ವಿಡಿಯೋ: ಸಿಗ್ನಲ್ ಬಳಿ ಕಾರು ಹತ್ತಿಸಿದ ಕುಡುಕ, ಸ್ಕೂಟರ್ ಸವಾರ ಸಾವು
ಬೆಂಗಳೂರು, ಸೆ. 18: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಅನುಮಾನಾಸ್ಪದವಾಗಿ ಕಿಕ್ನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ ಸರಣಿ ಅಪಘಾತ ಎಸಗಿದ್ದಾನೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಸಿಗ್ನಲ್ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಅಮಲಿನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ ಸಿಗ್ನಲ್ನಲ್ಲಿ ನಿಂತಿದ್ದ ಸ್ಕೂಟರ್ ಮೇಲೆ ಕಾರು ಹತ್ತಿಸಿ, ಒಬ್ಬನ ಸಾವಿಗೆ ಕಾರಣವಾಗಿದ್ದಾನೆ. ಅಪಘಾತವೆಸಗಿದ ಆರೋಪಿಯನ್ನು ರೋಹಿತ್ ಕೇಡಿಯಾ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸದ ತಕ್ಷಣ ಆರೋಪಿ ರೋಹಿತ್ ಕೇಡಿಯಾನ ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮದ್ಯದ ಜೊತೆ ಡ್ರಗ್ಸ್ ಕೂಡ ತೆಗೆದುಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಿಗ್ನಲ್ ಬಳಿಯ ಸಿಸಿ ಕ್ಯಾಮರಾದಲ್ಲಿ ಈ ಭೀಕರ ಅಪಘಾತದ ದೃಶ್ಯ ರೆಕಾರ್ಡ್ ಆಗಿದ್ದು, ಎದೆ ಝಲ್ ಎನಿಸುವಂತಿದೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.
ಏನೂ ಅರಿಯದೆ ನಿಂತಿದ್ದವ ಮಸಣಕ್ಕೆ
ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯಾವಳಿ ಹೇಳುವಂತೆ, ಈ ಘಟನೆಯಲ್ಲಿ ಕಾರು ಚಾಲಕನದ್ದೇ ಸಂಪೂರ್ಣ ತಪ್ಪಿದೆ. ಮೊದಲಿಗೆ ಸಿಗ್ನಲ್ ಬಿದ್ದ ತಕ್ಷಣ ವಾಹನಗಳು ನಿಂತುಕೊಳ್ಳುತ್ತವೆ. ಹೀಗೆ ಒಂದು ಕಾರ್ ಹಿಂದೆ ಬಂದು ನಿಲ್ಲುವ ಸ್ಕೂಟರ್ ಸವಾರ ಕಿರಣ್, ಸಿಗ್ನಲ್ ಕಡೆಗೆ ತನ್ನ ಗಮನ ಕೇಂದ್ರಿಕರಿಸಿರುತ್ತಾನೆ. ಆದರೆ ದಿಢೀರ್ ಹಿಂದೆಯಿಂದ ವೇಗವಾಗಿ ಬರುವ ಐಷಾರಾಮಿ ಕಾರೊಂದು, ದ್ವಿಚಕ್ರ ವಾಹನ ಸವಾರನ ಮೇಲೆ ನುಗ್ಗಿಬಿಡುತ್ತದೆ. ಈ ಅಪಘಾತ ಅದೆಷ್ಟು ಭೀಕರವಾಗಿತ್ತು ಎಂದರೆ, ಸ್ಕೂಟರ್ ನಜ್ಜುಗುಜ್ಜಾಗಿದೆ. ಅಷ್ಟೇ ಅಲ್ಲದೆ ಸ್ಕೂಟರ್ ಮುಂದೆ ಇದ್ದ ಮತ್ತೊಂದು ಕಾರಿನ ಹಿಂಬದಿ ಕೂಡ ಜಖಂ ಆಗಿದೆ.
ಇನ್ಶೂರೆನ್ಸ್ ಕಂಪನಿಯ ಸಹಾಯಕ ಸಾವು
Recommended Video
ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನ ಕಿರಣ್ ಅಂತಾ ಗುರುತಿಸಲಾಗಿದೆ. 23 ವರ್ಷದ ಕಿರಣ್ ಇನ್ಶೂರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸ್ಕೂಟರ್ನಲ್ಲಿ ಕೂತ್ತಿದ್ದ ಕಿರಣ್ ಕಾರು ತನ್ನ ಹಿಂದೆಯಿಂದ ಬಂದು ಗುದ್ದಿದ ತಕ್ಷಣ ನೆಲಕ್ಕೆ ಬಿದ್ದಿದ್ದಾನೆ. ಅಪಘಾತದ ರಭಸಕ್ಕೆ ಕಿರಣ್ಗೆ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳದಲ್ಲಿದ್ದವರು ಕಿರಣ್ ಸಹಾಯಕ್ಕೆ ಓಡೋಡಿ ಬಂದರೂ ಪ್ರಯೋಜನವಾಗಿಲ್ಲ. ಜವರಾಯನ ಅಣತಿಯಂತೆ, ಯಾರೋ ಮಾಡಿದ ತಪ್ಪಿಗೆ ಈ ಅಮಾಯಕ ಜೀವ ಬಲಿಯಾಗಿ ಹೋಗಿದೆ. ದುಡಿದು ತಿನ್ನುತ್ತಿದ್ದ ಬಡಜೀವವೊಂದು ಅಮಲಿನಲ್ಲಿ ತೇಲುತ್ತಿದ್ದವನ ಐಷಾರಾಮಿ ಕಾರಿಗೆ ಜೀವ ತೆತ್ತಿದೆ.