ದ್ವಿತೀಯ ವಿಶ್ವ ಹವ್ಯಕ, ಅಮೃತ ಮಹೋತ್ಸವ ಸಮ್ಮೇಳನಕ್ಕೆ ವೈಭವದ ಚಾಲನೆ
ದ್ವಿತೀಯ ವಿಶ್ವ ಹವ್ಯಕ, ಅಮೃತ ಮಹೋತ್ಸವ ಸಮ್ಮೇಳನಕ್ಕೆ ವೈಭವದ ಚಾಲನೆ
ಬೆಂಗಳೂರು, ಡಿ 28: ವ್ಯಕ್ತಿಗೂ ಸಂಸ್ಥೆಗೂ ವ್ಯತ್ಸಾಸವಿದೆ. 75 ವರ್ಷಕ್ಕೆ ವ್ಯಕ್ತಿ ವೃದ್ದಾಪ್ಯ ಹೊಂದಿ ಮರಣಕ್ಕೆ ಹತ್ತಿರವದರೇ, ಸಂಸ್ಥೆ 75 ವರ್ಷ ಪೂರೈಸಿದಾಗ ಅಮೃತವಾಗುತ್ತದೆ. ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ವ್ಯಕ್ತಿ ದುರ್ಬಲನಾದರೆ ಸಂಸ್ಥೆ ಮತ್ತಷ್ಟು ಸಶಕ್ತವಾಗುತ್ತದೆ.
ಅಂತಹ 75 ವರ್ಷಗಳನ್ನು ಪೂರೈಸಿದ ಅಖಿಲ ಹವ್ಯಕ ಮಹಾಸಭೆಗೆ ಪರ್ಯಾಯ ಇಲ್ಲ. ಇನ್ನೊಂದಲ್ಲ ಹನ್ನೊಂದು ಒಕ್ಕೂಟಗಳನ್ನು ಕಟ್ಟಬಹುದು, ಆದರೆ ಏಳು ದಶಕಗಳನ್ನು ಪೂರೈಸಿದ ಈ ಸಂಸ್ಥೆಯ ಸೇವೆ, ತ್ಯಾಗಗಳಿಗೆ ಪರ್ಯಾಯವಿಲ್ಲ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. (ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಕ್ಷಣಗಣನೆ)
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ (ಡಿ 28) ಆರಂಭವಾದ ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಹಿಂದೆ ರಾಜ ಮಯೂರವರ್ಮ ದೇಶದಲ್ಲಿ ಶ್ರೇಷ್ಠ ವೇದ ವಿದ್ವಾಂಸರನ್ನು ಹುಡುಕಿ ಅವನ ದೇಶಕ್ಕೆ ಕರೆತರಲು ಹೊರಟ ಅವನು ಹವ್ಯಕರನ್ನು ತನ್ನ ದೇಶಕ್ಕೆ ಕರೆತಂದ, ಇದರಿಂದ ಹವ್ಯಕರು ಸರ್ವಶ್ರೇಷ್ಠ ಎಂಬುದು ನಿರೂಪಿತವಾಗುತ್ತದೆ ಎಂದು ಶ್ರೀಗಳು ಹೇಳಿದರು.
ಐತಿಹಾಸಿಕವಾದ ಈ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸರ್ವರಿಗೂ ಅವಕಾಶ ಕೊಟ್ಟದ್ದು ಶ್ಲಾಘನೀಯ. ಎಲ್ಲರ ಜೊತೆಗೆ ಒಟ್ಟಾಗಿ, ಸಹಬಾಳ್ವೆ ಮಾಡಿದ ಪರಂಪರೆ ಹವ್ಯಕರದ್ದು. ಹವ್ಯಕ ಸಮಾಜ ಎಂದೆದಿಗೂ ಇನ್ಕ್ಲೂಸಿವ್ ಪರಂಪರೆಯನ್ನು ಹೊಂದಿರುವಂತದ್ದು.
