ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
ಬೆಂಗಳೂರು, ಜನವರಿ 27: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವಿ.ಕೆ. ಶಶಿಕಲಾ ಅವರ ಶಿಕ್ಷೆಯ ಅವಧಿ ಬುಧವಾರ ಅಂತ್ಯಗೊಂಡಿದ್ದು, ಅವರು ಅಧಿಕೃತವಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಕೊರೊನಾ ವೈರಸ್ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವು ದಿನ ಅಲ್ಲಿಯೇ ಇರುವ ಸಾಧ್ಯತೆ ಇದೆ.
ಶಶಿಕಲಾ ಅವರ ಜೈಲು ಶಿಕ್ಷೆಯ ಅವಧಿಯು ಜ. 27ಕ್ಕೆ ಮುಕ್ತಾಯಗೊಂಡಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪರಪ್ಪನ ಅಗ್ರಹಾರದ ಮುಖ್ಯ ಅಧೀಕ್ಷಕರ ಕಾರ್ಯಾಲಯವು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಪತ್ರದಲ್ಲಿ ತಿಳಿಸಿದೆ.
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ 2017ರಲ್ಲಿ ನಾಲ್ಕು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಅವರ ಶಿಕ್ಷೆ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಲಾ ಅವರು ಇನ್ನು ಮುಂದೆ ಕೈದಿಯಾಗಿ ವಿಶೇಷ ಆರೈಕೆ ಹಾಗೂ ಭದ್ರತೆಯೊಂದಿಗೆ ಚಿಕಿತ್ಸೆ ಪಡೆಯದೆ ಸಾಮಾನ್ಯ ರೋಗಿಯಾಗಲಿದ್ದಾರೆ. ಮುಂದೆ ಓದಿ.
ಸಾಮಾನ್ಯ ರೋಗಿಯಾಗಿ ಚಿಕಿತ್ಸೆ
ಶಶಿಕಲಾ ಅವರನ್ನು ಜ. 27ರಂದು ಕಾರಾಗೃಹದಿಂದ ಬಿಡುಗಡೆಗೊಳಿಸಲಾಗುತ್ತಿದೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಮುಂದುವರಿಸುವ ಅವಶ್ಯಕತೆ ಇದ್ದರೆ ಸಾಮಾನ್ಯ ರೋಗಿಯಾಗಿ ಪರಿಗಣಿಸಿ ಚಿಕಿತ್ಸೆ ಮುಂದುವರಿಸಬಹುದು. ಇಲ್ಲವಾದರೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಅವರನ್ನು ಪುನಃ ಜೈಲಿಗೆ ಕಳುಹಿಸುವ ಅವಶ್ಯಕತೆ ಇರುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಪ್ರಕ್ರಿಯೆಗಳಿಗೆ ಸಹಿ
ಪರಪ್ಪನ ಅಗ್ರಹಾರದ ಚೀಫ್ ಸುಪರಿಂಟೆಂಡ್ ಶೇಷಮೂರ್ತಿ ಮತ್ತು ಸುಪರಿಟೆಂಡೆಂಟ್ ಲತಾ ಅವರು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಜಯಂತಿ ಅವರನ್ನು ಭೇಟಿಯಾಗಿ, ಅವರ ನೆರವಿನಿಂದ ಶಶಿಕಲಾ ಬಿಡುಗಡೆಗೆ ಅಗತ್ಯವಾದ ಪ್ರಕ್ರಿಯೆಗಳಿಗೆ ಸಹಿ ಹಾಕಿಸಿದರು.
ಜೈಲಿನಿಂದ ಹೊರಬಂದ ಬಳಿಕ ಎಐಎಡಿಎಂಕೆಗೆ ಮರಳುತ್ತಾರಾ ಶಶಿಕಲಾ?: ಪಳನಿಸ್ವಾಮಿ ಹೇಳಿದ್ದೇನು?
ಶಶಿಕಲಾ ಆರೋಗ್ಯ ಚೇತರಿಕೆ
ಶಶಿಕಲಾ ಅವರ ಆರೋಗ್ಯದ ಕುರಿತು ಬುಧವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ವರದಿ ಬಿಡುಗಡೆ ಮಾಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರ ಹಾಗೂ ಸುಧಾರಣೆಯಾಗಿದೆ. ಅವರು ಚೆನ್ನಾಗಿ ಆಹಾರ ಸೇವಿಸುತ್ತಿದ್ದಾರೆ. ಬೆಂಬಲದ ಸಹಾಯದೊಂದಿಗೆ ಅವರು ನಡೆದಾಡಬಲ್ಲರು ಎಂದು ವರದಿ ತಿಳಿಸಿದೆ. ಕೋವಿಡ್-19 ಶಿಷ್ಟಾಚಾರಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಅದು ಹೇಳಿದೆ.
Recommended Video
ಇಳವರಸಿ, ಸುಧಾಕರನ್
ಶಶಿಕಲಾ ಅವರೊಂದಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅವರ ಆಪ್ತೆ ಇಳವರಸಿ ಕೂಡ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೂ ಕೂಡ ಸಾಮಾನ್ಯ ರೋಗಿಯಾಗಿ ಚಿಕಿತ್ಸೆ ಪಡೆಯಲಿದ್ದಾರೆ. ಇದೇ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಧಾಕರನ್ ಸಹ ಬಿಡುಗಡೆಯಾಗುತ್ತಿದ್ದಾರೆ.