ಹೊನ್ನಾಳಿಯಲ್ಲಿ ಕೃಷಿಮೇಳ ಉದ್ಘಾಟಿಸಲಿರುವ ಶಿವರಾಜಕುಮಾರ್
ಬೆಂಗಳೂರು. ಫೆ. 24: ಮುಂದಿನ ತಿಂಗಳು ಮಾರ್ಚ್ 5ರಂದು ಹೊನ್ನಾಳಿಯಲ್ಲಿ ನಡೆಯುವ ರಾಜ್ಯಮಟ್ಟದ ಕೃಷಿಮೇಳವನ್ನು ಹಿರಿಯ ಚಿತ್ರನಟ ಶಿವರಾಜಕುಮಾರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಮಾರ್ಚ್ 5, 6, 7 ರಂದು ಮೂರು ದಿನಗಳ ಕಾಲ ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿ ಮೇಳೆ ನಡೆಯಲಿದೆ. ಹಿರೇಕಲ್ಮಠದ ಶಿವಾಚಾರ್ಯ ಸ್ವಾಮಿಗಳ ಚಂದ್ರಸ್ಮರಣೆ ಅಂಗವಾಗಿ ನಡೆಯಲಿರುವ ಕೃಷಿಮೇಳದ ಮೊದಲ ದಿನ ಚಿತ್ರನಟ ಶಿವರಾಜ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿಮೇಳ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನನ್ನ ಆಪ್ತರು ಎಂದ ರೇಣುಕಾಚಾರ್ಯ
ಪಂಚಪೀಠಾಧೀಶರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎರಡನೆಯ ದಿನ ಮೈಸೂರಿನ ಯದುವೀರ ಒಡೆಯರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಲ್ಲ ಪ್ರಮುಖ ಸಚಿವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಿರೇಕಲ್ಮಠ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿ ಮೇಳ: ದಾವಣಗೇರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಮಠ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿ ಮೇಳೆ ಹಮ್ಮಿಕೊಳ್ಳಲಾಗಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಕೃಷಿಮೇಳ ನಡೆಯಲಿದೆ. ಸಾವಯವ ಕೃಷಿ, ಸಧಾರಿತ ತಳಿಗಳು, ಸುಧಾರಿತ ತಂತ್ರಜ್ಞಾನ, ಇಸ್ರೇಲ್ ಮಾದರಿ ತಾಂತ್ರಿಕತೆ ಸೇರಿದಂತೆ ನೂತನ ಯಂತ್ರೋಪಕರಣ ಪ್ರದರ್ಶನ ನಡೆಯಲಿದೆ ಎಂದಿದ್ದಾರೆ.