ಸಂಘಟನೆಗೆ ಬೆಳೆಯಲು ಇದು ಮುಖ್ಯ. ಆದರೆ ಪ್ರತಿಷ್ಠೆ ಸಂಘಟನೆಗೆ ಮಾರಕ, ನನ್ನನ್ನು ಮೇಲಿಡು, ಅವನನ್ನು ಕರೆಯಬೇಡ ಎಂಬುದು ಹವ್ಯಕ ಸಂಸ್ಕೃತಿಯಲ್ಲ. ನಾನು ಬರುವುದಿಲ್ಲ, ಆದರೆ ಕಾರ್ಯಕ್ರಮ ಚನ್ನಾಗಿ ಆಗಲಿ ಎಂದು ಹೇಳುವುದು ದೇವತ್ವ, ನನ್ನನ್ನು ಆಹ್ವಾನಿಸು, ಅವರನ್ನೂ ಆಹ್ವಾನಿಸು ಎಂಬುದು ಮನುಷ್ಯತ್ವ. ಎಲ್ಲರನ್ನೂ ಕರೆಯುವುದು, ಎಲ್ಲರ ಜೊತೆ ಸಾಗುವುದು ಹವ್ಯಕತ್ವ. ಅಷ್ಟೇ ಅಲ್ಲದೇ ಒಟ್ಟಾಗುವುದು ಶಂಕರರ ಅದ್ವೈತ ತತ್ವದ ಸಾರ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
ಭಾರತೀಯ ಸಮಾಜವನ್ನು ಬೆಳೆಸಬೇಕು
ಸಮಾಜ ಬೆಳಯಬೇಕು, ಒಟ್ಟು ಭಾರತೀಯ ಸಮಾಜವನ್ನು ಬೆಳೆಸಬೇಕು. ಈ ದಿಶೆಯಲ್ಲಿ ಮಹಾಸಭೆಗೆ ಗುರುಪೀಠದ ಸಂಪೂರ್ಣ ಆಶೀರ್ವಾದ ಸದಾ ಇದೆ. ಯಾವುದೇ ರಚನಾತ್ಮಕ ಕಾರ್ಯದಲ್ಲಿ ರಾಮಚಂದ್ರಾಪುರ ಮಠದ ಹಾಗೂ ಬಳಗದ ತ್ಯಾಗ ಸಹಕಾರ ಸದಾ ಇದೆ ಎಂದು ಮಹಾಸಭೆಗೆ ಅಭಯಾಶೀರ್ವಾದವನ್ನು ಮಾಡಿ,ಇದು ಆರಂಭವಷ್ಟೇ, ಇಂದು, ನಾಳೆ, ನಾಡಿದ್ದು ಇಲ್ಲಿ ಹವ್ಯಕರ ವಿರಾಟ್ ದರ್ಶನವಾಗಲಿದೆ. ಇಡೀ ವಿಶ್ವದ ಹವ್ಯಕರು ಹಾಗೂ ಅಭಿಮಾನಿಗಳು ಒಟ್ಟಾಗುವ ಕಾಲಕ್ಕೆ ಸಾಕ್ಷಿಯಾಗೋಣ - ರಾಘವೇಶ್ವರ ಶ್ರೀಗಳು.
ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳ ಆಶೀರ್ವಚನ
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಯಜ್ಞಗಳ ಮೂಲಕ ಗುರುತಿಸಿಕೊಂಡ ಸಮಾಜ ಹವ್ಯಕ ಸಮಾಜ. ಆದರೆ ಅಷ್ಟಕ್ಕೇ ಸೀಮಿತವಾಗದೆ ಕಲೆ - ವಿಜ್ಞಾನ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜಗತ್ತಿನ ಗಮನಸೆಳೆದ ಹಿರಿಮೆ ಹವ್ಯಕರದ್ದು. ನೂತನವಾಗಿ ಲೋಕಾರ್ಪಿತವಾದ ಹವ್ಯಕ ಮಹಾಸಭಾದ ಲಾಂಛನದಲ್ಲಿ ಊರ್ಧ್ವಮುಖಿಯಾದ ಅಗ್ನಿ ಇದೆ, ಇದು ಸಾತ್ವಿಕತೆಯನ್ನು ಸೂಚಿಸುತ್ತದೆ. ಇದು ಸಮಾಜದ ಸಾತ್ವಿಕ ಶಕ್ತಿಯ ಸಂಕೇತ, ನಮ್ಮ ಹಾಗೂ ರಾಮಚಂದ್ರಾಪುರ ಮಠದ ಸಂಬಂಧ ಐತಿಹಾಸಿಕವಾದದು, ಹಾಗೆಯೇ ಹವ್ಯಕ ಸಮಾಜದ್ದು ಕೂಡ. ಈ ಸಮಾಜ ಲೋಕಹಿತ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ 'ಅಮೃತವರ್ಷಿಣಿ" ಸ್ಮರಣಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಸಮುದಾಯದ ಸಂಘಟನೆಗಳು ತಪ್ಪಲ್ಲ, ನಮ್ಮ ಸಂತೋಷಕ್ಕಾಗಿ ಸಂಘಟನೆಗಳು ಬೇಕು ಹೊರತು ಬೇರೆಯವರಿಗೆ ದುಃಖ ನೀಡಲಲ್ಲ. ಸಂಘಟನೆ ಅಭಿವೃದ್ಧಿಗೆ ಕಾರಣವಾಗಬೇಕು ಹೊರತು ಮತ್ತೊಬ್ಬರಿಗೆ ಮಾರಕವಾಗಬಾರದು. ಈ ದಿಶೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಂಘಟನೆಗಳಿಗೆ ನನ್ನ ಸಹಮತಿ ಇದೆ. ಹವ್ಯಕ ಮಹಾಸಭೆ ಈ ದಿಶೆಯಲ್ಲಿ ತೊಡಗಿಸಿಕೊಂಡಿದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಸಚಿವರಾದ ಆರ್ ವಿ ದೇಶಪಾಂಡೆ
ಸಚಿವರಾದ ಆರ್ ವಿ ದೇಶಪಾಂಡೆ ಮಾತನಾಡಿ, ಹವ್ಯಕ ಸಮಾಜದ ಜೊತೆಗೆ ನಾನು ಅವಿನಾಭಾವದ ಸಂಬಂಧವನ್ನು ಹೊಂದಿದ್ದೇನೆ. ಹವ್ಯಕ ಸಮಾಜ ತನ್ನಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳೊಂದಿಗೆ ಮುನ್ನೆಡೆಯುತ್ತಿದೆ. ಇದು ಪ್ರಜ್ಞಾವಂತ ಸಮುದಾಯವಾಗಿದೆ. ರಾಮಚಂದ್ರಾಪುರ ಮಠದ ಶ್ರೀಗಳ ನೇತೃತ್ವದಲ್ಲಿ ಸಮಾಜ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದ್ದು, ಸಮಾಜದಲ್ಲಿ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಬೆಳೆಸುತ್ತಿರುವ ಕಾಯಕದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಾರ್ಯ ಅನುಪಮವಾದದ್ದು. ಮನುಷ್ಯ ಸಮಾಜಕ್ಕಷ್ಟೇ ಅಲ್ಲದೇ, ಪೂಜ್ಯ ಶ್ರೀಗಳು ಗೋವಿಗಾಗಿ ಜಗತ್ತಿನ ಮೊದಲ ಸ್ವರ್ಗವನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜ ಮುಂದುವರಿಯಲಿ.
