''ಫೋನ್ನಲ್ಲಿ ಹಲೋ ಬದಲು ಜೈ ಕಿಸಾನ್ ಎನ್ನಿ''- ಬಿಸಿ ಪಾಟೀಲ್
ಬೆಂಗಳೂರು, ಜೂನ್ 13: ಮೊಬೈಲ್ ಫೋನ್ನಲ್ಲಿ ಮಾತನಾಡುವಾಗ ಹಲೋ ಎಂದು ಮಾತು ಶುರು ಮಾಡುವ ಬದಲು ಜೈ ಕಿಸಾನ್ ಎನ್ನಿ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಇಂದು ಬೆಂಗಳೂರಿನ ಜಿಕೆವಿಕೆಯಲ್ಲಿ ಮಾತನಾಡಿದ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
''ಎಲ್ಲರೂ ಫೋನ್ನಲ್ಲಿ ಮೊದಲು ಹಲೋ ಎಂದು ಹೇಳುತ್ತಾರೆ. ಆದರೆ, ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ವಿಜ್ಞಾನಿಗಳು ಇನ್ನು ಮುಂದೆ ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸಿದಾಗ ಜೈ ಕಿಸಾನ್ ಎಂದು ಹೇಳುವಂತೆ ಆಗಬೇಕು'' ಎಂದು ಅವರು ಹೇಳಿದ್ದಾರೆ.
ಕೃಷಿ ಇಲಾಖೆಯ ಯಡವಟ್ಟು, ರೈತರ ಪರಿಹಾರದ ಹಣ ಏರ್ಟೆಲ್ ಕಂಪನಿಗೆ!
ಈ ವೇಳೆ ರೈತರಿಗೆ ಗುರುತಿನ ಚೀಟಿ ನೀಡುವ ಬಗ್ಗೆ ಅವರು ಮಾಹಿತಿ ನೀಡಿದರು. ರೈತರು ಗುರುತಿನ ಚೀಟಿ ಪಡೆದು, ನಾನು ಭಾರತದ ಸ್ವಾಭಿಮಾನಿ ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದಿದ್ದಾರೆ. ಅಲ್ಲದೆ, ಒಂದೇ ಬೆಳೆಯನ್ನು ಬೆಳೆಯುವುದಕ್ಕಿಂತ ರೈತರು ಬಹು ಬೆಳೆಗಳನ್ನು ಬೆಳೆದು ಲಾಭಗಳಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.
''ವಿಶ್ವ ಅನ್ನ ನೀಡುವ ರೈತನ ಮುಂದೆ ತಲೆಬಾಗಬೇಕು. ಅನ್ನವಿಲ್ಲದೆ ಬದುಕುವುದು ಅಸಾಧ್ಯ. ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತರಿಗೆ ಹತ್ತಿರವಾಗಿ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು'' ಎಂದು ಬಿಸಿ ಪಾಟೀಲ್ ತಿಳಿಸಿದ್ದಾರೆ. ಜೊತೆಗೆ ಅನ್ನದಾತನ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂದು ತಮ್ಮ ಆಶಯ ಹೇಳಿಕೊಂಡಿದ್ದಾರೆ.