ಎಸ್ಡಿಪಿಐ ಕಾರ್ಯದರ್ಶಿ ಬಂಧನ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಆ. 12: ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆಗೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಇದೊಂದು ಪೂರ್ವಯೋಜಿತ ದಾಳಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಉಡುಪಿಯಿಂದ ನೇರವಾಗಿ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.
Recommended Video
ಪ್ರಕರಣಕ್ಕೆ ಸಂಬಂಧಿಸಿದಂತೆ 145 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿಸಿದವರಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಮುಜಾಮಿಲ್ ಪಾಷಾ ಸೇರಿದ್ದಾರೆ. ಜೊತೆಗೆ ಫಿರೋಜ್ ಕೂಡ ಬಂಧಿಸಲಾಗಿದೆ. ಇನ್ನುಳಿದಂತೆ ಮುದಸ್ಸರ್ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ನಿನ್ನೆಯೇ ಕೇಂದ್ರ ಗೃಹ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಯಂತೆ 6 ಸಿಆರ್ಪಿಎಫ್ ತುಕಡಿ ಹಾಗೂ ಒಂದು ಸಿಐಎಸ್ಎಫ್ ಕಂಪನಿ ಕಳುಹಿಸಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಮಾಹಿತಿ ಕೊಟ್ಟಿದ್ದಾರೆ.
ಇಡೀ ಮನೆ ಸುಟ್ಟಿದ್ದಾರೆ ಎನ್ನುತ್ತ ಕಣ್ಣೀರು ಹಾಕಿದ ಶಾಸಕರು
ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪ್ರದೇಶಗಳಲ್ಲಿ ಪುಂಡಾಟಿಕೆ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಪೋಸ್ಟ್ ಆಗಿದ್ದು ಸಂಜೆ 6 ಗಂಟೆಗೆ. ಸ್ಕ್ರೀನ್ ಶಾಟ್ ಎಲ್ಲರಿಗೂ ಹೋಗಿದ್ದು 7 ಗಂಟೆಗೆ. ತಕ್ಷಣವೇ ಡಿಸಿಪಿ ಅಲ್ಲಿ ಹೋಗಿ ತಿಳುವಳಿಕೆ ಹೇಳಿದ್ದಾರೆ. ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಪೊಲೀಸರು ಗಾಳಿಯಲ್ಲಿ ಗುಂಡು ಹೊಡೆದರೂ ಹಿಂದೆ ಸರಿಯದ ಕಾರಣ ಅನಿವಾರ್ಯ ಫೈರಿಂಗ್ ಮಾಡಲಾಗಿದೆ. ಈಗಾಗಲೇ ಗಲಭೆಯಲ್ಲಿ ತೊಡಗಿದ್ದ 145 ಜನರನ್ನು ಬಂಧಿಸಲಾಗಿದೆ. ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ ನವೀನ್ನನ್ನೂ ಬಂಧಿಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ ಬಳಿ ಯಾವ ರೀತಿಯ ತನಿಖೆ ನಡೆಯಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ. ಘಟನಾ ಸ್ಥಳದಲ್ಲಿ ಕರ್ಫ್ಯೂ ಇರುವ ಕಾರಣ ಯಾರಿಗೂ ಭೇಟಿಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್ ನಾಯಕರ ಭೇಟಿಯ ಬಗ್ಗೆ ಹೇಳಿದ್ದಾರೆ. ಜೊತೆಗೆ ನಮ್ಮ ಪೊಲೀಸರು ತನಿಖೆ ನಡೆಸಲು ಅತ್ಯಂತ ಶಕ್ತರಾಗಿದ್ದು , ನಾವೇ ತನಿಖೆ ಮಾಡುತ್ತೇವೆ ಎಂದೂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.