಲ್ಲಿ ಜಾಮರ್ ನಿಷ್ಕ್ರಿಯ ಗೊಳಿಸುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಎ.ಕೆ. ಸಿಂಗ್ ಎಂಬ ಅಂತರಾಜ್ಯ ಡಕಾಯಿತನ ಇಬ್ಬರು ಸಹಚರರನ್ನು ಆಡುಗೋಡಿ ಪೊಲೀಸ್ ಇನ್ಸ್ಪೆಕ್ಟರ್ ಅಗಿದ್ದ ವಿ.ಕೆ. ವಾಸುದೇವ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಎಕೆ. ಸಿಂಗ್ ಕೂಡ ಬೆಂಗಳೂರಿನಲ್ಲಿ ಎನ್ಕೌಂಟರ್ ಆಗಿದ್ದು ಇತಿಹಾಸ. ಬೆಂಗಳೂರಿನ ನಿದ್ದೆ ಗೆಡಿಸಿದ್ದ ಸರಣಿ ರೇಪಿಸ್ಟ್, ಅಂತಾರಾಜ್ಯ ಡಕಾಯಿತರ ಸೊಕ್ಕು ಮುರಿಯುವ ಮೂಲಕ ವಾಸುದೇವ್ ಪೊಲೀಸ್ ಇಲಾಖೆಯಲ್ಲಿ ವಾಸಣ್ಣ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಅವರ ಈ ಎಲ್ಲಾ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಿದೆ.