ಡಿಕೆಶಿ ಸ್ವಾಗತ, 'ಇವೆಲ್ಲ ಬೇಕಿತ್ತಾ?' ಎಂದ ಸಂತೋಷ್ ಹೆಗ್ಡೆ
ಬೆಂಗಳೂರು, ಅಕ್ಟೊಬರ್ 26: "ಮೊದಲೆಲ್ಲ ಜೈಲಿಗೆ ಹೋದವರನ್ನು ಬಹಿಷ್ಕರಿಸುತ್ತಿದ್ರು. ಈಗ ನೋಡಿದ್ರೆ ಆಡಂಬರದ ಸ್ವಾಗತ ಕೋರ್ತಿದಾರೆ. ಇವೆಲ್ಲ ಬೇಕಿತ್ತಾ?" ಎಂದು ನಿವೃತ್ತ ಲೋಕಾಯುಕ್ತ, ನ್ಯಾ.ಸಂತೋಷ್ ಹೆಗ್ಡೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನ ಕನಕಪುರ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಬಂದ ಮೇಲೆ ಅವರನ್ನು ಬೆಂಗಳೂರಿನಲ್ಲಿ ಆಡಂಬರದಿಂದ ಭರಮಾಡಿಕೊಳ್ಳುತ್ತಿರುವುದನ್ನು ಪರೋಕ್ಷವಾಗಿ ಸಂತೋಷ್ ಹೆಗಡೆ ಟೀಕಿಸಿದ್ದಾರೆ.
ಡಿಕೆ ಶಿವಕುಮಾರ್ ಅವರ ಸ್ವಾಗತಕ್ಕೆ ಸಿದ್ದರಾಮಯ್ಯ ಬರ್ತಾರಾ?
"ಹಿಂದೆಲ್ಲ ಜೈಲಿಗೆ ಹೋಗಿ ಬಂದವರನ್ನು ಬಹಿಷ್ಕರಿಸುತ್ತಿದ್ರು. ಅವರು ಅಪರಾಧಿ ಎಂದು ಸಾಬೀತಾಗದಿದ್ದರೂ ಅವರು ಆರೋಪಿ ಎಂಬ ಕಾರಣಕ್ಕೇ ಬಹಿಷ್ಕರಿಸಲಾಗುತ್ತಿತ್ತು. ಆದರೆ ಈಗ ಜೈಲಿನಿಂದ ಬಂದವರನ್ನು ಆಡಂಬರದಿಂದ ಸ್ವಾಗತಿಸಲಾಗುತ್ತದೆ" ಎಂದು ಸಂತೋಷ್ ಹೆಗ್ಡೆ ಹೇಳಿದರು.
ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ
"ನಾವಿಂದು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ. ಈ ವ್ಯವಸ್ಥೆಯನ್ನು ಬದಲಾಯಿಸುವುದು ಜನರ ಕೆಲಸ. ಅದಕ್ಕಾಗಿ ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಜನರಿಗೂ ದುರಾಸೆ, ಅಧಿಕಾರಿಗಳಿಗೂ ದುರಾಸೆ" ಎಂದು ಸಂತೋಷ್ ಹೆಗ್ಡೆ ಹೇಳಿದರು.
ಸರ್ಕಾರದ ಪಾತ್ರವಿಲ್ಲ
"ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಜಾಮೀನು ತಿರಸ್ಕಾರವಾಗಿರುವುದರಲ್ಲಿ ಸರ್ಕಾರದ ಪಾತ್ರವಿಲ್ಲ. ರಾಜಕೀಯ ಉದ್ದೇಶದಿಂದ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ತಪ್ಪು ಕಲ್ಪನೆ. ಈ ಪರಿಸ್ಥಿತಿಯಲ್ಲಿ ಉತ್ತಮ ಬೆಳವಣಿಗೆ ಎಂದರೆ ಹಿಂದಿನ ಸರಕಾರ ಮಾಡಿದ್ದಂತಹ ನ್ಯೂನ್ಯತೆಯ ಈ ಸರ್ಕಾರ ಎತ್ತಿ ತೋರಿಸುತ್ತಿದೆ" ಎಂದು ಕಳೆದ ಸೆಪ್ಟೆಂಬರ್ ನಲ್ಲೂಡಿಕೆಶಿ ಅವರ ಜಾಮೀನು ಅರ್ಜಿ ತಿರಸ್ಕಾರವಾದಾಗ ಹೆಗ್ಡೆ ಹೇಳಿದ್ದರು.
ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಡಿಕೆಶಿ 'ಹೊತ್ತು ಮೆರೆಸಲು' ಏನಿದು ಅಪಸ್ವರ?
ಭ್ರಷ್ಟರನ್ನು ಪೂಜಿಸಬೇಡಿ
"ಏಕ ವ್ಯಕ್ತಿಪೂಜೆಯನ್ನಾದರೂ ಒಪ್ಪಿಕೊಳ್ಳಬಹುದು. ಆದರೆ ಭ್ರಷ್ಟರನ್ನು ಪೂಜಿಸುವುದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಭ್ರಷ್ಟರ ಪೂಜೆ ಮಾಡಬೇಡಿ. ಆರೋಪ ತಪ್ಪೋ, ಸರಿಯೋ ಎಂಬುದನ್ನು ಸಾಬೀತುಪಡಿಸಲು ಕಾನೂನಿಗೆ ಅವಕಾಶ ನೀಡಿ. ಅಲ್ಲಿಯವರೆಗೂ ಅವರನ್ನು ಹೊತ್ತು ಮೆರೆಯುವುದು ಸರಿಯಲ್ಲ" ಎಂದು ಹೆಗ್ಡೆ ಹೇಳಿದರು.
ದೆಹಲಿ ಹೈಕೋರ್ಟ್ ನಿಂದ ಜಾಮೀನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ರನ್ನು ಸೆಪ್ಟೆಂಬರ್ 3ರಂದು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು. ನಂತರ ಹಲವು ದಿನಗಳ ಕಾನೂನು ಹೋರಾಟದ ನಂತರ ಅಕ್ಟೋಬರ್ 23 ರಂದು ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.