'ಸಂಶೋಧನೆ ಸಮಾಜಕ್ಕೆ ತಲುಪಿಸುವುದೇ ವಿಜ್ಞಾನಿಗಳಿಗೆ ಸವಾಲು'
ಬೆಂಗಳೂರು, ಜೂನ್ 25: ಪ್ರಸ್ತುತ ಸಮಾಜ ವಿಜ್ಞಾನ ಹಾಗೂ ತಂತ್ರಜ್ಞಾನದ ಜಗತ್ತಿನಲ್ಲಿ ಬದುಕುತ್ತಿದ್ದರೂ ಅತೀ ಕಡಿಮೆ ಕಡಿಮೆ ಜನರಿಗೆ ಇದರ ಬಗೆಗೆ ತಿಳಿವಳಿಕೆ ಇದೆ ಹೀಗಾಗಿ ವಿಜ್ಞಾನಿಗಳು ಹೊಸ ಸಂಶೋಧನೆಗಳನ್ನು ಜನರಿಗೆ ತಲುಪಿಸುವ ಬಹುದೊಡ್ಡ ಸವಾಲ್ನು ಎದುರಿಸುತ್ತಿದ್ದಾರೆ ಎಂದು ಬಯೋಕಾನ್ ಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ತಿಳಿಸಿದರು.
ಪ್ರಸ್ತುತ ಜಗತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಜಗತ್ತಿನಲ್ಲಿಯೇ ಬದುಕುತ್ತಿದ್ದರೂ ನಮಗೆಲ್ಲ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅತ್ಯಂತ ಕಡಿಮೆ ತಿಳಿವಳಿಕೆ ಇದೆ. ಭಾರತೀಯರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕೇವಲ ಶೇ.30ರಷ್ಟು ತಿಳಿದುಕೊಂಡಿದ್ದರೆ ಅಮೆರಿಕನ್ನರು ಶೇ.51 ರಷ್ಟು ತಿಳಿದುಕೊಂಡಿದ್ದಾರೆ.
ಕುತೂಹಲಕರ ಸಂಗತಿಯೆಂದರೆ ಜಪಾನಿಯರು ಕೇವಲ ಶೇ.28ರಷ್ಟು ಹಾಗೂ ಚೀನಿಯರು ಶೆ.27ರಷ್ಟು ತಿಳಿದುಕೊಂಡಿದ್ದಾರೆ ಎನ್ನುವುದೇ ಸೋಜಿಗದ ಸಂಗತಿ, ಅದರಲ್ಲೂ ಚೀನಿಯರು ಎಲೆಕ್ಟ್ರಾನ್ ಮತ್ತು ಪರಮಾಣು ವಿಷಯಗಳಲ್ಲಿ ಅತಿ ಕಡಿಮೆ ಜ್ಞಾನವನ್ನು ಹೊಂದಿದ್ದಾರೆ ಎಂದರು.
ಇದು ಭವಿಷ್ಯದಲ್ಲಿ ಅತ್ಯಂತ ಅಪಾಯಕಾರಿ ಏಕೆಂದರೆ ಜನಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಅರಿವು ಇಲ್ಲವೆಂದಾದರೆ ಭವಿಷ್ಯದಲ್ಲಿ ಜಾಗತಿಕ ತಾಪಮಾನ ಪ್ಲಾಸ್ಟಿಕ್ ಬಳಕೆ, ಪರಿಸರ ಮಾಲಿನ್ಯ ಹಾಗೂ ನೀರಿನ ಸಂಗ್ರಹದ ಕೊರತೆ ಹೀಓಗೆ ಜ್ವಲಂತ ಸಮಸ್ಯೆಗಳ ಕುರಿತಂತೆ ಜನರಿಗೆ ಪ್ರಜ್ಞೆಯೇ ಇಲ್ಲವೆಂದಾದರೆ ಭವಿಷ್ಯದಲ್ಲಿ ಕಾರ್ಮೋಡ ಕವಿಯಲಿದೆ ಎಂದೇ ಅರ್ಥ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿ ಇಷ್ಟು ಕಡಿಮೆ ಜನರು ವಿಜ್ಞಾನ ಮತ್ತು ತಂತ್ರಜ್ಞಾನ ತಿಳಿದುಕೊಂಡಿರುವ ಸಂದರ್ಭದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಹೇಗೆ ಬಗೆ ಹರಿಸಬೇಕು ಎಂಬುದು ವಿಜ್ಞಾನಿಗಳ ಸಮುದಾಯದ ಮುಂದೆ ಇರುವ ಬಹುದೊಡ್ಡ ಸವಾಲು ಎಂದ ಅವರು ಜನರನ್ನು ಸುಶಿಕ್ಷಿತಗೊಳಿಸುವುದೆಂದರೆ ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ಮಾಹಿತಿ ಬಿತ್ತುವುದು ಹಾಗೂ ವೈಜ್ಞಾನಿಕ ಅಂಕಿ-ಅಂಶ ಕುರಿತಂತೆ ಜನರಲ್ಲಿ ಪ್ರಜ್ಞೆ ಮೂಡಿಸುವುದು ಎಂದೇ ಅರ್ಥ ಎಂದು ಅವರು ಬಣ್ಣಿಸಿದರು.
ವಿಜ್ಞಾನಿಗಳ ಕೆಲಸ ಬಹುಮುಖ್ಯವಾಗಿರುವುದು ಕೇವಲ ಸಂಶೋಧನೆ, ಅನುಷ್ಠಾನ ಹಾಗೂ ಜ್ಞಾನದ ವರ್ಗಾವಣೆ ಮಾತ್ರವಲ್ಲ ಬದಲಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಸಂಶೋಧನೆಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಮಾಡುವುದು ವಿಜ್ಞಾನಿಗಳ ಮುಂದಿರುವ ಬಹುದೊಡ್ಡ ಸವಾಲಾಗಿದೆ ಎಂದು ಅವರು ವಿಶ್ಲೇಷಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವದಲ್ಲಿ 50 ಜನ ಯುವ ವಿಜ್ಞಾನಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮುಖ್ಯಸ್ಥ ಪಿ. ರಾಮರಾವ್, ನಿರ್ದೇಶಕರಾದ ಅನುರಾಹ್ ಕುಮಾರ್, ಡೀನ್ ಕೇಶವರಾವ್ ಹಾಜರಿದ್ದರು.