ನನ್ನ ಹೆಸರು ಕೆಡಿಸಲು ಯತ್ನ: ಶಾಸಕ ಜಮೀರ್ ಅಹ್ಮದ್ ಟ್ವೀಟ್
ಬೆಂಗಳೂರು, ಏಪ್ರಿಲ್.20: ಕೊರೊನಾ ವೈರಸ್ ಸೋಂಕಿತರ ತಪಾಸಣೆ ಮತ್ತು ಸ್ಥಳಾಂತರಕ್ಕೆ ಮುಂದಾದ ವೈದ್ಯಕೀಯ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ದಾಂಧಲೆಗೆ ಸಂಬಂಧಿಸಿದಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನ ಪಾದರಾಯನಪುರ ಬಡಾವಣೆಯಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆಗೆ ಯತ್ನಿಸಿರುವುದು ದುಃಖಕರ ಸಂಗತಿಯಾಗಿದೆ ಎಂದು ಟ್ವಿಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ತಪಾಸಣೆ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದೇನು?
ಕೊರೊನಾ ವೈರಸ್ ಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿರುವುದು ನಿಮ್ಮ ಕ್ಷೇಮಕ್ಕಾಗಿ. ಅವರೊಂದಿಗೆ ಸಹಕರಿಸಿ, ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದೀನಿ
ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಅಹಿತಕರ ಘಟನೆ ನಡೆದ ಕ್ಷಣದಿಂದ ನಾನು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾತ್ರಿಯೇ ಜನತೆ ಮತ್ತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಎಂದು ಶಾಸಕರ ಸಲಹೆ
ಕೊರೊನಾ ಸೋಂಕು ಹರಡದಂತೆ ರಾತ್ರಿ ಹಗಲು ಶ್ರಮಿಸುತ್ತಿರುವ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿ ಜೊತೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಏನಾದರೂ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಬೇಕೇ ಹೊರತು ಕಾನೂನು ಉಲ್ಲಂಘನೆ ಮಾಡಿ ದಾಂಧಲೆ ಮಾಡುವುದಲ್ಲ ಎಂದು ಟ್ವಿಟರ್ ನಲ್ಲಿ ಸಲಹೆ ನೀಡಿದ್ದಾರೆ.
ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ನೀಡುವಂತೆ ಶಾಸಕರ ಟ್ವೀಟ್
ಪಾದರಾಯನಪುರ ಗಲಾಟೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಕೆಲಸ ಶೀಘ್ರವಾಗಿ ನಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಒತ್ತಾಯಿಸುತ್ತೇನೆ. ತನಿಖೆಗೆ ರಾಜ್ಯ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.
ಜಮೀರ್ ಅಹ್ಮದ್ ಹೆಸರು ಕೆಡಿಸಲು ರಾಜಕೀಯ ಪಿತೂರಿ
ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ ಹಿಂದೆ ನನ್ನ ಹೆಸರು ಕೆಡಿಸುವ ರಾಜಕೀಯ ಪಿತೂರಿ ಇರಬಹುದೆಂಬ ಸಂಶಯ ನನಗಿದೆ. ಈ ಬಗ್ಗೆ ನಾನೂ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅವೆಲ್ಲವನ್ನೂ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.