ವೈದ್ಯಕೀಯ ತಪಾಸಣೆ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದೇನು?
ಬೆಂಗಳೂರು, ಏಪ್ರಿಲ್.20: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಜೊತೆಗೆ ದಾಂಧಲೆ ಎಸಗಿರುವ ಬೆಂಗಳೂರಿನ ಪಾದರಾಯಪುರ ನಗರದ ಕೆಲವು ಶಂಕಿತ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿ ಕ್ಯಾಮರಾ ಮತ್ತು ಮೊಬೈಲ್ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತರನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿದ್ದು, ದಾಂಧಲೆ ಎಸಗಿದವರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ಗಳನ್ನು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 353, 307, ಎನ್ ಡಿಎಂಎ 353, 332, 324, ಹಾಗೂ 201ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್ ಉಲ್ಲಂಘನೆ: ದಾಂಧಲೆಗೆ ಯಾರು ಹೊಣೆ?
ಕಳೆದ ಏಪ್ರಿಲ್.19ರ ರಾತ್ರಿ ವೇಳೆ ಪಾದರಾಯನಪುರದಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ ದುಷ್ಕೃತ್ಯ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಜೆ.ಜೆ.ನಗರ ಪೊಲೀಸರಿಗೆ ದೂರು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದು ಏನು?
ಪಾದರಾಯನಪುದಲ್ಲಿ ಕ್ವಾರೆಂಟೈನ್ ಗೆ ಒಳಪಡಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೆರಳಿದ ಕೆಲವರು ಸೀಲ್ ಡೌನ್ ಮಾಡಿರುವ ಏರಿಯಾದಲ್ಲಿ ಅಳವಡಿಸಿದ ಬ್ಯಾರಿಕೇಡ್ ಹಾಗೂ ತಗಡುಗಳನ್ನು ಕಿತ್ತೆಸೆದು ಗಲಾಟೆ ಮಾಡಿದ್ದಾರೆ.
ಪಾದರಾಯನಪುರಕ್ಕೆ ಅಧಿಕಾರಿಗಳ ತಂಡವು ಹೋಗಿದ್ದೇಕೆ?
ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58ಕ್ಕೂ ಹೆಚ್ಚು ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿತ್ತು. 58 ಜನರ ಪೈಕಿ 20 ಜನರನ್ನು ಬೇರೆಡೆ ಶಿಫ್ಟ್ ಮಾಡಲಾಗಿದ್ದು, ಉಳಿದ 38 ಜನರನ್ನು ಸ್ಥಳಾಂತರಿಸಲು ಬಿಬಿಎಂಪಿ ಅಧಿಕಾರಿಗಳು ತೆರಳಿದ್ದಾರೆ.
ಪಾದರಾಯನಪುರ: ಪುಂಡರ ವಿರುದ್ಧ NDMA ಕಾಯ್ದೆಯಂತೆ ಕ್ರಮ
ಪಾದರಾಯನಪುರದಲ್ಲಿ ಕೆಲವು ಕಿಡಿಗೇಡಿಗಳಿಂದ ಹೇಯಕೃತ್ಯ
ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರನ್ನು ರಕ್ಷಿಸಲು ತಪಾಸಣೆ ಮತ್ತು ಕೆಲವು ಶಂಕಿತರ ಸ್ಥಳಾಂತರಕ್ಕೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿ ವಿರುದ್ಧ ದಾಂಧಲೆ ಮಾಡಿದ್ದು ಅಲ್ಲದೇ ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಧಕ್ಕೆ ಉಂಟು ಮಾಡಿದ್ದಾರೆ. ರಸ್ತೆಯ ಅಕ್ಕ-ಪಕ್ಕದಲ್ಲಿರುವ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳನ್ನು ಒಡೆದು ಹಾಕಿರುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
|
ಪಾದರಾಯನಪುರದಲ್ಲಿ ನಡೆದ ದಾಂಧಲೆಗೆ ಖಂಡನೆ
ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್ ನಡುವೆಯೂ ನಡೆದ ದಾಂಧಲೆಗೆ ಸರ್ಕಾರ ಹಾಗೂ ಎಲ್ಲ ಪಕ್ಷಗಳ ರಾಜಕೀಯ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಗುರುತಿಸಿ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.