ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ವಿಧಿವಶ
ಬೆಂಗಳೂರು, ಮೇ 25: ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಖ್ಯಾತಿ ಗಳಿಸಿರುವ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ, ಶಾ ವಿಧಿವಶರಾಗಿದ್ದಾರೆ. 84 ವರ್ಷದ ಸುರೇಶ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಶೇಷಾದ್ರಿಪುರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಮಧ್ಯಾಹ್ನ 2.15ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿತಿನ್, ದೀಪಕ್ ಮತ್ತು ಪರೇಶ್ ಎಂಬ ಮೂವರು ಪುತ್ರರನ್ನು ಸುರೇಶ್ ಶಾ ಅಗಲಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಪ್ನಾದ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ 1966ರಲ್ಲಿ ಪುಟ್ಟದಾಗಿ ಸಪ್ನಾ ಬುಕ್ ಹೌಸ್ ಸುರೇಶ್ ಶಾ ಆರಂಭಿಸಿದ್ದರು. ಇಂದು ಅದೇ ಪುಟ್ಟ ಪುಸ್ತಕ ಮಳಿಗೆ ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂದು ಹೆಸರಾಗಿದೆ. 19 ಶಾಖೆಗಳನ್ನು ಹೊಂದಿರುವ ಸಪ್ನಾ ಬುಕ್ ಹೌಸ್, ಕನ್ನಡ ಪುಸ್ತಕಗಳನ್ನು ವ್ಯಾಪಕವಾಗಿ ಓದುಗರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಾಪ:
Recommended Video
ಪ್ರಸಿದ್ಧ ಪುಸ್ತಕ ಮಳಿಗೆ ಹಾಗೂ ಪ್ರಕಾಶನ ಸಂಸ್ಥೆ ಸಪ್ನಾ ಬುಕ್ ಹೌಸ್ ನ ಮಾಲೀಕ ಸುರೇಶ್ ಷಾ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹಾಗೂ ಸಪ್ನಾ ಬುಕ್ ಹೌಸ್ ಮೂಲಕ ಓದಿನ ಸಂಸ್ಕೃತಿಗೆ ಉತ್ತೇಜನ ನೀಡಿದವರು ಎಂದು ಬಿಎಸ್ ಯಡಿಯೂರಪ್ಪ ಸ್ಮರಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸು ವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.