ಬೆಂಗಳೂರು ಷೇರು ವಿನಿಮಯ ಕೇಂದ್ರದ ವಹಿವಾಟು ಬಂದ್
ಬೆಂಗಳೂರು, ಡಿ, 31 : ಸೆಬಿ(ಸೆಕ್ಯೂರಿಟೀಸ್ ಎಕ್ಸ್ ಚೆಂಜ್ ಬೋರ್ಡ್ ಆಫ್ ಇಂಡಿಯಾ)ಯ ನಿರ್ದೇಶನದಂತೆ ಮಾರುಕಟ್ಟೆಯಲ್ಲಿ ರು. 1 ಸಾವಿರ ಕೋಟಿ ವಹಿವಾಟು ದಾಖಲಿಸದ ಕಾರಣ ಬೆಂಗಳೂರು ಷೇರು ವಿನಿಮಯ ಕೇಂದ್ರ ಚಟುವಟಿಕೆಯಿಂದ ನಿರ್ಗಮಿಸಲಿದೆ. ಈ ನಿರ್ಗಮನಕ್ಕೆ ಸೆಬಿ ಅಂಗೀಕಾರ ನೀಡಿದೆ ಎಂದು ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ಮಂಜೀತ್ ಸಿಂಗ್ ತಿಳಿಸಿದ್ದಾರೆ.
ದೇಶದ ಉಳಿದ ಷೇರು ವಿನಿಮಯ ಕೇಂದ್ರಗಳಂತೆ ಬೆಂಗಳೂರು ಷೇರು ವಿನಿಮಯ ಕೇಂದ್ರವು ಕಾರ್ಯನಿರ್ವಹಿಸುತ್ತಾ ಬಂದಿತ್ತು. ಸೆಬಿಯ ಮೇಲ್ವಿಚಾರಣೆ ಅಡಿಯಲ್ಲಿ ತನ್ನ ಚಟುವಟಿಕೆ ನಡೆಸಿಕೊಂಡು ಬರುತ್ತಿತ್ತು. ಆದರೆ ಈಗ 1 ಸಾವಿರ ಕೋಟಿ ವಹಿವಾಟು ದಾಖಲಿಸಲು ಸಾಧ್ಯವಾಗದ ಕಾರಣ ಬಾಗಿಲು ಹಾಕಬೇಕಾಗಿ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.[ಕೋಟ್ಯಂತರ ಬೆಲೆ ಸ್ಥಿರಾಸ್ತಿ ಮಾರಾಟಕ್ಕಿಳಿದ ಸಹಾರಾ]
ಬೆಂಗಳೂರು ಷೇರು ವಿನಿಮಯ ಕೇಂದ್ರದ ಅಂಗಸಂಸ್ಥೆ ಬಿಜಿಎಸ್ಇ ಫೈನಾನ್ಷಿಯಲ್ ಲಿಮಿಟೆಡ್ ಮೂಲಕ ವಹಿವಾಟುಗಳಿಗೆ ಅವಕಾಶ ನೀಡಲಾಗಿದ್ದು ಸದ್ಯದ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಟ್ರೇಡಿಂಗ್ ಹಾಗೂ ಡಿ-ಮ್ಯಾಟ್ ಸೇವೆಗಳು ನಿರಂತರವಾಗಿ ಲಭ್ಯವಾಗಲಿದೆ. ಬಿಜಿಎಸ್ಇ(ಬೆಂಗಳೂರು ಸ್ಟಾಕ್ ಎಕ್ಸ್ ಚೆಂಜ್ ಲಿಮಿಟೆಡ್) ಆರಂಭಿಸಿದ್ದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಆನ್ಲೈನ್ ತಂತ್ರಜ್ಞಾನ ಬಂದಮೇಲೆ ಷೇರು ವಹಿವಾಟಿಗೆ ಯಾವುದೇ ಗಡಿಯ ಹಂಗಿಲ್ಲ. ಆದ್ದರಿಂದ ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳಿಗೆ ವಹಿವಾಟಿನಿಂದ ಹೊರನಡೆಯಲು ಸೆಬಿ ಅವಕಾಶ ಕಲ್ಪಿಸಿದೆ. ಇದು ನಗರದ ಅಥವಾ ಮಾರುಕಟ್ಟೆಯ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.