ಲಾಡ್ ವಿಚಾರ, ಸಿಎಂ ವಿರುದ್ಧ ಕೇಸು ಹಾಕ್ತಾರಂತೆ!
ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿ, ಸಿಎಂ ಮತ್ತು ಸಂತೋಷ್ ಲಾಡ್ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಅಗತ್ಯ ದಾಖಲೆಗಳೊಂದಿಗೆ ರಾಜ್ಯಾಪಾಲರಿಗೆ ಮೂರು ಪುಟದ ಪತ್ರ ಬರೆದಿದ್ದಾರೆ.
ಟಿ.ಜೆ.ಅಬ್ರಾಹಂ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಹಾಗೂ ಸಿಇಸಿ ವರದಿಯಲ್ಲಿ ಸಚಿವ ಸಂತೋಷ್ ಲಾಡ್ ಬಳ್ಳಾರಿಯಲ್ಲಿ 1.78 ಕೋಟಿ ರೂ. ಮೌಲ್ಯದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ. ಪ್ರತಿಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಹೋರಾಟ ನಡೆಸಿವೆ ಎಂದು ವಿವರಣೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡದೆ ಅವರಿಗೆ ರಕ್ಷಣೆ ಒದಗಿಸುತ್ತಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಮತ್ತು ಸಂತೋಷ್ ಲಾಡ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಲು ಅನುಮತಿ ಕೋರಿದ್ದಾರೆ.
ಸಚಿವ ಸ್ಥಾನದಲ್ಲಿ ಕುಳಿತಿರುವ ಸಂತೋಷ್ ಲಾಡ್ ಅವರು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ. ಆದರೂ ಸಿಎಂ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿರುವ ಅಬ್ರಾಹಂ, ಇಬ್ಬರ ವಿರುದ್ಧವೂ ದೂರು ನೀಡಲು ಅನುಮತಿ ನೀಡಬೇಕೆಂದು ಕೋರಿ ಮನವಿ ಮಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಲಾಡ್ ವಿವಾದ ರಾಜಭವನದ ಅಂಗಳ ತಲುಪಿದೆ. (ರಾಜಭವನದಲ್ಲೂ ಲಾಡ್ ಸಮರ್ಥಿಸಿಕೊಂಡ ಸಿದ್ದರಾಮಯ್ಯ!)
ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಸಹ ಕೆಲವು ದಿನಗಳ ಹಿಂದೆ ಸಂತೋಷ್ ಲಾಡ್ ವಿರುದ್ಧ ದಾಖಲೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಿ, ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.ನಂತರ ರಾಜಭನವಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಲಾಡ್ ಅವರನ್ನು ಸಮರ್ಥಿಸಿಕೊಂಡಿದ್ದರು. (ಸಂತೋಷ್ ಲಾಡ್ ರಾಜೀನಾಮೆ ರಾಜಭವನದ ಅಂಗಳಕ್ಕೆ!)