54 ಮಂದಿ ಅರೆಸ್ಟ್: ಪಾದರಾಯನಪುರ ದಾಂಧಲೆ ಹಿಂದಿದೆಯಾ ಲೇಡಿಡಾನ್ ಕೈವಾಡ?
ಬೆಂಗಳೂರು, ಏಪ್ರಿಲ್.20: ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆಗೆ ತೆರಳಿದ್ದ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಂಧಲೆಯ ಹಿಂದೆ ಗಾಂಜಾ ಮತ್ತಿನ ಗಮ್ಮತ್ತು ಇತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಪಾದರಾಯನಪುರದಲ್ಲಿ ಲೇಡಿ ಡಾನ್ ಎಂದೇ ಪರಿಚಿತರಾಗಿರುವ ಮಹಿಳೆಯೇ ಈ ದಾಂಧಲೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಏರಿಯಾದಲ್ಲಿ ಇರುವ ಯುವಕರ ಪರಿಚಯವಿದ್ದ ಮಹಿಳೆ ದಾಂಧಲೆಗೆ ಪ್ರಚೋದನೆ ನೀಡಿದರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಸೀಲ್ ಡೌನ್ ಉಲ್ಲಂಘನೆ: ದಾಂಧಲೆಗೆ ಯಾರು ಹೊಣೆ?
ಕಳೆದ ಏಪ್ರಿಲ್.19ರಂದು ಪಾದರಾಯನಪುರದಲ್ಲಿ ನಡೆದ ದಾಂಧಲೆಯ ಸಂದರ್ಭದಲ್ಲಿ ಲೇಡಿ ಡಾನ್ ಕೂಡಾ ರಸ್ತೆಗೆ ಇಳಿದಿದ್ದಳು. ಈ ಮಹಿಳೆಯೇ ನೀಡಿರುವ ಮಾಹಿತಿಯನ್ನು ಆಧರಿಸಿ ಯುವಕರ ಮನೆಗಳಿಗೆ ಭೇಟಿ ನೀಡಿದ ಪೊಲೀಸರು 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
54 ಜನರನ್ನು ಬಂಧಿಸಿದ ಜೆ.ಜೆ.ನಗರ ಪೊಲೀಸರು:
ಸಿಸಿ ಕ್ಯಾಮರಾ ಮತ್ತು ಮೊಬೈಲ್ ದೃಶ್ಯಾವಳಿಗಳನ್ನು ಆಧರಿಸಿ 54 ಜನರನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದ್ ಮುಖರ್ಜಿ ತಿಳಿಸಿದ್ದಾರೆ. ಇದರ ಜೊತೆಗೆ ಪಾದರಾಯನಪುರದಲ್ಲಿ ದಾಂಧಲೆ ಎಸಗಿದವರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 353, 307, ಎನ್ ಡಿಎಂಎ 353, 332, 324, ಹಾಗೂ 201ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲಿದ್ದಾರೆ.