ದಿ. ಧರ್ಮಸಿಂಗ್ ಸೋದರ ಸಂಬಂಧಿ ಸುಪಾರಿ ಹತ್ಯೆಯ ಸೀಕ್ರೇಟ್ !
ಬೆಂಗಳೂರು, ಫೆಬ್ರವರಿ 04: ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿಯ ಪುತ್ರ ಸಿದ್ಧಾರ್ಥ ಸಿಂಗ್ ಹತ್ಯೆಗೆ ಸುಪಾರಿ ಕೊಟ್ಟಿದ್ದು ಒಬ್ಬ ಮಹಿಳೆ !. ಆಕೆಯ ಸೂಚನೆ ಮೇರೆಗೆ ಕಾರಿನಲ್ಲಿ ಕೂತಿದ್ದ ಸಿದ್ಧಾರ್ಥ ನನ್ನು ಸೀಟ್ ಬೆಲ್ಟ್ ನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಕಾಡಿನಲ್ಲಿ ಹೂತಾಕಲು ಸಲಕರಣೆ ಇಲ್ಲದ ಕಾರಣ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚಿ ಬಂದಿದ್ದರು !
ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿಯ ಪುತ್ರ ಸಿದ್ಧಾರ್ಥ ಸಿಂಗ್ ಕೊಲೆ ಪ್ರಕರಣದ ರಹಸ್ಯವನ್ನು ಅಮೃತಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ. ಸಿದ್ಧಾರ್ಥ ಸಿಂಗ್ ಅವರ ಮಲತಾಯಿ ಇಂದು ಚವ್ಹಾಣ್ ಸಿಂಗ್ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ಧಾರ್ಥ ಸಿಂಗ್ ಅವರ ತಂದೆ ದೇವೇಂದರ್ ಸಿಂಗ್ ಎರಡು ಮದುವೆಯಾಗಿದ್ದು, ಆಸ್ತಿಗಾಗಿ ಇಂದು ಚವ್ಹಾಣ್ ಸಿಂಗ್ ಸುಪಾರಿ ನೀಡಿ ಕೊಲೆ ಮಾಡಿಸಿರುವ ಸಂಗತಿ ಹೊರ ಬಿದ್ದಿದೆ.
ದಿ. ಧರ್ಮಸಿಂಗ್ ಸೋದರ ಸಂಬಂಧಿ ಪುತ್ರನನ್ನು ಅಪಹರಿಸಿ ಹತ್ಯೆ
ಮೊಬೈಲ್ ಕ್ಲೂ: ಸಿದ್ಧಾರ್ಥ ಸಿಂಗ್ ಅಮೆರಿಕಾಗೆ ಹೋಗುವುದಾಗಿ ಹೇಳಿ ದಾಸರಹಳ್ಳಿಯ ಅಪಾರ್ಟ್ ಮೆಂಟ್ ನಿಂದ ತೆರಳಿದವರು ವಾಪಸು ಬಂದಿರಲಿಲ್ಲ. ಆಂಧ್ರ ಪ್ರದೇಶದ ನೆಲ್ಲೂರು ಕಾಡಿನಲ್ಲಿ ಸಿದ್ದಾರ್ಥ ಸಿಂಗ್ ನ ಮೃತ ದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಮೃತಹಳ್ಳಿ ಪೊಲೀಸರು ವಿನೋದ್ ಎಂಬ ಅರೋಪಿಯನ್ನು ಬಂಧಿಸಿದ್ದರು. ಎರಡನೇ ಅರೋಪಿ ಶ್ಯಾಮ್ ಪೊಲೀಸರಿಗೆ ಹೆದರಿ ತಿರುಪತಿಯ ಲಾಡ್ಜ್ ವೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಧಿತ ವಿನೋದ್ ಮೊಬೈಲ್ ಕರೆಗಳನ್ನು ಪೊಲೀಸರು ಅನ್ವೇಷಣೆ ಮಾಡಿದಾಗ ಸಿದ್ದಾರ್ಥ ಸಿಂಗ್ ಹತ್ಯೆ ಬಳಿಕ ಇಂದು ಸಿಂಗ್ ಚವ್ಹಾಣ್ ಆರೋಪಿಯ ಜತೆ ಮೊಬೈಲ್ ನಲ್ಲಿ ಸಂಪರ್ಕದಲ್ಲಿದ್ದರು. ಮೊಬೈಲ್ ನೀಡಿದ ಕ್ಲೂ ನಿಂದ ಆಕೆಯನ್ನು ಪೊಲೀಸರು ವಶಕಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಸಂಗತಿ ಹೊರ ಬಿದ್ದಿದೆ.
Recommended Video
ಶವ ಹೂತಲು ಪರದಾಟ: ಮೃತ ಸಿದ್ದಾರ್ಥ ಸಿಂಗ್ ಮರಣೋತ್ತರ ಪರೀಕ್ಷೆ ನಡೆಸಿದಾಗ ಉಸಿರು ಗಟ್ಟಿಸಿ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಕೂತಿದ್ದ ಸಿದ್ಧಾರ್ಥ ಗೆ ಬೆಲ್ಟ್ ನಿಂದ ಉಸಿರು ಗಟ್ಟಿಸಿ ಶ್ಯಾಮ್ ಎಂಬಾತ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಕಾರಿನಲ್ಲಿ ಮೃತ ದೇಹವನ್ನು ನೆಲ್ಲೂರಿನ ಅರಣ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಗುಣಿ ತೋಡಲು ಸಲಕರಣೆ ಇಲ್ಲದ ಕಾರಣ ಹಳ್ಳವನ್ನು ಹುಡುಕಾಡಿದ್ದಾರೆ. ತೇವವಿದ್ದ ಜಾಗದಲ್ಲಿ ಮರದ ಕೊಂಬೆ ಹಾಗೂ ಜಾಕ್ ರಾಡ್ ನಿಂದ ಒಂದು ಅಡಿಯಷ್ಟು ಗುಣಿ ತೆಗೆದು ದೇಹ ಹಾಕಿ ಮಣ್ಣು ಹಾಕಿದ್ದರು. ಅಲ್ಲಿಂದ ಕಾಲ್ಕಿತ್ತಿದ್ದ ವಿನೋದ್ ಮತ್ತು ಶ್ಯಾಮ್ ಮಾರ್ಗ ಮಧ್ಯದಲ್ಲಿ ಮದ್ಯ ಖರೀದಿಸಿ ತಿರುಪತಿಗೆ ತೆರಳಿದ್ದರು. ಆರೋಪಿ ವಿನೋದ್ ಬಂಧನವಾಗುತ್ತಿದ್ದಂತೆ ಪೊಲೀಸರ ತನಿಖೆಗೆ ಹೆದರಿ ಶ್ಯಾಮ್ ನೇಣು ಹಾಕಿಕೊಂಡು ಸಾವನ್ನಪ್ಪಿದ್ದ. ಸಿದ್ಧಾರ್ಥ ನ ಮಲತಾಯಿಯನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಇದರ ಮತ್ತಷ್ಟು ವೃತ್ತಂತ ಹೊರ ಬೀಳಲಿದೆ.