ಹೆಚ್ ಕೆ ಪಾಟೀಲ್ ಭಾಷಣ
ಹೆಚ್ ಕೆ ಪಾಟೀಲ್ ಮಾತನಾಡಿ, ಹವ್ಯಕ ಸಮುದಾಯದೊಂದಿಗೆ ನನ್ನ ಸಂಬಂಧಗಳು ಅನುಪಮವಾದದ್ದು, ನಾನು ಅನೇಕ ಹುದ್ದೆಗಳನ್ನು ನಿರ್ವಹಿಸುವುದರ ಹಿಂದೆ ಹವ್ಯಕ ಸಮಾಜದ ಕೊಡುಗೆ ಅವಿಸ್ಮರಣೀಯ. ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಹವ್ಯಕರ ಕೊಡುಗೆಯನ್ನು ನಾಡಿನ ಜನತೆ ಸದಾ ಸ್ಮರಿಸಬೇಕಿದೆ. ಸಹಸ್ರಾರು ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನೆಡೆಸಿ, ಅನೇಕ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಕೀರ್ತಿ ಹವ್ಯಕರದ್ದು - ಎಚ್ ಕೆ ಪಾಟೀಲ್.
ಅಧ್ಯಕ್ಷರಾದ ಡಾ. ಗಿರಿಧರ ಕಜೆ
ಅಧ್ಯಕ್ಷರಾದ ಡಾ. ಗಿರಿಧರ ಕಜೆ ಸ್ವಾಗತ ಭಾಷಣ ಮಾಡಿ, ಲೋಕದ ಒಳಿತಿಗಾಗಿ ಆರ್ವಿಭವಿಸಿದ ಸಮಾಜ ಹವ್ಯಕ ಸಮಾಜ. ಉತ್ತರದ ಅಹಿಚ್ಛತ್ರದಿಂದ ರಾಜ ಮಯೂರವರ್ಮ 30 ವೈದಿಕ ಕುಟುಂಬಗಳನ್ನು ಕರೆತಂದ. ಇದೇ ಕುಟುಂಬಗಳು ಹವ್ಯಕ ಸಮುದಾಯವಾಗಿ ರೂಪುಗೊಂಡು ಲೋಕವಿಖ್ಯಾತವಾಯಿತು. ಹವ್ಯಕ ಸಮುದಾಯ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದು ಸಮಾಜಕ್ಕೆ ಹೆಮ್ಮೆಯ ವಿಚಾರ. ಹವ್ಯಕರು ತಮ್ಮದೇ ಆದ ಹವಿಗನ್ನಡ ಭಾಷೆಯನ್ನು ಹೊಂದಿದೆ, ಅಡಿಕೆ ಕೃಷಿ ನಮ್ಮ ಪಾರಂಪರಿಕ ಕೃಷಿಯಾದರೆ, ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಕರ ಕೊಡುಗೆ ಅನುಪಮವಾದದ್ದು. ಹಾಗೆಯೇ ಹವ್ಯಕರಲ್ಲಿ ಅನಕ್ಷರಸ್ಥರು ಇಲ್ಲ ಎಂಬುದು ಗಮನಾರ್ಹ.
ಹವ್ಯಕ ಮಹಾಸಭಾದ ನೂತನ ಲಾಂಚನ
ಹವ್ಯಕರ ಮೂಲಸ್ಥಾನ ಹೈಗುಂದದಿಂದ ತಂದ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹವ್ಯಕ ಮಹಾಸಭಾದ ನೂತನ ಲಾಂಚನವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಸ್ಮರಣ ಸಂಚಿಕೆ ಲೋಕಾರ್ಪಿತವಾಯಿತು. 100 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು, ಇದು ಲಿಮ್ಕಾ ರೆಕಾರ್ಡ್ ಸೇರಲಿರುವುದು ವಿಶೇಷ. 75 ವೇದ ವಿದ್ವಾಂಸರಿಗೆ ಹವ್ಯಕ ವೇದರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಲೆಮನೆ, ಹವ್ಯಕ ಪಾಕೋತ್ಸವ, ಗೋತಳಿಗಳ ಪ್ರದರ್ಶನ ಮುಂತಾದವು ಜನಾಕರ್ಷಣೆಯ ಕೇಂದ್ರವಾಗಿತ್ತು, ನಾಳೆ ನಾಡಿದ್ದು ಇನ್ನಷ್ಟು ಜನ ಹವ್ಯಕ ಪಾಕೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.