ಪಾದರಾಯನಪುರದಲ್ಲಿ ರಂಪಾಟ: ಇದು ರಾಕ್ಷಸ ಪ್ರವೃತ್ತಿ ಎಂದ ಆರ್.ಅಶೋಕ್
ಬೆಂಗಳೂರು, ಏಪ್ರಿಲ್ 20: ಕೋವಿಡ್-19 ನಿಂದ ರಾಜ್ಯವನ್ನು ರಕ್ಷಿಸಲು ವೈದ್ಯರು, ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ, ಬೆಂಗಳೂರಿನ ಪಾದರಾಯನಪುರದಲ್ಲಿ ಕಿಡಿಗೇಡಿಗಳು ರಂಪಾಟ ಮಾಡಿದ್ದಾರೆ.
ಸೀಲ್ ಡೌನ್ ಆಗಿದ್ದ ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58ಕ್ಕೂ ಹೆಚ್ಚು ಜನರನ್ನು ಬೇರೆ ಕಡೆ ಶಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಸ್ಥಳೀಯ ಯುವಕರು ಕೆರಳಿ ಗಲಾಟೆ ಮಾಡಿದ್ದಾರೆ.
ವೈದ್ಯಕೀಯ ತಪಾಸಣೆ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದೇನು?
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ''ಇದು ದುರಾದೃಷ್ಟಕರ ಘಟನೆ. ಕೆಲ ಕಿಡಿಗೇಡಿಗಳು ಸರ್ಕಾರದ ಸ್ವತ್ತನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಗುಂಡಾಗಿರಿ ವರ್ತನೆ. ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ನಿಮ್ಮ ಕುಟುಂಬದವರನ್ನು ಹಾಗೂ ನಿಮ್ಮನ್ನು ರಕ್ಷಣೆ ಮಾಡೋಕೆ ಬರುವವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸೋದು, ಹೊಡೆಯೋಕೆ ಹೋಗೋದು ರಾಕ್ಷಸ ಪ್ರವೃತ್ತಿ'' ಎಂದು ಕಿಡಿಕಾರಿದರು.
''ಪಾದರಾಯನಪುರದ ಘಟನೆ ಬಗ್ಗೆ ಈಗಾಗಲೇ ಸಿಎಂ ಜೊತೆ ಮಾತನಾಡಿದ್ದೇನೆ. ಕೊರೊನಾ ವಿರುದ್ಧ ಹೋರಾಟ ಒಂದು ಕಡೆಯಾದ್ರೆ, ಇಂತಹ ಗೂಂಡಾಗಳನ್ನು ಮಟ್ಟ ಹಾಕೋದು ಕೂಡ ಇನ್ನೊಂದು ಕೆಲಸ. ಇದನ್ನು ಮೊದಲ ಹಂತದಲ್ಲೇ ಮಟ್ಟ ಹಾಕಬೇಕು. ಇಂಥವರ ವಿರುದ್ಧ ಕಾನೂನಿನ ಸಮರ ಸಾರುತ್ತೇವೆ. ಯಾವುದೇ ಕಾರಣಕ್ಕೂ ಬಿಡೋದಿಲ್ಲ'' ಎಂದು ಆರ್.ಅಶೋಕ್ ತಿಳಿಸಿದರು.