ಮಕ್ಕಳಲ್ಲಿ ಕೈ-ಬಾಯಿ-ಕಾಲು ರೋಗ: ಶಾಲೆಗೆ ಕಳುಹಿಸದಂತೆ ಪಾಲಕರಿಗೆ ಮನವಿ
ಬೆಂಗಳೂರು, ಆಗಸ್ಟ್ 9: ಆಷಾಢ ಗಾಳಿಯು ಚಳಿಯ ಜತೆ ಜತೆಗೆ ನೂರಾರು ರೋಗಗಳನ್ನು ಹೊತ್ತು ತರುತ್ತಿದೆ. ಜತೆಗೆ ಕರಾವಳಿ, ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೋಗಗಳು ಹೆಚ್ಚಾಗಿದೆ.
ಕೈ, ಬಾಯಿ ಹುಣ್ಣು, ಕೆಮ್ಮು, ನೆಗಡಿ ಶೀತದಿಂದ ನರಳುತ್ತಿದ್ದಾರೆ. ಈ ಸಮಸ್ಯೆಗೆ ಈ ಮಳೆಗಾಲವೇ ಆಗಬೇಕೆಂದೇನಿಲ್ಲ, ವರ್ಷಪೂರ್ತಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದಾಗಿದೆ. ಆದರೆ ಈ ಸಮಸ್ಯೆ ಪ್ರಾಣಿಗಳಲ್ಲಿ ಸಾಮಾನ್ಯ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಒಬ್ಬರಿಂದೊಬ್ಬರಿಗೆ ಹರಡುವ ಈ ಸಮಸ್ಯೆ ಶಾಲಾ ಮಕ್ಕಳಲ್ಲಿ ಅತಿಯಾಗಿದೆ.
ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸುಸ್ತಾಗಿ ಹೋದ ರಾಜ್ಯದ ಜನರು
ಹೀಗಾಗಿ ನಗರದ ಬಹುತೇಕ ಶಾಲೆಗಳು ಈ ಸಮಸ್ಯೆ ಹೊಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ.
ರೋಗದ ಲಕ್ಷಣಗಳೇನು?
ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ರೋಗ ಸಾಮಾನ್ಯವಾಗಿ 5-6 ದಿನಗಳ ಕಾಲ ಇರುತ್ತದೆ. ಬಾಯಿಯ ಒಳಗೆ ಹಾಗೂ ಹೊರಗೆ ನೀರಿನ ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಗುಳ್ಳೆಗಳಿಂದ ಬಾಯಿಯಲ್ಲಿ ಉರಿ, ನೋವು, ಚರ್ಮದ ಮೇಲಿನ ಗುಳ್ಳೆಗಳು ಚುಚ್ಚಿದಂತಾಗುತ್ತದೆ.
ಆಸ್ಪತ್ರೆಗಳಲ್ಲಿ ನಿತ್ಯ ಕನಿಷ್ಠ 4 ಪ್ರಕರಣಗಳು
ನಗರದ ಬಹುತೇಕ ಆಸ್ಪತ್ರೆಗಳಲ್ಲಿ ದಿನಕ್ಕೆ ಕನಿಷ್ಠ 4 ಪ್ರಕರಣಗಳು ದಾಖಲಾಗುತ್ತಿವೆ. ಮಕ್ಕಳಲ್ಲಿ ಕೈ, ಬಾಯಿ, ಕಾಲು ಹುಣ್ಣು ಇನ್ನಿತರೆ ರೋಗಗಳು ಹೆಚ್ಚಾಗುತ್ತಿವೆ. ಇದು ಒಬ್ಬರಿಂದೊಬ್ಬರಿಗೆ ಹರಡುವ ರೋಗವಾಗಿರುವುದರಿಂದ ಅಂತಹ ಮಕ್ಕಳನ್ನು ಪೂರ್ಣ ಗುಣ ಹೊಂದುವವರೆಗೂ ಶಾಲೆಗೆ ಕಳುಹಿಸಬಾರದು.
ರೋಗಕ್ಕೆ ಪರಿಹಾರವೇನು?
ಈ ರೋಗದಿಂದ ಬಾಯಿ ಒಳಗೆ ಗುಳ್ಳೆಗಳು ಆಗುವುದರಿಂದ ಜೇನು ತುಪ್ಪ ಅಥವಾ ಗ್ಲಿಸರಿನ್ ಸವರುವುದರಿಂದ ಉರಿ ಕಡಿಮೆಯಾಗುತ್ತದೆ. ಕೈಕಾಲುಗಳು ಕೆಲಮಿನ್ ಲೋಷನ್ ಹಚ್ಚುವುದರಿಂದ ತಣ್ಣಗಾಗಿ ಕಿರಿಕಿರಿ ಕಡಿಮೆಯಾಗುತ್ತದೆ.ಈ ನೋವಿನಿಂದ ಕೆಲ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ.
ಯಾವ ಆಹಾರ ಪದಾರ್ಥ ಸೇವಿಸಬೇಕು
ಈ ಸಮಸ್ಯೆ ಹೊಂದಿರುವ ಮಕ್ಕಳಿಗೆ ಎಳನೀರು, ಗಂಜಿ, ಹಣ್ಣಿನ ರಸ, ಸೇರಿದಂತೆ ಹಣ್ಣಿನ ದ್ರವ ಆಹಾರಗಳನ್ನು ನೀಡಬೇಕು. ಉಪ್ಪು, ಕಾರ, ಮಸಾಲೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು.
ಬಾಯಿ, ಕೈ ಹುಣ್ಣಿಗೆ ಕಾರಣಗಳೇನು?
ಕಕ್ಸಾಕಿ ವೈರಾಣು ಅಥವಾ ಎಂಟೆರೊವೈರಸ್ 71 ರಿಂದಲೂ ಮಕ್ಕಳಲ್ಲಿ ಕೈ, ಬಾಯಿ ಮತ್ತು ಕಾಲು ರೋಗ ಕಾಣಿಸಿಕೊಳ್ಳುತ್ತದೆ. ಜಾನುವಾರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ರೋಗ ಮಾರಣಾಂತಿಕವಾಗಿರುತ್ತದೆ. ಆದರೆ ಇದಕ್ಕೆ ಮನುಷ್ಯರು ಆತಂಕಪಡುವ ಅಗತ್ಯವಿಲ್ಲ. ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯಲ್ಲಿ ಸೇರಿ ಮತ್ತೊಬ್ಬರಿಗೆ ಹರಡುತ್ತದೆ.