ಬೆಂಗಳೂರು ವಾಹನ ದಟ್ಟಣೆ ನಿವಾರಿಸಲು ಸ್ಯಾಟ್ಲೈಟ್ ಟೌನ್ ನಿರ್ಮಾಣ: ಬೊಮ್ಮಾಯಿ
ಬೆಂಗಳೂರು, ಜು. 01: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಸ್ಯಾಟ್ ಲೈಟ್ ಟೌನ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಪಿ.ಎಸ್.ಆರ್. ಬಿಲ್ಡರ್, ಗ್ರಾಸ್ ರೂಟ್, ಎ.ಬಿ.ಎಸ್.ಎಸ್. ಇವರ ಸಹಭಾಗಿತ್ವದಲ್ಲಿ ಗಂಗಾನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಿಸಿ ಸಿಎಂ ಮಾತನಾಡಿದರು.
ಇತ್ತೀಚೆಗಷ್ಟೇ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸಲು ನಿರ್ದೇಶನ ನೀಡಿದ್ದೇನೆ. ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಬೆಂಗಳೂರಿನ ಸಮಗ್ರ ಅಭಿವೃದ್ಧಿಯತ್ತ ನಡೆದಿದ್ದೇವೆ. ಬೆಂಗಳೂರಿನ ದಟ್ಟಣೆ ನಿವಾರಿಸಲು ಸ್ಯಾಟಲೈಟ್ ಟೌನ್ ಗಳ ನಿರ್ಮಾಣ ಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮೂಲಭೂತ ಸೌಕರ್ಯ ಬೆಂಗಳೂರಿನ ನಾಗರಿಕರಿಗೆ ದೊರೆಯಬೇಕು ಎಂಬ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ನಗರವಾಗಿಸಲು ಸರ್ಕಾರ ಸಂಕಲ್ಪ ಮಾಡಿದೆ ಹಾಗೂ ಅದಕ್ಕೆ ಬದ್ಧವಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ.ಗಳ ಕಾಮಗಾರಿಗಳು ಪ್ರಾರಂಭ ವಾಗಿವೆ. ರಾಜಕಾಲುವೆಗಳ ಅಭಿವೃದ್ಧಿ ಗೆ 1600 ಕೋಟಿ ರೂ.ಗಳ ನ್ನು ಒದಗಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಮಂತ್ರಿಗಳು ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದಾರೆ. ಪೆರಿಫೆರಲ್ ರಿಂಗ್ ರೋಡಿಗೆ ಟೆಂಡರ್ ಕರೆಯಲಾಗಿದೆ. ಈ ವರ್ಷ ಕಾಮಗಾರಿ ಪ್ರಾರಂಭವಾಗುತ್ತದೆ. ಮೆಟ್ರೋ ವಿಸ್ತರಣೆಯಾಗುತ್ತಿದೆ. ನಗರದ ಸೌಂದರ್ಯೀಕರಣಕ್ಕೆ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಡವರು ಇರುವ ಸ್ಥಳಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನೇ ನೀಡಿದರು.
ಜನಕ್ಕೆ ಅನುಕೂಲವಾಗುವ ಕಾಮಗಾರಿಗಳಿಗೆ ಆದ್ಯತೆ
ಕಾಲಕಾಲಕ್ಕೆ ರಾಜಕಾಲುವೆ, ರಸ್ತೆ, ಒಳಚರಂಡಿ ವ್ಯವಸ್ಥೆಗಳನ್ನು ಅಭಿವೃದ್ಧಿ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಕಾವೇರಿ 5ನೇ ಹಂತದ ನೀರನ್ನು , ಯುಜಿಡಿ ವ್ಯವಸ್ಥೆ ಯನ್ನು, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ರಸ್ತೆಗಳನ್ನು ಅಭಿವೃದ್ಧಿ ಮಾಡುವುದು ನಮ್ಮ ಮುಂದಿರುವ ಸವಾಲು. ಈ ಸವಾಲನ್ನು ಸ್ವೀಕರಿಸಿದ್ದು, ಈಗಾಗಲೇ ಎಲ್ಲ ಕಡೆ ಕೆಲಸ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಬೆಂಗಳೂರನ್ನು ಸುಂದರ ನಗರವನ್ನಾಗಿಸಲಾಗುವುದು. ಜನಕ್ಕೆ ಅನುಕೂಲವಾಗುವ ಎಲ್ಲ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಎಲ್ಲಾ ವಾರ್ಡ್ಗಳೂ ಅಭಿವೃದ್ಧಿ
ಮುಂದೆ ನಡೆಯಲಿರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಭಾಜಪ ಅಭ್ಯರ್ಥಿಗಳು ಗೆದ್ದು ಜನರ ಸೇವೆಯನ್ನು ಅತ್ಯಂತ ಪ್ರಾಮಾಣಿಕಯಿಂದ ಮಾಡಿದರೆ, ಯೋಜನೆಗಳನ್ನು ವಾರ್ಡುಗಳಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿದರೆ ಖಂಡಿತವಾಗಿಯೂ ಜನರು ನಮ್ಮನ್ನು ಹರಸಿ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಯಾವುದೇ ಬೇಧಭಾವ ಮಾಡದೆ ಎಲ್ಲಾ ವಾರ್ಡುಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
5000 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವುದು ಸಾಮಾನ್ಯ ಕೆಲಸವಲ್ಲ. ಇನ್ನೂ 5 ಸಾವಿರ ವಿದ್ಯಾರ್ಥಿಗಳನ್ನು ಮುಂದಿನ ವರ್ಷ ದತ್ತು ತೆಗೆದುಕೊಳ್ಳಲಾಗುವುದು ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಘೋಷಿಸಿದ್ದಾರೆ. ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ, ದತ್ತು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಜನೆಗೆ ಸಹಾಯ ಮಾಡಿ ಎಲ್ಲರಿಗೂ ಉತ್ತಮ ಭವಿಷ್ಯ ಬರೆಯುವ ಒಬ್ಬ ನಾಯಕರು ಅವರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನಾಯಕನಾಗಲು ಅಧಿಕಾರವೇ ಬೇಕೆಂದಿಲ್ಲ
ಕೆಂಪೇಗೌಡರ 513 ನೇ ಜಯಂತ್ಯೋತ್ಸವ ಅರ್ಥಪೂರ್ಣ ವಾಗಬೇಕು ಹಾಗೂ ಕೆಂಪೇಗೌಡರಿಗೆ ಗೌರವ ಬರುವ ರೀತಿಯಲ್ಲಿ ಆಗಬೇಕೆಂಬ ಕಾರಣದಿಂದ ಈ ಕ್ಷೇತ್ರದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರದ ಮಕ್ಕಳು ಹೆಚ್ಚಿನ ವಿದ್ಯಾವಂತರಾಗಬೇಕು. ಜ್ಞಾನಾರ್ಜನೆ ಮಾಡುವ ಮುಖಾಂತರ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಈ ಕ್ಷೇತ್ರದ ಜನ ಮುಂದೆ ಬಂದರೆ ತನ್ನಿಂದ ತಾನೇ ಈ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎನ್ನುವ ಕಲ್ಪನೆ ಹಾಗೂ ದೂರದೃಷ್ಟಿ ಯಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಈ ಕೆಲಸ ಮಾಡಿದ್ದಾರೆ. ಒಬ್ಬ ವ್ಯಕ್ತಿ ಜನನಾಯಕ ನಾಯಕನಾಗಲು ಅಧಿಕಾರವೇ ಬೇಕೆಂದಿಲ್ಲ. ಜನರ ಪರವಾಗಿ ಚಿಂತನೆ ಮಾಡಿ, ಜನಪರ ಹೋರಾಟ ಮಾಡಿ, ಜನರ ದನಿಯಾಗಿ, ಜನರ ಸಂಕಷ್ಟಕ್ಕೆ ಸಹಾಯ ಮಾಡುವ ಕೆಲಸ ಮಾಡಿದಾಗ ಜನನಾಯಕರಾಗುತ್ತಾರೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಕಾರ್ಯವನ್ನು ಶ್ಲಾಘಿಸಿದರು.
Recommended Video